ಪ್ರತಿ ಹೆಕ್ಟೇರಿಗೆ ೫೦ ಸಾವಿರ ರೂ. ಪರಿಹಾರ ನೀಡಿ
ಕೊಪ್ಪಳ: ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ಕಳಚಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು. ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಪ್ರತಿ ಹೆಕ್ಟೇರ್ಗೆ ೫೦ ಸಾವಿರ ರೂ. ಪರಿಹಾರ ಒದಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಕ್ಟಸ್ಟ್ ಗೇಟ್ ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರ ಗೇಟ್ ಕಳಚಿ ಬಿದ್ದಿರುವುದು ಈ ಭಾಗದ ಜನರಿಗೆ ಆಘಾತ ಉಂಟಾಗಿದೆ. ಅಧಿಕಾರಿಗಳು ಸರಿಯಾಗಿ ಕ್ರಮ ವಹಿಸದಿರುವುದಕ್ಕೆ ಸಮಸ್ಯೆ ಉದ್ಭವಿಸಿದೆ. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ಗಮನಿಸಿದ್ದು, ಯಾರು ಹೊಣೆ ಅಲ್ಲ ಎಂದಿರುವುದು ಜಲ ಸಚಿವರಿಗೆ ಜಲ ಮತ್ತು ರೈತರ ಬಗ್ಗೆ ಆಸಕ್ತಿ ಇಲ್ಲ. ಸಂಪನ್ಮೂಲದ ಬಗ್ಗೆ ಮಾತ್ರ ಆಸಕ್ತಿ ಇದೆ ಎಂದು ದೂರಿದರು.
ಜಲಾಶಯದಿಂದ ನದಿಗೆ ೬೦ ಟಿಎಂಸಿ ನೀರು ಹರಿಸಬೇಕಿದ್ದು, ರಾಜ್ಯ ಸರ್ಕಾರದ ಹೊಣೆಗೇಡಿತನವಾಗಿದೆ. ಒಂದು ವರ್ಷದಿಂದ ಟಿ.ಬಿ. ಬೋರ್ಡಿಗೆ ಚೀಫ್ ಇಂಜಿನಿಯರ್ ನೇಮಕ ಮಾಡಿಲ್ಲ ಏಕೆ? ಎಂದು ಪ್ರಶ್ನಿಸಿ, ಮನ ಬಂದಂತೆ ಮಾತನಾಡಬೇಡಿ. ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಮತ್ತು ನಾವು ರಾಜಕೀಯ ಮಾಡಲು ಜಲಾಶಯಕ್ಕೆ ಬಂದಿಲ್ಲ. ನಿಮ್ಮಿಂದ ಲೋಪದೋಷ ಆಗಿದೆ. ಸಂಕಷ್ಟದಲ್ಲಿ ಸಿಲುಲಿದ ರೈತರ ಬಗ್ಗೆ ನಮ್ಮ ಆಸಕ್ತಿ ಇದೆ. ಅವರಿಗೆ ಸ್ಪಂದಿಸಲು ಬಂದಿದ್ದೇವೆ ಎಂದು ತಿಳಿಸಿದರು.