ಭೂ ಕುಸಿತ: ರೈಲು ಸಂಚಾರ ಸ್ಥಗಿತ, ವಿಜಯಪುರ - ಮಂಗಳೂರ ಎಕ್ಸಪ್ರೆಸ್ ಸಂಚಾರ ಮಾರ್ಗ ಬದಲು
ಹುಬ್ಬಳ್ಳಿ : ನೈಋತ್ಯ ರೈಲ್ವೆಯ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಬರುವ ಯಡಕುಮೇರಿ - ಕದಗರವಲ್ಲಿ ನಡುವಿನ ರೈಲ್ಚೆ ಮಾರ್ಗದಲ್ಲಿ ಭೂ ಕುಸಿತವಾಗಿದೆ.
ಈ. ಮಾರ್ಗವಾಗಿ ಜುಲೈ 27 ರಂದು ಸಾಗಬೇಕಿದ್ದ ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸಪ್ರೆಸ್ ( ಟ್ರೇನ್ ನಂಬರ್ - 16539) ಹಾಗೂ ಕಾರವಾರ - ಯಶವಂತಪುರ ( ಟ್ರೇನ್ ನಂಬರ್ - (16516) ರೈಲು ಸಂಚಾರ ರದ್ದು ಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಅದೇ ರೀತಿ ಜುಲೈ 26 ರಂದು ರಾತ್ರಿ ವಿಜಯಪುರದಿಂದ ಹೊರಡಬೇಕಿದ್ದ ವಿಜಯಪುರ - ಮಂಗಳೂರು ಸೆಂಟ್ರಲ್ ಸ್ಪೆಷಲ್ ಟ್ರೇನ್ ನ್ನು ಮಾರ್ಗ ಬದಲಾಯಿಸಿ ಹುಬ್ಬಳ್ಳಿ, ಲೋಂಡಾ, ಕ್ಯಾಶಲ್ ರಾಕ್ , ಕುಲೇಮ್, ಮಡಗಾಂವ, ಕಾರವಾರ,ಥೋಕುರ ಮಾರ್ಗವಾಗಿ ಮಂಗಳೂರು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಟ್ರೇನ್ ಮಾರ್ಗ ಬದಲಾವಣೆ ಕುರಿತಂತೆ ಸಂಬಂಧಪಟ್ಟ ಮೈಸೂರು, ಹಾಸನ ಮತ್ತು ಅರಸಿಕೇರೆಯಲ್ಲಿ ಹೆಲ್ಪ್ ಡೆಸ್ಕ್ ಗಳ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಅದೇ ರೀತಿ ಆ ಕಡೆಯಿಂದ ಅಂದರೆ ಮಂಗಳೂರು - ವಿಜಯಪುರ ಎಕ್ಸಪ್ರೆಸ್ ಟ್ರೇನ್ ಪ್ರಯಾಣಿಕರಿಗೆ ಸುಬ್ರಹ್ಮಣ್ಯ ರೋಡ್ ರೈಲ್ಚೆ ಸ್ಟೇಷನ್ ನಲ್ಲಿ ಆಹಾದ ಪೊಟ್ಟಣಗಳನ್ನು ವಿತರಿಸಲಾಗಿದೆ.
ಅಲ್ಲದೇ, ಬೆಂಗಳೂರಿಗೆ 4 , ಹಾಸನ, ಮೈಸೂರು ಮತ್ತು ಸುಬ್ರಹ್ಮಣ್ಯಕ್ಕೆ ತಲಾ ಒಂದು ಬಸ್ಸುಗಳಲ್ಲಿ ಪ್ರಯಾಣಿಕರು ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ದುರಸ್ತಿ ಕಾರ್ಯ ಪೂರ್ಣಗೊಂಡು ರೈಲು ಸಂಚಾರಕ್ಕೆ ಸಿದ್ಧಗೊಂಡ ಬಳಿಕ ಮಾಹಿತಿ ನೀಡಲಾಗುವುದು ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ತಿಳಿಸಿದ್ದಾರೆ.