For the best experience, open
https://m.samyuktakarnataka.in
on your mobile browser.

ಪ್ರಶಸ್ತಿ ವಾಪಸ್ ಪಡೆದಿಲ್ಲ

11:04 PM Sep 05, 2024 IST | Samyukta Karnataka
ಪ್ರಶಸ್ತಿ ವಾಪಸ್ ಪಡೆದಿಲ್ಲ

ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರದ ಪ್ರಾಂಶುಪಾಲ ರಾಮಕೃಷ್ಣ ಜಿ.ಬಿ. ಅವರಿಗೆ ಘೋಷಣೆ ಮಾಡಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ವಾಪಸ್ ಪಡೆದಿಲ್ಲ. ತಡೆಹಿಡಿಯಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಮಕೃಷ್ಣ ಜಿ.ಬಿ. ಅವರ ಹೆಸರನ್ನೂ ಕೂಡಾ ಪ್ರಶಸ್ತಿಗೆ ಘೋಷಣೆ ಮಾಡಲಾಗಿತ್ತು. ಆದರೆ, ಹಿಜಾಬ್ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್‌ನಲ್ಲಿಯೇ ತಡೆದಿದ್ದು ಇವರೇ ಎನ್ನುವುದು ಗೊತ್ತಾಗುತ್ತಿದ್ದಂತೆ ರಾಜ್ಯ ಸರ್ಕಾರ ಇವರಿಗೆ ಘೋಷಣೆ ಮಾಡಿದ್ದ ಪ್ರಶಸ್ತಿಯನ್ನು ತಡೆಹಿಡಿಯಲಾಗಿದೆ. ರದ್ದು ಮಾಡಿಲ್ಲ ಎಂದರು.
ಪ್ರಾಂಶುಪಾಲ ರಾಮಕೃಷ್ಣ ಜಿ.ಬಿ. ಅವರ ವರ್ತನೆ ಕುರಿತು ಪರಿಶೀಲನೆ ಮಾಡಿ ಅಧಿಕಾರಿಗಳು ವರದಿ ನೀಡುತ್ತಾರೆ. ನಂತರವೇ ಪ್ರಶಸ್ತಿ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಪ್ರಶಸ್ತಿ ವಿಷಯವಾಗಿ ಬಿಜೆಪಿಯವರು ಇಲ್ಲದ ರಾಜಕಾರಣ ಮಾಡುತ್ತಿದ್ದಾರೆ. ನಾವು ಪ್ರಶಸ್ತಿ ರದ್ದು ಮಾಡಿದ್ದಿದ್ದರೆ ಆಗ ಪ್ರಶ್ನೆ ಮಾಡಲಿ. ನಾವು ರದ್ದು ಮಾಡಿಲ್ಲ. ತಡೆ ಹಿಡಿದಿದ್ದೇವೆ. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.