For the best experience, open
https://m.samyuktakarnataka.in
on your mobile browser.

ಮೊದಲ ವಾಕ್ಚಿತ್ರ ಸುಲೋಚನಾಗೆ ೯೦ರ ಸಂಭ್ರಮ

05:00 AM Mar 03, 2024 IST | Samyukta Karnataka
ಮೊದಲ ವಾಕ್ಚಿತ್ರ ಸುಲೋಚನಾಗೆ ೯೦ರ ಸಂಭ್ರಮ

ಗಣೇಶ್ ರಾಣೆಬೆನ್ನೂರು
ಬರೋಬ್ಬರಿ ೯೦ ವರ್ಷಗಳ ಹಿಂದೆ ಬೆಳ್ಳಿಪರದೆಯ ಮೇಲೆ ಅಕ್ಷರಶಃ ಜಾದೂ ನಡೆದಿತ್ತು. ಎಲ್ಲರೂ ನಿಬ್ಬೆರಗಾಗಿ ನೋಡುವಂತೆ ಮಾಡಿದ ಕ್ಷಣವದು… ಅಲ್ಲೀವರೆಗೂ ಮೂಕಿ ಚಿತ್ರಗಳನ್ನೇ ಕಣ್ತುಂಬಿಕೊಂಡಿದ್ದವರಿಗೆ ದೊಡ್ಡ ಪರದೆಯ ಮೇಲೆ ಮೊದಲ ವಾಕ್ಚಿತ್ರ ತೆರೆಕಂಡಿತ್ತು. ಅದು `ಸತಿ ಸುಲೋಚನ’. ೧೯೩೪ರ ಮಾರ್ಚ್ ೩ ರಂದು ಕನ್ನಡದ ಚೊಚ್ಚಲ ವಾಕ್ಚಿತ್ರ ಬೆಳ್ಳಿಪರದೆಯ ಮೇಲೆ ಮೋಡಿ ಮಾಡಿತ್ತು. ಸತಿ ಸುಲೋಚನ ಸಿನಿಮಾದಿಂದ ಆರಂಭವಾದ ಕನ್ನಡ ವಾಕ್ಚಿತ್ರಕ್ಕೆ ಇದೀಗ ೯೦ ವರ್ಷ ಪೂರೈಸಿದೆ.
ನೈಸರ್ಗಿಕ ಬೆಳಕಿನಲ್ಲೇ ಶೂಟಿಂಗ್!:
ಸತಿ ಸುಲೋಚನಾ ಚಿತ್ರದ ಚಿತ್ರೀಕರಣವನ್ನು ಕೊಲ್ಹಾಪುರದಲ್ಲಿ ಸುಮಾರು ಎರಡು ತಿಂಗಳ ಕಾಲ ನಡೆಸಲಾಯಿತು. ಆ ಊರಿನಲ್ಲಿ ಕೃತಕ ಬೆಳಕಿನಿಂದ ಶೂಟಿಂಗ್ ಮಾಡುವುದು ಕಷ್ಟವಾಗಿದ್ದರಿಂದ, ನೈಸರ್ಗಿಕ ಸೂರ್ಯನ ಬೆಳಕಿನಲ್ಲಿ ಮತ್ತು ಮಾನವ ನಿರ್ಮಿತ ಪ್ರತಿಫಲಕಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿದೆ ಎಂಬುದು ವಿಶೇಷ.
ಅಪರೂಪದ ಕ್ಷಣ: ಪ್ರದರ್ಶನ ಆರಂಭವಾಗುವ ಮೊದಲು ಸಭಾಂಗಣದ ಒಳಗೆ ಲೈಟ್ ಆಫ್ ಮಾಡಿದಾಗ, ಜನರು ಭಯದಿಂದ ಕಿರುಚಿದರು. ತದನಂತರ ಪ್ರೊಜೆಕ್ಟರ್ ಗಿರಕಿ ಹೊಡೆಯಿತು… ಕ್ಷಣಾರ್ಧದಲ್ಲೇ ಮೊದಲ ಕನ್ನಡ ಪದವನ್ನು ಪರದೆಯಿಂದ ಕೇಳಿದಾಗ ಭಯದ ಜತೆ ಸಂತೋಷ-ಸಂಭ್ರಮ ಚಪ್ಪಾಳೆ, ಶಿಳ್ಳೆಗಳೊಂದಿಗೆ ರಂಗೇರಿತ್ತು.

ಸಿನಿ ೯೦ ಲಾಂಛನ ಬಿಡುಗಡೆ
ಸತಿ ಸುಲೋಚನಾ ಸಿನಿಮಾ ಬಿಡುಗಡೆಯಾಗಿ ೯೦ ವರ್ಷ ಪೂರೈ­ಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಿನಿ ೯೦’ ಎಂಬ ಸಂಭ್ರಮಾಚರಣೆ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಅದರ ಪೂರ್ವಭಾವಿಯಾಗಿ ಲಾಂಛನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಾನುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯಸಿನಿ ೯೦’ ಲಾಂಛನ ಲೋಕಾರ್ಪಣೆ ಮಾಡಲಿದ್ದಾರೆ.