ರಸ್ತೆ ಅಪಘಾತದಲ್ಲಿ ಎಎಸ್ಐ ಸಾವು: ಪಿಎಸ್ಐ ಅಮಾನತು
ಬೆಳಗಾವಿ: ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್ಐ ಸಾವನ್ನಪ್ಪಿದ್ದ ಪ್ರಕರಣ ನಡೆದಿದೆ.
ಜಿಲ್ಲೆಯ ಯರಗಟ್ಟಿ ಪಟ್ಟಣದ ನಿವಾಸಿ ವಿಜಯಕಾಂತ ಮಿಕಲಿ(೫೧) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕಾಂತ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಕಾರಣಕ್ಕೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಸಸ್ಪೆಂಡ್ ಮಾಡಿ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ: ಕರ್ತವ್ಯ ಮುಗಿಸಿ ಯರಗಟ್ಟಿಯಲ್ಲಿರುವ ಮನೆಗೆ ಬರುವಾಗ ರಸ್ತೆ ಅಪಘಾತವಾಗಿತ್ತು. ತಡರಾತ್ರಿ ಯರಗಟ್ಟಿಯ ಕೃಷ್ಣಾ ಬಡಾವಣೆ ಬಳಿ ಅತಿ ವೇಗದಿಂದ ಬೈಕ್ ಚಲಾಯಿಸುವಾಗ ದಿಢೀರ್ ರಸ್ತೆ ಉಬ್ಬಿನ ಮೇಲೆ ವಾಹನ ಏರಿ ಮಗುಚಿ ಬಿದ್ದಿದ್ದರಿಂದ ರಸ್ತೆ ಅಪಘಾತ ಸಂಭವಿಸಿದೆ.
ಆದರೆ, ಕಳೆದೊಂದು ತಿಂಗಳ ಹಿಂದಷ್ಟೇ ಎಲ್ಲ ಪೊಲೀಸರು ಹೆಲ್ಮೆಟ್ ಧರಿಸುವುದನ್ನು ಬೆಳಗಾವಿ ಎಸ್ಪಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರು. ಮೇಲಾಧಿಕಾರಿಗಳ ನಿರ್ದೇಶನ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ದೊಡವಾಡ ಠಾಣೆ ಪಿಎಸ್ಐ ನಂದೀಶ ಅಮಾನತು ಮಾಡಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ.