For the best experience, open
https://m.samyuktakarnataka.in
on your mobile browser.

ಭೀಕರ ಅಪಘಾತ ಇಬ್ಬರು ಪ್ರಯಾಣಿಕರ ಸಾವು

06:42 PM Jan 06, 2024 IST | Samyukta Karnataka
ಭೀಕರ ಅಪಘಾತ ಇಬ್ಬರು ಪ್ರಯಾಣಿಕರ ಸಾವು

ವಿಜಯಪುರ : ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ೫೨ರಲ್ಲಿ ನಡೆದಿದೆ.

ಸಿಂದಗಿ ಕಡೆಯಿಂದ ವಿಜಯಪುರಕ್ಕೆ ಹೊರಟಿದ್ದ ಬಸ್‌ಗೆ ಎದುರುಗಡೆಯಿಂದ ಬಂದ ಇನ್ನೊಂದು ಬಸ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ವಿಜಯಪುರ ಜಿಲ್ಲೆ ಬಸನವಬಾಗೇಬಾಡಿ ತಾಲೂಕಿನ ಡೋಣೂರ ಗ್ರಾಮದ ಸಾಜೀದಾ ಬೇಗಂ(೩೬), ಕಲಬುರಗಿ ಪಟ್ಟಣದ ನಿವಾಸಿ ರೋಹಿಣಿ ಪಂಚಾಳ (೩೧) ಮೃತ ದುರ್ದೈವಿಗಳಾಗಿದ್ದಾರೆ.

ಬಸ್‌ನಲ್ಲಿದ್ದ ಎರಡು ಬಸ್ ಚಾಲಕರು ಹಾಗೂ ೪೯ ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅದರಲ್ಲಿ ೨೦ ಪುರುಷರು, ೩ ಬಾಲಕರು, ೨೩ ಮಹಿಳೆಯರು ೩ ಬಾಲಕಿಯರು ಸೇರಿದ್ದಾರೆ. ಎಲ್ಲಾ ಗಾಯಾಳುಗಳಿಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಎ.೨೮, ಎಫ್ ೨೨೭೩ ಹಾಗೂ ಕೆಎ.೩೨, ಎಫ್ ೨೩೯೮ ನಂಬರಿನ ಬಸ್‌ಗಳು ಅಪಘಾತಕ್ಕೊಳಗಿದ್ದು ಎರಡೂ ಬಸ್‌ಗಳ ಮುಂಬಾಗ ಸಂಪೂರ್ಣ ಜಕಮುಗೊಂಡಿದೆ. ಅಪಘಾತದಿಂದಾಗಿ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಕ್ರೇನ್‌ಗಳ ಸಹಾಯದಿಂದ ಬಸ್‌ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.