ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ: ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿ
ಮಂಗಳೂರು: ಕರಾವಳಿ ಭಾಗದ ರೈಲ್ವೇ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಹಾಗೂ ಯೋಜನೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೇ, ದಕ್ಷಿಣ ಹಾಗೂ ನೈರುತ್ಯ ಈ ಮೂರೂ ರೈಲ್ವೇ ಅಽಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸುವಂತೆ ರೈಲ್ವೇ ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.
ನಗರದ ಜಿ.ಪಂ ಸಭಾಂಗಣದಲ್ಲಿ ಬುಧವಾರ ರೈಲ್ವೇ ಅಽಕಾರಿಗಳು, ಸಂಸದರು, ಶಾಸಕರನ್ನೊಳಗೊಂಡಂತೆ ಸಭೆ ನಡೆಸಿದ ಅವರು ಮೂರು ರೈಲ್ವೇ ವಿಭಾಗಗಳ ಅಽಕಾರಿಗಳು, ಜೊತೆಯಲ್ಲಿ ಸಂಸದರು, ಜಿಲ್ಲಾಽಕಾರಿಗಳು ಇರಬೇಕು, ಅಭಿವೃದ್ಧಿಗೆ ಅಡ್ಡಿಯಾಗುವ ಯಾವುದೇ ತಾಂತ್ರಿಕ ಅಂಶಗಳನ್ನು ಪರಿಹರಿಸುವ ನಿಟ್ಟಿನಲ್ಲಿ ೧೫-೨೦ ದಿನದಲ್ಲಿ ನನಗೆ ವರದಿ ಕೊಡಬೇಕು ಎಂದು ಸೂಚಿಸಿದರು.
ಮೂರು ತಿಂಗಳಿಗೊಮ್ಮೆ ಸಭೆ: ಮಂಗಳೂರು ವಿಶಿಷ್ಟ ಪ್ರದೇಶವಾಗಿದ್ದು, ಕೊಂಕಣ ರೈಲ್ವೇ, ದಕ್ಷಿಣ ಹಾಗೂ ನೈರುತ್ಯ ರೈಲ್ವೇಗಳ ಮಧ್ಯೆ ಹಂಚಿ ಹೋಗಿರುವುದು ಇಲ್ಲಿನ ಸಮಸ್ಯೆ ಭಿನ್ನವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿನ ರೈಲ್ವೇ ಅಭಿವೃದ್ಧಿಗೊಂದು ಶಾಶ್ವತ ವ್ಯವಸ್ಥೆ ಬರಬೇಕಿದೆ, ಇಲ್ಲಿಗೆ ಪ್ರತ್ಯೇಕ ವಿಭಾಗವಾಗಬೇಕು ಎನ್ನುವ ಬೇಡಿಕೆಯೂ ಇದೆ, ಹಾಗಾಗಿ ಅದು ಸಾಧ್ಯವಾಗುವ ವರೆಗೆ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುವಂತೆ ಈ ಸಮಿತಿ ಮೂರು ತಿಂಗಳಿಗೊಮ್ಮೆ ನಿರಂತರವಾಗಿ ಸಭೆ ನಡೆಸಬೇಕು, ಜನಪ್ರತಿನಿಽಗಳಿದ್ದುಕೊಂಡು ಯಾವುದೇ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ನಿನ್ನೆ ರಾತ್ರಿಯೇ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇನೆ, ರೈಲ್ವೇ ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳೂ ಕೂಡಾ ೪-೫ ವರ್ಷದಿಂದ ಪೂರ್ಣಗೊಳ್ಳದಿರುವುದು ವಿಷಾದನೀಯ, ಆಯಾ ಜನಪ್ರತಿನಿಽಗಳು, ಅಽಕಾರಿಗಳು ಸೇರಿಕೊಂಡು ಅಲ್ಲಲ್ಲೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ, ಮತ್ತೆ ಮೂರು ತಿಂಗಳಲ್ಲಿ ಬಂದು ನಾನು ವಿಸ್ತೃತ ಸಭೆ ನಡೆಸುತ್ತೇನೆ ಎಂದು ಸೋಮಣ್ಣ ಹೇಳಿದರು.
ಮಂಗಳೂರು ಸೆಂಟ್ರಲ್ ವಿಶ್ವದರ್ಜೆಗೇರಿಕೆ: ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲು ಟೆಂಡರ್ ಕರೆದು ಮುಂದಿನ ಮಾರ್ಚ್ನೊಳಗೆ ಕಾಮಗಾರಿ ಆರಂಭಿಸಲಾಗುವುದು. ಸುಮಾರು ೩೦೦ ಕೋಟಿ ರೂ. ಗಳಲ್ಲಿ ನಡೆಯಲಿರುವ ಈ ಅಭಿವೃದ್ಧಿ ಕಾಮಗಾರಿಗಳು ೩ ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಅಽಕಾರಿಗಳು ಹೇಳಿದ್ದು, ನಾನೇ ಸಚಿವನಾಗಿದ್ದಲ್ಲಿ ೨ ವರ್ಷಗೊಳಗೆ ಪೂರ್ಣಗೊಳಿಸಿ ಕೇಂದ್ರ ರೈಲ್ವೇ ಸಚಿವರಿಂದ ಉದ್ಘಾಟನೆ ನೆರವೇರಿಸಲಾಗುವುದು ಎಂದು ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.
ಉಡುಪಿಯಲ್ಲಿ ಆ.೧೬ ಅಥವಾ ೧೭ರಂದು ಸಭೆ: ಸಂಸದ ಕೋಟ ಶ್ರೀನಿವಾಸ ಪೂಜಾರಿಯವರೂ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಬೇಡಿಕೆಯನ್ನು ಮುಂದಿಟ್ಟರಲ್ಲದೆ, ಉಡುಪಿ ಕುಂದಾಪುರ ಭಾಗದ ರೈಲ್ವೇ ವಿಚಾರ ಚರ್ಚಿಸಲು ಆ.೧೬ ಅಥವಾ ೧೭ರಂದು ಸಭೆ ನಡೆಸುವಂತೆ ಕೋರಿಕೊಂಡರು. ಅದಕ್ಕೆ ಉತ್ತರಿಸಿದ ಸೋಮಣ್ಣ ಆ ಕುರಿತು ದಿನ ನಿಗದಿಪಡಿಸಿ ಚರ್ಚಿಸಲು ಸಿದ್ಧ ಎಂದರು.
ಕೊಂಕಣ ರೈಲ್ವೇಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಝಾ ಮಾತನಾಡಿ, ಉಡುಪಿ ರೈಲ್ವೇ ನಿಲ್ದಾಣವನ್ನು ಅಮೃತ್ ಭಾರತ್ ಎಂದು ಘೋಷಿಸಲಾಗಿದೆ, ಅನುದಾನ ಇನ್ನೂ ಬಂದಿಲ್ಲ ಬೇಗನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ,ಸುರತ್ಕಲ್ನಿಂದ ರೋರೋ ಸೇವೆಯನ್ನು ತೋಕೂರಿಗೆ ಸ್ಥಳಾತರಿಸಲು ಭೂಮಿಯ ಅಗತ್ಯವಿದ್ದು, ರಾಜ್ಯ ಸರಕಾರ ಸಹಕರಿಸಬೇಕು ಎಂದರು.
ಪಾಂಡೇಶ್ವರ ಕ್ರಾಸಿಂಗ್ ಸಮಸ್ಯೆ: ಗೂಡ್ಸ್ಶೆಡ್ ಉಳ್ಳಾಲಕ್ಕೆ ಸ್ಥಳಾಂತರಗೊಂಡಬಳಿಕ ಪ್ರಯಾಣಿಕರ ರೈಲು ಬೋಗಿ ತೊಳೆಯಲು ಬಂದರು ಯಾರ್ಡ್ಗೆ ರೈಲು ತರಲಾಗುತ್ತಿದೆ, ಇದರಿಂದ ಹಲವು ಬಾರಿ ಪಾಂಡೇಶ್ವರ ಕ್ರಾಸಿಂಗ್ ಬಂದ್ ಮಾಡಿ ಜನರಿಂದ ಬಗುಳ ತಿನ್ನುವಂತಾಗಿದೆ, ಇಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಗಮನ ಸೆಳೆದರು.
ಸುರತ್ಕಲ್ ಸ್ಟೇಷನ್ ಅಭಿವೃದ್ಧಿ: ಎಂಆರ್ಪಿಎಲ್, ಬಿಎಎಸ್ಎಫ್, ಎನ್ಐಟಿಕೆ ಇರುವ ಪ್ರಸ್ತುತ ಮಹತ್ವದ ಪ್ರದೇಶವಾದ ಸುರತ್ಕಲ್ ಸ್ಟೇಷನ್ ತೀರಾ ಕೆಳಹಂತದಲ್ಲಿದೆ, ಇದನ್ನು ಕನಿಷ್ಠ ೧೦೦ ಕೋಟಿ ರೂ. ಮೊತ್ತದಲ್ಲಿ ಮೇಲ್ದರ್ಜೆಗೇರಿಸಬೇಕು, ಎಂಸಿಎಫ್ ಕಾರ್ಖಾನೆಗೆ ಬರುವ ರೈಲು ರೇಕ್ಗಳಿಂದ ಎನ್ಎಚ್-೬೬ರಲ್ಲಿ ಆಗಾಗ ಬ್ಲಾಕ್ ಆಗುತ್ತಿದ್ದು ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ|ಭರತ್ ಶೆಟ್ಟಿ ಅವರ ಪರವಾಗಿ ಕಾರ್ಪೊರೇಟರ್ ವರುಣ್ ಚೌಟ ಮನವಿ ಮಾಡಿದರು.
ಸುಬ್ರಹ್ಮಣ್ಯ-ಗೋವಾ ರೈಲಿಗೆ ಪೂಂಜ ಮನವಿ
ಸುಬ್ರಹ್ಮಣ್ಯ, ಧರ್ಮಸ್ಥಳ, ಕಾರ್ಕಳ, ಕೊಲ್ಲೂರು ಮೂಲಕ ಗೋವಾ ಸಂಪರ್ಕಿಸುವುದಕ್ಕೆ ಹೊಸ ರೈಲ್ವೇ ಮಾರ್ಗದ ಅಧ್ಯಯನ ಮಾಡಬೇಕು, ಈ ಮೂಲಕ ತೀರ್ಥಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಚುರುಕು ಮುಟ್ಟಿಸಬಹುದು ಎಂದು ಶಾಸಕ ಹರೀಶ್ ಪೂಂಜ ವಿನಂತಿಸಿದರು.
ಪ್ರತ್ಯೇಕ ವಿಭಾಗ: ಭಂಡಾರಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಮಂಗಳೂರು ಪ್ರತ್ಯೇಕ ವಿಭಾಗವನ್ನಾಗಿ ಮಾಡಬೇಕು, ಕೊಂಕಣ ರೈಲ್ವೇ ನಿಗಮವನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನ ಮಾಡಬೇಕು ಎಂದು ಒತ್ತಾಯಿಸಿ, ಮಂಗಳೂರಿನಿಂದ ಚೆನ್ನೈಗೆ ರೈಲು ಇದೆ, ಆದರೆ ಇದು ಕೊಯಂಬತ್ತೂರು ಮಾರ್ಗವಾದ್ದರಿಂದ ೨೦೦ ಕಿ.ಮೀ ಹೆಚ್ಚು ದೂರವಾಗುತ್ತದೆ, ಅದರ ಬದಲು ಬೆಂಗಳೂರು ಮೂಲಕ ಸಂಚರಿಸುವುದು ಉತ್ತಮ ಎಂದರು.
ಮಂಗಳೂರು ಜಂಕ್ಷನ್ ವರೆಗೆ ಬರುತ್ತಿರುವ ೧೬೫೭೫/೭೬ ರೈಲನ್ನು ಮಂಗಳೂರಿಗೆ ವಿಸ್ತರಣೆ ಮಾಡಿ ಮಂಡಳಿ ಆದೇಶ ಮಾಡಿದ್ದರೂ ಪ್ಲಾಟ್ಫಾರಂ ಕೊರತೆಯಿಂದ ಅದು ಸಾಧ್ಯವಾಗಿಲ್ಲ ಎಂದು ರೈಲ್ವೇ ಹೋರಾಟಗಾರ ಹನುಮಂತ ಕಾಮತ್ ಗಮನಸೆಳೆದರಲ್ಲದೆ ವಿಜಯಪುರ- ಮಂಗಳೂರು ರೈಲನ್ನು ವಿಶೇಷ ರೈಲಿನ ಬದಲು ಸಾಮಾನ್ಯ ರೈಲಾಗಿ ಪರಿವರ್ತಿಸಿ ದರ ಇಳಿಸಬೇಕು ಎಂದರು. ಇನ್ನೋರ್ವ ಹೋರಾಟಗಾರ ಜಿ.ಕೆ.ಭಟ್ ಮಾತನಾಡಿ, ದೂರ ಸಂಚರಿಸುವ ರೈಲುಗಳಿಗೆ ಕೇವಲ ಎರಡೇ ಸಾಮಾನ್ಯ ಬೋಗಿ ಇದೆ, ಇದನ್ನು ಹೆಚ್ಚಿಸಬೇಕು, ಅಲ್ಲದೆ ದೇಶದಲ್ಲೇಲ್ಲೂ ಇಲ್ಲದ ಮಾನ್ಸೂನ್ ಟೈಂ ಇಲ್ಲಿ ಮಾತ್ರವೇ ಇದೆ, ಅದನ್ನು ರದ್ದುಗೊಳಿಸಬೇಕು ಎಂದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅನಂತೇಶ್ ಪ್ರಭು, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮುಂತಾದವರು ಮನವಿ ಸಲ್ಲಿಸಿದರು.
ದಕ್ಷಿಣ ರೈಲ್ವೇ ಮಹಾಪ್ರಬಂಧಕ ಆರ್.ಎನ್.ಸಿಂಗ್, ನೈರುತ್ಯ ರೈಲ್ವೇ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ್, ಕೊಂಕಣ ರೈಲ್ವೇ ಸಿಎಂಡಿ ಸಂತೋಷ್ ಕುಮಾರ್ ಝಾ, ಜಿಲ್ಲಾಽಕಾರಿ ಮುಲ್ಲೈ ಮುಗಿಲನ್, ಜಿ.ಪಂ ಸಿಇಒ ಡಾ.ಆನಂದ್ ಉಪಸ್ಥಿತರಿದ್ದರು.
ಮಂಗಳೂರು ಬೆಂಗಳೂರು ರೈಲು ಯಥಾಸ್ಥಿತಿ
ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ ೧೬೫೧೧/೧೨ ರೈಲನ್ನು ಮುಂದಿನ ೧೫೪ ದಿನಗಳ ಕಾಲ ಬಯ್ಯಪ್ಪನಹಳ್ಳಿ ಎಸ್ಎಂವಿಟಿಯಿಂದ ಹೊರಡಿಸುವ ರೈಲ್ವೇ ಇಲಾಖೆ ನಿರ್ಧಾರವನ್ನು ಕೈಬಿಡುವಂತೆ ಸಚಿವ ಸೋಮಣ್ಣ ಸೂಚಿಸಿದರು.
ಈ ಕುರಿತು ಸಭೆಯಲ್ಲಿ ಗಮನಕ್ಕೆ ತಂದ ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು, ಹೆಚ್ಚಿನ ಜನರೂ ಯಶವಂತಪುರ ಹಾಗೂ ಕೆಎಸ್ಆರ್ ಬೆಂಗಳೂರು ಸ್ಟೇಷನ್ಗೆ ಹೋಗುವವರು, ಹಾಗಾಗಿ ಬಯ್ಯಪ್ಪನ ಹಳ್ಳಿ ಸ್ಟೇಷನ್ನ್ನು ಆರಂಭ ಹಾಗೂ ಕೊನೆ ಸ್ಟೇಷನ್ ಆಗಿ ಬಳಸುವುದು ಸರಿಯಲ್ಲ, ಕೇವಲ ನಮ್ಮ ಭಾಗದ ರೈಲುಗಳಿಗೆ ಮಾತ್ರ ಈ ಭೇದ ಸರಿಯಲ್ಲ ಎಂದರು.