For the best experience, open
https://m.samyuktakarnataka.in
on your mobile browser.

ಬಸವಣ್ಣ ಪ್ರತಿಮೆ ಸ್ಥಾಪನೆಯಲ್ಲೂ ಹಣ ದುರುಪಯೋಗ?

03:17 PM Jun 09, 2024 IST | Samyukta Karnataka
ಬಸವಣ್ಣ ಪ್ರತಿಮೆ ಸ್ಥಾಪನೆಯಲ್ಲೂ ಹಣ ದುರುಪಯೋಗ

ಎನ್.ಎಂ.ಬಸವರಾಜ್
ಚಿತ್ರದುರ್ಗ: ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಮೂರ್ತಿಪೂಜೆ ವಿರೋಧಿಸಿಕಾಯಕವೇ ಕೈಲಾಸ’ ಎಂಬ ಸಂದೇಶ ಸಾರಿದ ಮಾನವತಾವಾದಿ ವಿಶ್ವಗುರು ಬಸವಣ್ಣನ ಕಂಚಿನ ಪ್ರತಿಮೆ ಸ್ಥಾಪಿಸಲು ಸರ್ಕಾರ ಹಾಗೂ ಭಕ್ತರು ನೀಡಿದ ಕೋಟಿ ಕೋಟಿ ಹಣ ದುರುಪಯೋಗವಾಗಿದೆ ಎಂಬ ಗುಸುಗುಸು ಶುರುವಾಗಿದೆ. ಸರ್ಕಾರ ನೀಡಿದ ಹಣಕ್ಕೂ ಲೆಕ್ಕ ಇಲ್ಲ, ಇನ್ನು ಭಕ್ತರು ನೀಡಿದ ಹಣಕ್ಕಂತೂ ಲೆಕ್ಕವೇ ಇಲ್ಲ.
ಇಲ್ಲಿನ ಮುರುಘಾ ಮಠದಲ್ಲಿ ೩೭೫ ಅಡಿ ಎತ್ತರದಲ್ಲಿ ನಿರ್ಮಿಸುತ್ತಿರುವ ಬಸವೇಶ್ವರ ಪ್ರತಿಮೆಗೆ ಭಕ್ತರು ಲಕ್ಷ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇದರ ಜೊತೆಗೆ ಸರ್ಕಾರ ಕೂಡ ೩೫ ಕೋಟಿ ರೂ. ನೀಡಿದೆ. ಎಲ್ಲ ಹಣ ಖರ್ಚಾಗಿದೆ. ಖರ್ಚಾದ ಹಣಕ್ಕೂ ಕಾಮಗಾರಿಗೂ ತಾಳೆಯಾಗುತ್ತಿಲ್ಲ. ಕಾಮಗಾರಿ ಪ್ರಮಾಣ ನೋಡಿದರೆ ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಮಾಜಿ ಸಚಿವ ಎಚ್.ಏಕಾಂತಯ್ಯ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ `ಬಸವೇಶ್ವರ ಪ್ರತಿಮೆ’ಗೆ ಸರ್ಕಾರ ನೀಡಿದ ಅನುದಾನ ದುರ್ಬಳಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿ ನೇತೃತ್ವದ ಸಮಿತಿ ರಚಿಸಲಾಯಿತು. ಸಮಿತಿ ಸ್ಥಳಕ್ಕೆ ಭೇಟಿ ನೀಡಿದಾಗ ಅಚ್ಚರಿ ಕಾದಿತ್ತು.
೧೨ ವರ್ಷಗಳಿಂದ ನಡೆದಿರುವ ಕಾಮಗಾರಿ ಪ್ರಗತಿ ಹಣಕಾಸು ಖರ್ಚಿಗೆ ಹೋಲಿಕೆಯಾಗಲಿಲ್ಲ. ಬಸವೇಶ್ವರ ಪ್ರತಿಮೆ ನಿರ್ಮಾಣ ಕಾಮಗಾರಿ ಪ್ರಗತಿ ಸಾಧಿಸಿದ್ದು ತೃಪ್ತಿದಾಯಕವಾಗಿಲ್ಲ. ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ವಿರಳ ಎಂಬ ಅನುಮಾನವನ್ನೂ ಸಮಿತಿಯ ವರದಿಯಲ್ಲಿ ವ್ಯಕ್ತಪಡಿಸಿರುವುದು
ಹಣ ದುರುಪಯೋಗ ಆಗಿರುವುದಕ್ಕೆ ಪುಷ್ಠಿ ನೀಡಲಿದೆ.
ಬಸವೇಶ್ವರ ಪ್ರತಿಮೆಯನ್ನು ೨೮೦.೨ ಕೋಟಿ ರೂ. ಯೋಜನಾ ವೆಚ್ಚದಲ್ಲಿ ಮುರುಘಾ ಮಠ ಕೈಗೆತ್ತಿಕೊಂಡಿದೆ. ಪೀಠಕ್ಕೆ ೯೦.೨ ಕೋಟಿ ಹಾಗೂ ಪ್ರತಿಮೆಗೆ ೧೯೦ ಕೋಟಿ ವಿನಿಯೋಗಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿದೆ. ರಾಜ್ಯ ಸರ್ಕಾರ ಪ್ರತಿಮೆಗೆ ೨೦೧೧ರಿಂದ ೨೦೨೩ರವರೆಗೆ ಒಟ್ಟು ೪೦ ಕೋಟಿ ಅನುದಾನ ನೀಡಿದೆ. ಇದರಲ್ಲಿ ೩೫ ಕೋಟಿಯನ್ನು ಮುರುಘಾ ಮಠಕ್ಕೆ ಹಸ್ತಾಂತರಿಸಲಾಗಿದ್ದು, ೫ ಕೋಟಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ೨೪.೫ ಕೋಟಿ ಅನುದಾನ ವೆಚ್ಚ ಮಾಡಿರುವ ಬಗ್ಗೆ ಸರಿಯಾದ ದಾಖಲೆ ಮಾಹಿತಿ ನೀಡಿಲ್ಲ. ಹಣ ಖರ್ಚಾದ ಮೇಲೆ ಯಾವುದಕ್ಕೆ ಎಷ್ಟು ಹಣ ಎಂಬುದನ್ನು ಎಲ್ಲಿಯೂ ಮಠ ತಿಳಿಸಿಲ್ಲ. ಮಠದ ಬ್ಯಾಂಕ್ ಖಾತೆಯಿಂದ ಹಲವು ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಹಣ ಪಾವತಿಯಾಗಿದೆ. ಆದರೆ ಪ್ರತಿಮೆಗೆ ಖರ್ಚಾದ ಹಣ ಎಂಬುದಕ್ಕೆ ಯಾವುದೇ ಖಚಿತ ದಾಖಲೆ ಇಲ್ಲ. ಇವುಗಳನ್ನು ಅಪರ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ವರದಿಯಲ್ಲಿ ತಿಳಿಸಿದೆ.

ಲೋಕೋಪಯೋಗಿ ಇಲಾಖೆ ವರದಿ
ಕಾಮಗಾರಿ ತೀವ್ರ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಪರ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಇದೀಗ ಲೋಕೋಪಯೋಗಿ ಇಲಾಖೆಗೆ ತಾಂತ್ರಿಕ ವರದಿ ನೀಡುವಂತೆ ಸೂಚಿಸಿದೆ. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಎಷ್ಟು ಹಣಕ್ಕೆ ಎಷ್ಟು ಕಾಮಗಾರಿ ಮಾಡಲಾಗಿದೆ ಎಂಬ ವರದಿ ನೀಡಿದ ಮೇಲೆ ಸತ್ಯಾಂಶ ಬಯಲಾಗಲಿದೆ.