For the best experience, open
https://m.samyuktakarnataka.in
on your mobile browser.

ಯಾರನ್ನೂ ಅಗೌರವದಿಂದ ಕಂಡಿಲ್ಲ

05:55 PM Mar 28, 2024 IST | Samyukta Karnataka
ಯಾರನ್ನೂ ಅಗೌರವದಿಂದ ಕಂಡಿಲ್ಲ

ಹುಬ್ಬಳ್ಳಿ: ಕಾಯಾ, ವಾಚಾ, ಮನನಾ ಯಾವುದೇ ಜಾತಿ-ಭೇದ ಮಾಡಿಲ್ಲ. ಯಾವ ಧರ್ಮದವರನ್ನೂ ಅಗೌರವದಿಂದ ಕಂಡಿಲ್ಲ. ಹೀಗಾಗಿ ಫಕೀರ ದಿಂಗಾಲೇಶ್ವರ ಶ್ರೀಗಳ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದುದ್ದಕ್ಕೂ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಿದ್ದೇನೆ. ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಂಡಿದ್ದೇನೆ. ಶ್ರೀ ದಿಂಗಾಲೇಶ್ವರ ಶ್ರೀಗಳು ಸದಾಕಾಲ ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಮಠಕ್ಕೂ ನನಗೂ ಅವಿನಾಭಾವ ಸಂಬಂಧವಿದೆ ಎಂದರು.
ನನ್ನಿಂದ ತಿಳಿಯದೇ ತಪ್ಪಾಗಿದ್ದರೆ ಅಥವಾ ತಪ್ಪು ಮಾಡಿದ್ದೇ ನಿಜವಾದರೆ ಕ್ಷಮೆ ಕೇಳಲು ಸಿದ್ಧನಿದ್ದೇನೆ. ಶ್ರೀಗಳ ಆರೋಪದ ಬಗ್ಗೆ ಚರ್ಚೆ ಮಾಡುವುದಿಲ್ಲ. ಅವರ ಎಲ್ಲಾ ಮಾತುಗಳು ನನಗೆ ಆಶೀರ್ವಾದವಿದ್ದಂತೆ ಎಂದರು.
ಬಿಜೆಪಿಯಲ್ಲಿನ ಎಲ್ಲಾ ಅಸಮಾಧಾನಗಳು ಶಮನವಾಗಿವೆ. ಇಂದು ಧಾರವಾಡ ಜೆಡಿಎಸ್ ಪ್ರಮುಖರ ಜೊತೆಗೂ ಸಭೆ ನಡೆಸಿದ್ದೇನೆ. ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲು ಯೋಜನೆ ರೂಪಿಸಲಾಗಿದೆ ಎಂದರು.