For the best experience, open
https://m.samyuktakarnataka.in
on your mobile browser.

ಬಿಜೆಪಿ ಭದ್ರಕೋಟೆ ಭಾಗ್ಯನಗರ 'ಕೈ' ವಶ

05:46 PM Aug 22, 2024 IST | Samyukta Karnataka
ಬಿಜೆಪಿ ಭದ್ರಕೋಟೆ ಭಾಗ್ಯನಗರ  ಕೈ  ವಶ

ಕೊಪ್ಪಳ: ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಗುರುವಾರ ನಡೆಸಿದ್ದು, ಅಧ್ಯಕ್ಷರಾಗಿ ತುಕಾರಾಮಪ್ಪ ಗಡಾದ ಮತ್ತು ಉಪಾಧ್ಯಕ್ಷರಾಗಿ ಹೊನ್ನುರಸಾಬ್ ಬೈರಾಪೂರ ಆಯ್ಕೆಯಾಗುವ ಮೂಲಕ ಬಿಜೆಪಿ ಭದ್ರಕೋಟೆಯಲ್ಲಿ ಕೈ ಮೇಲಾಗಿದೆ.

೧೯ ಸದಸ್ಯ ಬಲದ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ೮ ಜನ ಕಾಂಗ್ರೆಸ್ ಸದಸ್ಯರು, ೯ ಜನ ಬಿಜೆಪಿ ಸದಸ್ಯರು, ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಗಾದಿಗೆ ತುಕಾರಾಮಪ್ಪ ಗಡಾಡ ಮತ್ತು ಹೊನ್ನುರಸಾಬ್ ಬೈರಾಪುರ ಇಬ್ಬರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಕೊನೆಗೆ ಶಾಸಕ, ಸಂಸದರು, ಪಕ್ಷದ ವರಿಷ್ಠರು ಹೊನ್ನುರಸಾಬ್ ಬೈರಾಪೂರ ಮನವೊಲಿಸಿದರು. ಇದರಿಂದಾಗಿ ತುಕಾರಾಮಪ್ಪ ಗಡಾಡ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹೊನ್ನುರಸಾಬ್ ಬೈರಾಪುರ ಸ್ಪರ್ಧೆ ಮಾಡಿದರು.

೮ ಜನ ಕಾಂಗ್ರೆಸ್ ಸದಸ್ಯರು, ಇಬ್ಬರು ಪಕ್ಷೇತರರು ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಸಂಸದ ಕೆ.ರಾಜಶೇಖರ ಹಿಟ್ನಾಳ್ ಮತ ಸೇರಿ ಒಟ್ಟು ತಲಾ ೧೨ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ತುಕಾರಾಮಪ್ಪ ಗಡಾದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಪಟ್ಟ ಅಲಂಕರಿಸಿದರು. ಇನ್ನೂ ಹೊನ್ನುರಸಾಬ್ ಬೈರಾಪೂರ ಉಪಾಧ್ಯಕ್ಷ ಗಾದಿಗೆ ಏರಿದರು. ಇನ್ನೂ ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ವಾಸುದೇವ್ ಮೇಘರಾಜ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಶುರಾಮ್ ನಾಯಕ್ ಸ್ಪರ್ಧೆ ಮಾಡಿ, ತಲಾ ೯ ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ವಿಠ್ಠಲ್ ಚೌಗಲೆ ಚುನಾವಣಾ ಪ್ರಕ್ರಿಯೆ ನೆರವೇರಿಸಿದರು.

Tags :