For the best experience, open
https://m.samyuktakarnataka.in
on your mobile browser.

ಬಸವ ತತ್ವ ಇಂದು ಹೆಚ್ಚು ಪ್ರಸ್ತುತ….

03:30 AM May 10, 2024 IST | Samyukta Karnataka
ಬಸವ ತತ್ವ ಇಂದು ಹೆಚ್ಚು ಪ್ರಸ್ತುತ…

ಮೇ ೧೦, ವಿಶ್ವದಲ್ಲೆಡೆ ಸಂಭ್ರಮದಿಂದ ಬಸವಣ್ಣವರ ಜಯಂತಿಯನ್ನು ಆಚರಿಸಲಾಗುತ್ತಿದೆ. ವಿಶ್ವಗುರು ಬಸವಣ್ಣನವರು ಈ ಜಗತ್ತು ಕಂಡಂತಹ ಅಪ್ರತಿಮ ದಾರ್ಶನಿಕರು, ಸಮಾಜ ಸುಧಾರಕರು ಮಾತ್ರವಲ್ಲ ಹೊಸ ಸಮಾಜದ ನಿರ್ಮಾಪಕರು. ೮೫೦ ವರ್ಷಗಳ ಹಿಂದೆ ಅವರು ಕೈಗೊಂಡ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಕ್ರಾಂತಿಯು ಇಂದಿಗೂ ಸಹ ಇಡೀ ಜಗತ್ತಿಗೆ ಆದರ್ಶ ಪ್ರಾಯವಾಗಿದೆ.
ವೀರಶೈವ ಲಿಂಗಾಯತ ಸಮಾಜದ ಸಾಮೂಹಿಕ ಜಾಗೃತಿಗೆ ಒಂದು ವೇದಿಕೆಯನ್ನು ನಿರ್ಮಿಸುವ ಉದ್ದೇಶದಿಂದ ದಾವಣಗೆರೆಯ ವಿರಕ್ತಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಮೃಜ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಹರ್ಡೇಕರ ಮಂಜಪ್ಪನವರ ಪ್ರೇರಣೆಯಿಂದ ೧೩, ಮೇ ೧೯೧೨ ರಲ್ಲಿ ಬಸವ ಜಯಂತಿ' ಉತ್ಸವವನ್ನು ಸಾರ್ವತ್ರಿಕವಾಗಿ ಆಚರಿಸಲು ಆರಂಭಿಸಿದರು. ಮುಂದೆ ಪ್ರೊ. ಶಿ.ಶಿ. ಬಸವನಾಳರೂ ಮೊದಲ್ಗೊಂಡು ಹಲವಾರು ಸಮಾನ ಮನಸ್ಕರು ಉತ್ತರ ಕರ್ನಾಟಕದ ವಿವಿಧ ಕಡೆಗಳಲ್ಲಿಬಸವ ಜಯಂತಿ' ಆಚರಣೆಗೆ ವ್ಯಾಪಕವಾದ ಪ್ರಚಾರ ದೊರಕಿಸಿಕೊಟ್ಟರು. ಸಮಾಜದ ಜನರಲ್ಲಿ ಐಕ್ಯತೆಯನ್ನು ಮೂಡಿಸಿ, ಪ್ರಚಲಿತ ಸಮಸ್ಯೆಗಳ ಚಿಂತನ ಮಾಡುವ ಉದ್ದೇಶದಿಂದ ಆರಂಭಗೊಂಡ ಬಸವ ಜಯಂತಿ ಇಂದು ನಾಡಿನಾದ್ಯಂತ ಆಚರಣೆಯಲ್ಲಿದೆ.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಗಳನ್ನು, ಗೋಷ್ಠಿಗಳನ್ನು, ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ. ಮಹಾರಾಷ್ಟç-ಆಂಧ್ರ-ತಮಿಳುನಾಡುಗಳಲ್ಲಿ ಹಾಗೂ ದೇಶದ ವಿವಿಧೆಡೆಗೆ ಅತ್ಯಂತ ಸಂಭ್ರಮದಿಂದ ಬಸವ ಜಯಂತಿಯನ್ನು ಆಚರಿಸುತ್ತಿರುವುದು ಅಭಿಮಾನದ ಸಂಗತಿ.
ವಿಶ್ವಸಂದೇಶವನ್ನು ನೀಡಿದ ಅಣ್ಣನವರ ಪ್ರತಿಮೆಯನ್ನು ಲಂಡನ್ ಬ್ರಿಟಿಷ್ ಪಾರ್ಲಿಮೆಂಟಿನ ಎದುರು ಥೇಮ್ಸ್ ನದಿಯದಡದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆಯನ್ನು ೧೪ ನವೆಂಬರ್ ೨೦೧೫ ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದು ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ಭಾರತದ ಸಂಸತ್ತಿನಲ್ಲಿಯೂ ಬಸವೇಶ್ವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಮಾತ್ರವಲ್ಲದೇ ಬಸವಣ್ಣನವರ ಭಾವಚಿತ್ರ ಹೊಂದಿರುವ ನಾಣ್ಯವನ್ನು ಹೊರಡಿಸಿದ್ದು ವಿಶೇಷ. ವಚನ' ಹೆಸರಿನಬಹುಭಾಷಾ ವಚನ ಅನುವಾದ' ಕೃತಿಗಳು ಡಾ. ಎಂ.ಎಂ. ಕಲಬುರ್ಗಿಯವರ
ಸಂಪಾದಕತ್ವದಲ್ಲಿ ೨೦೧೨ ರಲ್ಲಿ ಪ್ರಕಟಗೊಂಡಿವೆ. ೨೩ ಭಾಷೆಗಳಲ್ಲಿ ಹಾಗೂ ೨೫೦೦ ವಚನಗಳನ್ನು ಅನುವಾದಿಸಲಾಗಿದೆ.
ಬಸವಣ್ಣ ಇಂದು ಪ್ರಸ್ತುತ…
ಅತ್ಯಂತ ಮುಖ್ಯವಾಗಿ ಈ ದಿನಮಾನದಲ್ಲಿ ಜಗತ್ತಿನಲ್ಲೆಡೆ ಯುದ್ಧದ ವಾತಾವರಣ ಇದೆ. ಮಾನವನ ಸ್ವಾರ್ಥ ಕೇಂದ್ರೀಕೃತ ಚಿಂತನೆಗಳು ಇಂತಹ ಭಯದ ವಾತಾವರಣ ನಿರ್ಮಾಣ ಮಾಡಿದೆ. ಜಗತ್ತಿನ ಅನೇಕ ದೇಶಗಳಲ್ಲಿ ಮನುಷ್ಯರಿಗೆ ಕನಿಷ್ಠ ಸೌಕರ್ಯಗಳೂ ಇಲ್ಲವಾಗಿವೆ. ಇಂತಹ ಅಶಾಂತಿ ತುಂಬಿದ ಜಗತ್ತಿಗೆ ಶಾಂತಿ-ಸಮಾಧಾನ-ಸಾಂತ್ವದ ಅವಶ್ಯಕತೆ ಇದೆ. ಅದಕ್ಕಾಗಿ ಬಸವತತ್ವ ಹಿಂದೆಂದಿಗಿಂತಲೂ ಇವತ್ತು ಹೆಚ್ಚು ಪ್ರಸ್ತುತವಾಗಿದೆ. ಬಹುಶಃ ಬಸವಣ್ಣನವರ ಸಿದ್ಧಾಂತದ "ಇವನಮ್ಮವ ಇವನಮ್ಮವ" ಎಂದೆನಿಸಿ, ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬಾಳಿದರೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವುದರಲ್ಲಿ ಸಂಶಯವೇ ಇಲ್ಲ.
ಇವತ್ತು ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಎಂಬುದು ಇಲ್ಲದಾಗಿದೆ. ಆದರೆ ಭಾರತದಲ್ಲಿ ಈ ಪ್ರಜಾಪ್ರಭುತ್ವವನ್ನು ಮೊಟ್ಟ ಮೊದಲಬಾರಿಗೆ ಜಾರಿಗೆ ತಂದವರು ಬಸವಾದಿ ಶರಣರು. ಬಹುಶಃ ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಪ್ರಥಮ ಬೀಜಬಿತ್ತಲ್ಪಟ್ಟಿದ್ದು
ಕನ್ನಡದ ನೆಲದಲ್ಲಿ. ಅದು ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಮೊಟ್ಟಮೊದಲ ಸಂಸತ್ತಿನ ಮಾದರಿಯಾದ ಅನುಭವಮಂಟಪ'ದಿಂದ ಯಾವಮಾಗ್ನಾಕಾರ್ಟ್' ವನ್ನು ಪ್ರಜಾಪ್ರಭುತ್ವದ ಪ್ರಥಮ ದಾಖಲೆ ಎಂದು ಜಗತ್ತು ನಂಬಿದೆಯೋ, ಅದಕ್ಕಿಂಲೂ ೫೦-೬೦ ವರ್ಷಗಳಷ್ಟು ಹಿಂದೆಯೆ ಅನುಭವಮಂಟಪ' ಅಸ್ತಿತ್ವದಲ್ಲಿತ್ತು. ಅಲ್ಲಿ ಸಮಾಜದ ಎಲ್ಲಾ ವರ್ಗದ ಜಾತಿಯ ಜನರು ಸಮಾಜ-ಧರ್ಮ-ಅಧ್ಯಾತ್ಮದ ಚಿಂತನೆಯನ್ನು ಮಾಡುತ್ತಿದ್ದರು ಎಂದರೆ ಇದು ಅತ್ಯಂತ ಹೆಮ್ಮೆ-ಗೌರವದ ಸಂಗತಿ. ಆದರೆ ದುರಾದೃಷ್ಟವಶಾತ್ ಇಂದಿನ ಯುವ ಜನಾಂಗಕ್ಕೆ ಇದರ ಕಲ್ಪನೆ ಇಲ್ಲ. ಹೀಗಾಗಿ ನಮ್ಮ ಮೇಲೆ ಸಂಸ್ಥೆಗಳ ಮೇಲೆ ದೊಡ್ಡ ಜವಾಬ್ದಾರಿಯೂ ಇದೆ. ಮುಂದಿನ ಜನಾಂಗಕ್ಕೆ ಈ ಬಸವತತ್ವವನ್ನು ಕೊಂಡೊಯ್ಯಬೇಕಾಗಿರುವ ತುರ್ತು ಅಗತ್ಯವಿದೆ. ಇಲ್ಲವಾದರೆ ನಮ್ಮ ಯುವ ಜನಾಂಗನಮ್ಮ ಸಂಸ್ಕೃತಿಯಿಂದ ದೂರವಾಗಿ ಬಿಡುತ್ತಾರೆ. ಅಲ್ಲದೇ ಬಸವಣ್ಣನವರ ತತ್ವ ಸಾಹಿತ್ಯ ಎಲ್ಲರಿಗೂ ಎಲ್ಲಾ ಧರ್ಮದವರಿಗೂಬೇಕು. ನಿಜವಾದ ಅರ್ಥದಲ್ಲಿ ಬಸವಣ್ಣನವರು ನಮ್ಮಸಾಂಸ್ಕೃತಿಕ ನಾಯಕ' ಆಗಿದ್ದಾರೆ. ಅವರ ತತ್ವಗಳನ್ನು ಪಾಲಿಸುವ ಮೂಲಕ ನಮ್ಮ ಸಂಸ್ಕೃತಿ ಉಳಿಸಲು ನಾವೆಲ್ಲ ಯತ್ನಿಸಬೇಕು. ಅಂದಾಗ ಮಾತ್ರ ನಾವು ಉಳಿಯುತ್ತೇವೆ.

ಡಾ. ಪ್ರಭಾಕರಕೋರೆ
ಕಾರ್ಯಾಧ್ಯಕ್ಷರು
ಕೆಎಲ್‌ಇ ಸಂಸ್ಥೆ, ಬೆಳಗಾವಿ