ಮಂಗಳೂರಿನಲ್ಲಿ ಕೇರಳ ಉದ್ಯಮಿ ಅಪಹರಣ: 10 ಲಕ್ಷ ರೂ. ಹಣಕ್ಕೆ ಬೇಡಿಕೆ
ಮಂಗಳೂರು: ಮಂಗಳೂರಿಗೆ ವ್ಯವಹಾರ ನಿಮಿತ್ತ ಬಂದಿದ್ದ ಕೇರಳ ಮೂಲದ ಉದ್ಯಮಿಯನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೀಟು ಮಾಡಿಸಿಕೊಡಲು ಕೇರಳದಿಂದ ಬಂದಿದ್ದ ಶರತ್ ಕೆಲಸ ಮುಗಿಸಿ ಬೆಂಗಳೂರಿಗೆ ತೆರಳಲು ಮಂಗಳವಾರ ರಾತ್ರಿ
ನಗರದ ಪಿವಿಎಸ್ ಬಳಿ ಬಸ್ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರ ತಂಡ ಶರತ್ ಅವರನ್ನು ಬಲವಂತವಾಗಿ ಕಾರಿಗೆ ಹಾಕಿ ಅಪಹರಿಸಿದ್ದಾರೆ ಎನ್ನಲಾಗಿದೆ. ಬಳಿಕ ಆತನ
ಮನೆಯವರಿಗೆ ಫೋನ್ ಮಾಡಿ 10 ಲಕ್ಷ ರೂಪಾಯಿಗಳ ಡಿಮಾಂಡ್ ಇಟ್ಟಿದ್ದಾರೆ.
10 ಲಕ್ಷ ಕೊಟ್ಟರೆ ಆತನನ್ನು ಬಿಡುಗಡೆ ಮಾಡುವುದಾಗಿ ಅವಾಜ್ ಹಾಕಿದ್ದಾರೆ. ಶರತ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲು ಮಾಡಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ತನಿಖೆ ಕೈಗೊಂಡಿದ್ದಾರೆ.
ಹಲವು ದಿನಗಳಿಂದ ಕಳ್ಳತನ ಪ್ರಕರಣಗಳು ಮಂಗಳೂರು ನಗರದಾದ್ಯಂತ ನಡೆದು ಜನರನ್ನು ಬೆಚ್ಚಿಬೀಳಿಸಿತ್ತು. ಸದ್ಯ ಈ ಕಿಡ್ನಾಪ್ ಪ್ರಕರಣ ತಲ್ಲಣ ಮೂಡಿಸಿದೆ. ಸದ್ಯ ಅಪಹರಣಕಾರರು 10 ಲಕ್ಷಕ್ಕೆ ಬೇಡಿಕೆಯಿಟ್ಟಿರುವುದು ಅಷ್ಟೇ ತಿಳಿದುಬಂದಿದೆ. ಇನ್ನೂ ಇದರ ಹಿಂದೆ ಯಾರಿದ್ದಾರೆ? ಯಾವುದು ಈ ಹೊಸ ಕಿಡ್ನಾಪ್ ಗ್ಯಾಂಗ್ ಎನ್ನುವುದು ತನಿಖೆ ಬಳಿಕವಷ್ಟೇ ತಿಳಿದುಬರಬೇಕಿದೆ.