ಮೋದಿ ಎರಡು ನಾಲಿಗೆಯ ವ್ಯಕ್ತಿ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಎರಡು ನಾಲಿಗೆ ಉಳ್ಳ ವ್ಯಕ್ತಿ. ಅವರನ್ನು ನಂಬುವುದು ಕಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ, ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ಗುಜರಾತ್ ನಿಂದ ಯಾವುದೇ ತೆರಿಗೆ ವಸೂಲಿ ಮಾಡದಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ಆದರೆ, ಪ್ರಧಾನಿ ಆದ ಬಳಿಕ ಎಲ್ಲ ರಾಜ್ಯಗಳಿಂದಲೂ ತರಿಗೆ ವಸೂಲಿ ಮಾಡುತ್ತಿದ್ದಾರೆ. 2014ರ ಚುನಾವಣೆಗೂ ಮೊದಲು 600 ಆಶ್ವಾಸನೆಗಳನ್ನು ನೀಡಿದ್ದ ಮೋದಿ 60ನ್ನೂ ಈಡೇರಿಸಿಲ್ಲ. ವಿದೇಶದಿಂದ ಕಪ್ಪು ಹಣ ಬರಲಿಲ್ಲ. ರೈತರ ಆದಾಯ ದ್ವಿಗುಣವಾಗಲಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯೂ ಹುಸಿಯಾಯಿತು. ಅಚ್ಛೇ ದಿನ್ ಬರಲೇ ಇಲ್ಲ. ಹೀಗಾಗಿ ಜಗತ್ತಿನಲ್ಲೇ ಅತೀ ಸುಳ್ಳು ಹೇಳುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಕಟುವಾಗಿ ಟೀಕಿಸಿದರು.