For the best experience, open
https://m.samyuktakarnataka.in
on your mobile browser.

ಮದ್ಯ ಸಂಗ್ರಹ ಶಂಕೆ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳ ಕೈಗೆ ಸಿಕ್ತು ಕೋಟಿ ಕೋಟಿ ಹಣ

09:36 PM Apr 16, 2024 IST | Samyukta Karnataka
ಮದ್ಯ ಸಂಗ್ರಹ ಶಂಕೆ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳ ಕೈಗೆ ಸಿಕ್ತು ಕೋಟಿ ಕೋಟಿ ಹಣ

ಧಾರವಾಡ: ಇಲ್ಲಿನ ದಾಸನಕೊಪ್ಪ ಬಡಾವಣೆ ಸಮೀಪ ಇರುವ ಅರ್ನಾ ಅಪಾರ್ಟ್ಮೆಂಟ್‌ನ ನಿವಾಸಿ, ಗುತ್ತಿಗೆದಾರ ಬಸವರಾಜ ದತ್ತುನವರ ಎಂಬುವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡವು ಮಂಗಳವಾರ ಸಂಜೆ ದಾಳಿ ನಡೆಸಿದ್ದು, ೧೮ ಕೋಟಿ ರೂಗಳನ್ನು ವಶಕ್ಕೆ ಪಡೆದಿದೆ.
ಮದ್ಯ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಪಡೆದಿದ್ದ ಅಬಕಾರಿ ಅಧಿಕಾರಿಗಳು ಗುತ್ತಿಗೆದಾರನ ಮನೆ ಮೇಲೆ ದಾಳಿ ಮಾಡಿದ್ದಾರೆ. ಆಗ ಅಧಿಕಾರಿಗಳ ಕೈಗೆ ಕೋಟಿ ಕೋಟಿ ಹಣ ಸಿಕ್ಕಿದೆ. ಇದರಿಂದಾಗಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ ಅಬಕಾರಿ ಅಧಿಕಾರಿಗಳು ಬಳಿಕ ಐಟಿ ಅಧಿಕಾರಿಗಳ ಜತೆಗೂಡಿ ದಾಳಿ ನಡೆಸಿದ್ದಾರೆ.
ಮನೆಯ ಲಾಕರ್‌ನಲ್ಲಿ ೧೮ ಕೋಟಿ ರೂ.ಗಳನ್ನು ಮನೆಯಲ್ಲಿ ಇಟ್ಟುಕೊಂಡಿರುವ ಸಂಬಂಧ ಐಟಿ ಅಧಿಕಾರಿಗಳ ತಂಡವು ವಿಚಾರಣೆ ನಡೆಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಒದಗಿಸಲು ಬಸವರಾಜ ದತ್ತುನವರ ಅವರಿಗೆ ಕೇಳಿದೆ. ತಮ್ಮ ಬಳಿ ಇರುವ ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಸವರಾಜ ಹೊಂದಿದ್ದು, ಅದನ್ನು ಐಟಿ ಅಧಿಕಾರಿಗಳ ತಂಡಕ್ಕೆ ಒದಗಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಜೆ ಸುಮಾರು ೬.೩೦ರ ಹೊತ್ತಿಗೆ ೫ ವಾಹನಗಳಲ್ಲಿ ಏಕಕಾಲಕ್ಕೆ ದತ್ತುನವರ ಮನೆ ಮೇಲೆ ೨೦ ಅಧಿಕಾರಿಗಳ ತಂಡವು ದಾಳಿ ನಡೆಸಿದೆ. ಇನ್ನೂ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.