For the best experience, open
https://m.samyuktakarnataka.in
on your mobile browser.

ಫ್ರೀ ಬಸ್‌ನಲ್ಲಿ ಎಲ್ಲೆಲ್ಲೋ ಹೋಗ್ತಾವ್ರೆ…

09:58 PM Apr 25, 2024 IST | Samyukta Karnataka
ಫ್ರೀ ಬಸ್‌ನಲ್ಲಿ ಎಲ್ಲೆಲ್ಲೋ ಹೋಗ್ತಾವ್ರೆ…

ಬೆಂಗಳೂರು: ಫ್ರಿ ಬಸ್ ಕೊಟ್ರು ಅಂತ ಹೆಣ್ ಮಕ್ಕಳು ಎಲ್ಲೆಲ್ಲೋ ಹೋಗ್ತಾವ್ರೆ ಎನ್ನುವುದರ ಮೂಲಕ ಬಿಜೆಪಿ ನಾಯಕಿ, ಚಿತ್ರನಟಿ ಶ್ರುತಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಅವರು ಹಲವು ಕಡೆಗಳಲ್ಲಿ ಗಂಡಂದಿರು ಮನೆಯಲ್ಲಿ ಅಳುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಹಸಿವಿನಿಂದ ಇದ್ದಾರೆ. ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹೆಣ್ಣುಮಕ್ಕಳು ಜುಟ್ಟುಹಿಡಿದುಕೊಂಡು ಹೊಡೆದುಕೊಳ್ಳುತ್ತಿದ್ದಾರೆ ಅಂತ ಆರೋಪಿಸಿದ್ದರು.
ಇನ್ನೂ ಹಲವು ಮಂದಿ ಶ್ರುತಿ ಅವರ ಹೇಳಿಕೆ ನೋಡಿ ಅವರ ವೈಯುಕ್ತಿಕ ಜೀವನದ ಬಗ್ಗೆ ಕೂಡ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿ ವೈಯಕ್ತಿಕ ಜೀವನದ ಕುರಿತು ಹೇಳುವುದು ತಪ್ಪು ಎಂದು ಹೇಳಿದ್ದಾರಲ್ಲದೆ, ಉಚಿತ ಬಸ್ ಸೇವೆ ಸಿಕ್ಕಿರುವಾಗ ಕೆಲವು ಹೆಣ್ಣು ಮಕ್ಕಳು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾಡಿಕೊಳ್ಳಲಿ ಬಿಡಿ. ಇದರಿಂದ ಸಮಸ್ಯೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ನೋಟಿಸ್ ಜಾರಿ
ಶಕ್ತಿ ಯೋಜನೆ ಕುರಿತಂತೆ ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ಆಡಿರುವ ಮಾತಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಮನೋಹರ್ ನೀಡಿರುವ ದೂರನ್ನು ಆಧರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಬಿಜೆಪಿ ನಾಯಕಿ, ನಟಿ ಶ್ರುತಿ ಅವರಿಗೆ ನೋಟಿಸ್ ಜಾರಿ ಮಾಡಿ ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.