For the best experience, open
https://m.samyuktakarnataka.in
on your mobile browser.

ಮಾತುಕತೆ ಮುಗಿದ ಅಧ್ಯಾಯ

12:05 AM Apr 12, 2024 IST | Samyukta Karnataka
ಮಾತುಕತೆ ಮುಗಿದ ಅಧ್ಯಾಯ

ಶಿವಮೊಗ್ಗ: ಬಿಜೆಪಿ ವರಿಷ್ಠರ ಜೊತೆ ನನ್ನ ಮಾತುಕತೆ ಮುಗಿದಿದೆ. ಇನ್ನು ಯಾರ ಜೊತೆಗೂ ಮಾತುಕತೆಗೆ ಕೂರುವುದಿಲ್ಲ ಅದು ಮುಗಿದ ಅಧ್ಯಾಯ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನೊಂದಿಗೆ ಪಕ್ಷದ ಮಾತುಕತೆ ಎಲ್ಲವೂ ವಿಫಲವಾಗಿದ್ದರೂ ನನ್ನನ್ನು ಇನ್ನೂ ಪಕ್ಷದಿಂದ ಯಾಕೆ ಉಚ್ಚಾಟಿಸಿಲ್ಲ ಎಂದು ನನಗೆ ಗೊತ್ತಾಗುತ್ತಿಲ್ಲ. ಉಚ್ಚಾಟಿಸಿದರೆ ಇನ್ನಷ್ಟು ಕಟುವಾಗಿ ಮಾತನಾಡಲು ಸಾಧ್ಯ ಎಂದರು.
ನಾನು ನರೇಂದ್ರ ಮೋದಿ ಫೋಟೋ ಹಾಕಬಾರದು ಎಂದು ಹೇಳುವ ಇವರು ಯಡಿಯೂರಪ್ಪ, ರಾಘವೇಂದ್ರ ಮತ್ತು ವಿಜಯೇಂದ್ರರ ಫೋಟೋ ಇಟ್ಟುಕೊಂಡು ಹೋಗಿ ಚುನಾವಣೆಯಲ್ಲಿ ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದರು. ಆದಾಗ್ಯೂ ಮೋದಿ ಅವರ ಭಾವಚಿತ್ರ ಬಳಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮತ್ತು ಕೋರ್ಟ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.
ಇಂದು ನಾಮಪತ್ರ ಸಲ್ಲಿಕೆ: ಏ.೧೨ರಂದು ಬೃಹತ್ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಈಶ್ವರಪ್ಪ ತಿಳಿಸಿದರು.