For the best experience, open
https://m.samyuktakarnataka.in
on your mobile browser.

ಮಾಸ್ ಪ್ರಿಯರಿಗೆ ಮಸ್ತ್ ಭೀಮ

11:24 AM Aug 10, 2024 IST | Samyukta Karnataka
ಮಾಸ್ ಪ್ರಿಯರಿಗೆ ಮಸ್ತ್ ಭೀಮ

ಸಮಾಜದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಲು ಕಾರಣವೇನು..? ಮಾದಕವ್ಯಸನಿಗಳಾ… ಡ್ರಗ್ ಪೆಡ್ಲರ್‌ಗಳಾ..? ಹೀಗೊಂದು ಪ್ರಶ್ನೆ ಆಗಾಗ ಮೂಡುತ್ತದೆ.

ಗಣೇಶ್ ರಾಣೆಬೆನ್ನೂರು

ಚಿತ್ರ: ಭೀಮ
ನಿರ್ದೇಶನ: ವಿಜಯ್ ಕುಮಾರ್
ನಿರ್ಮಾಣ: ಕೃಷ್ಣ ಸಾರ್ಥಕ್, ಜಗದೀಶ್ ಗೌಡ
ತಾರಾಗಣ: ವಿಜಯ್ ಕುಮಾರ್ (ದುನಿಯಾ ವಿಜಯ್), ಅಶ್ವಿನಿ, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು, ಕಾಕ್ರೋಚ್ ಸುಧೀ, ರಾಘು ಶಿವಮೊಗ್ಗ, ಕಲ್ಯಾಣಿ ರಾಜು, ಡ್ರಾö್ಯಗನ್ ಮಂಜು, ಪ್ರಿಯಾ ಇತರರು.
ರೇಟಿಂಗ್ಸ್:

ಸಮಾಜದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಲು ಕಾರಣವೇನು..? ಮಾದಕವ್ಯಸನಿಗಳಾ… ಡ್ರಗ್ ಪೆಡ್ಲರ್‌ಗಳಾ..? ಹೀಗೊಂದು ಪ್ರಶ್ನೆ ಆಗಾಗ ಮೂಡುತ್ತದೆ. ಬೇಡಿಕೆ ಹೇಗಿರುತ್ತದೋ, ಸರಬರಾಜು ಕೂಡಾ ಅದೇ ರೀತಿ ಆಗುತ್ತದೆ ಎಂದು ಸರಳವಾಗಿ ಹೇಳಿಬಿಡಬಹುದು. ಆದರೆ ಯುವ ಸಮೂಹವನ್ನು ಡ್ರಗ್ಸ್ ಯಾವ ಮಟ್ಟಕ್ಕೆ ಹಾಳು ಮಾಡುತ್ತಿದೆ ಎಂಬುದನ್ನೂ ಆಗಾಗ ನೋಡುತ್ತಲೇ ಇರುತ್ತೇವೆ. ಇದಕ್ಕೆ ಕಡಿವಾಣ ಹಾಕುವುದಾದರೂ ಹೇಗೆ..? ಇದನ್ನು ಬೇರಿನಿಂದಲೇ ಕಿತ್ತೊಗೆಯಬೇಕೆಂದರೆ ಏನು ಮಾಡಬೇಕು…
ಇದಕ್ಕೆ ತನ್ನದೇ ಮಾರ್ಗಸೂಚಿ ಎಂಬಂತೆ ಒಂಟಿ ಸಲಗನಂತೆ ನಿಂತು ಹೋರಾಡುವ ಬಲ ಭೀಮನ ಕಥೆಯೇ ಈ ಸಿನಿಮಾದ ಒನ್‌ಲೈನ್. ಅದಕ್ಕೆ ನಾಯಕ ಅನುಸರಿಸುವ ಮಾರ್ಗ ಯಾವುದು? ಅದು ಎಷ್ಟರಮಟ್ಟಿಗೆ ನ್ಯಾಯಯುತ ಎಂಬುದು ಆನಂತರದ ಮಾತು. ಒಂದು ಚಿತ್ರವನ್ನು ಕಮರ್ಷಿಯಲ್ ನಿಟ್ಟಿನಲ್ಲಿ ಕಟ್ಟಿಕೊಡಲು ಮುಂದಾದಂತೆ ಕಾಣುವ ನಿರ್ದೇಶಕ ವಿಜಯ್ ಕುಮಾರ್, ಒಂದೆಡೆ ನಿರ್ದೇಶನ ಮತ್ತೊಂದೆಡೆ ನಾಯಕ ನಟನಾಗಿ `ಭೀಮ'ನಿಗೆ ತಂತಾನೇ ಬಲ ತುಂಬುತ್ತಾ ಹೋಗಿದ್ದಾರೆ. ಹೀಗಾಗಿ ಇಲ್ಲಿ ಆ್ಯಕ್ಷನ್‌ಗಂತೂ ಬರವಿಲ್ಲ. ಮಾಸ್ ಪ್ರಿಯರಿಗೆ ಮೃಷ್ಟಾನ್ನ ಭೋಜನವನ್ನೇ ಉಣಬಡಿಸಿದ್ದಾರೆ. ಕಿಲೋ ಮೀಟರ್‌ಗಟ್ಟಲೆ ಮೀಟರ್ ಇರುವ ಭೀಮ, ಲೀಟರ್‌ಗಟ್ಟಲೆ ನೆತ್ತರು ಹರಿಸಿ ರಕ್ತಕ್ರಾಂತಿಯನ್ನೇ ಮಾಡುವುದು ಚಿತ್ರದ ಪ್ರಮುಖ ಅಂಶಗಳಲ್ಲೊಂದು.
ಸ್ಲಂ ಯುವಕರು ಡ್ರಗ್ಸ್ ಸರಬರಾಜು ಮಾಡುತ್ತಾ, ಹೈ-ಫೈ ಯುವ ಸಮೂಹವನ್ನು ಮಾದಕವ್ಯಸನಿಗಳಾಗಿ ಮಾಡುತ್ತಿದ್ದಾರೆ. ಅವರನ್ನು ಸರಿ ದಾರಿಗೆ ತರಲು ಹೊರಡುವ ಹೋರಾಟದ ಕಥೆಯೇ ಭೀಮ ಸಿನಿಮಾದ ಒಟ್ಟಾರೆ ಸಾರಾಂಶ. ಇದರ ಜತೆಗೆ ಈಗಿನ ಯುವ ಸಮೂಹ ಬೈಕ್ ಸ್ಟಂಟ್ಸ್, ಕಾಲೇಜು ಹುಡುಗ-ಹುಡುಗಿಯರ ಕಾಮ ಕೇಳಿ ಮೊದಲಾದ ವಿಷಯಗಳನ್ನು ಸೂಕ್ಷö್ಮವಾಗಿ ಹೇಳುತ್ತಾ… ಡ್ರಗ್ಸ್ ದಂಧೆಯ ಮೇಲೆ ಬಹುತೇಕ ಗಮನ ಹರಿಸಲಾಗಿದೆ.
ಆಗಾಗ ಕಾಮಿಡಿ, ಯಥೇಚ್ಛವಾದ ಹೊಡಿ-ಬಡಿ, ಕುಂತಲ್ಲೇ ಕುಣಿಸುವ ಚರಣ್‌ರಾಜ್ ಹಾಡುಗಳು, ಹಿನ್ನೆಲೆ ಸಂಗೀತ, ಮಾಸ್ತಿ ಬರೆದಿರುವ ಮಸ್ತ್ ಮಸ್ತ್ ಪಂಚಿಂಗ್ ಡೈಲಾಗ್ಸ್ ನಾಯಕನ ಪಂಚ್‌ನಷ್ಟೇ ಸ್ಟಾçಂಗ್ ಆಗಿದೆ.
ಇವೆಲ್ಲದರ ಜತೆಜತೆಗೆ ಇಡೀ ಸಿನಿಮಾದಲ್ಲಿ ಕಾಣುವ ಮತ್ತೊಂದು ಪ್ರಮುಖ ಅಂಶವೇ ತಾರಾಗಣ. ಕಥೆಗೆ ಹಾಗೂ ಪಾತ್ರಕ್ಕೆ ತಕ್ಕ ಕಲಾವಿದರು ಆರಿಸಿಕೊಂಡಿರುವುದೇ ವಿಜಯ್ ಮೊದಲ ಗೆಲುವು ಎನ್ನಬಹುದು. ಎಂದಿನಂತೆ ವಿಜಯ್ ನಿರ್ದೇಶನದ ಜತೆಗೆ ನಾಯಕನಾಗಿಯೂ ಮಿಂಚು ಹರಿಸಿದ್ದಾರೆ. ನಾಯಕಿ ಅಶ್ವಿನಿಗೆ ಇದು ಮೊದಲ ಚಿತ್ರವಾದರೂ ಅದರ ಸುಳಿವೇ ಕೊಡದಂತೆ ನಟಿಸಿದ್ದಾರೆ. ಪ್ರಮುಖ ಖಳ ಪಾತ್ರಧಾರಿ ಡ್ರಾö್ಯಗನ್ ಮಂಜು ಚಿತ್ರದುದ್ದಕ್ಕೂ ಗಮನ ಸೆಳೆಯುತ್ತಾರೆ. ಚೊಚ್ಚಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಇನ್ನು ಪೊಲೀಸ್ ಆಫೀಸರ್ ಪಾತ್ರಧಾರಿ ಪ್ರಿಯಾ, ಖಡಕ್ ಲುಕ್ಕು, ಡೈಲಾಗ್ ಮೂಲಕ ನೋಡುಗರ ಹುಬ್ಬೇರುವಂತೆ ಮಾಡಿರುವುದು ಅವರ ಹೆಚ್ಚುಗಾರಿಕೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು, ಕಾಕ್ರೋಚ್ ಸುಧೀ, ರಾಘು ಶಿವಮೊಗ್ಗ, ಕಲ್ಯಾಣಿ ರಾಜು, ರಮೇಶ್ ಇಂದಿರಾ ಮೊದಲಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

Tags :