For the best experience, open
https://m.samyuktakarnataka.in
on your mobile browser.

ರಾಜ್ಯದಲ್ಲಿ ವಾರದಲ್ಲಿ ೩೪೫ ಹಾವು ಕಡಿತ

10:35 PM May 28, 2024 IST | Samyukta Karnataka
ರಾಜ್ಯದಲ್ಲಿ ವಾರದಲ್ಲಿ ೩೪೫ ಹಾವು ಕಡಿತ

ಬೆಂಗಳೂರು: ರಾಜ್ಯದಲ್ಲಿ ಒಂದೇ ವಾರದಲ್ಲಿ ೩೫೪ ಜನರಿಗೆ ಹಾವು ಕಚ್ಚಿರುವ ಪ್ರಕರಣಗಳು ವರದಿಯಾಗಿದ್ದು, ೧೭ ಜನರು ಮೃತಪಟ್ಟಿದ್ದಾರೆ.
ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹಾವು ಕಚ್ಚಿರುವುದು ಬೆಳಕಿಗೆ ಬಂದಿದೆ. ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾವುಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು, ಕೂಲಿ ಕಾರ್ಮಿಕರಿಗೆ ಹೆಚ್ಚು ಹಾವು ಕಚ್ಚಿವೆ. ತಂಪಾದ ವಾತಾವರಣದಿಂದಾಗಿ ಮನೆಗಳಲ್ಲಿ ಹಾವುಗಳು ಕಾಣಿಸುತ್ತಿವೆ.
ಸಾರ್ವಜನಿಕರು ಮನೆಯ ಹೊರಗೆ ಬಿಟ್ಟರುವ ಶೂ, ಮೋಟಾರು ಬೈಕ್, ಕಾರಿನ ಸೀಟ್, ಹೂವಿನ ಕುಂಡಲಗಳಲ್ಲಿ ಹಾವುಗಳು ಬಂದು ಸೇರಿಕೊಳ್ಳುತ್ತಿವೆ. ಜನರ ಅಜಾಗರೂಕತೆಯಿಂದಾಗಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನಲಾಗಿದೆ. ಪ್ರಸಕ್ತ ವರ್ಷದಲ್ಲಿ ಜನವರಿಯಿಂದ ಇಲ್ಲಿಯವರೆಗೆ ೩,೦೩೪ ಮಂದಿಗೆ ಹಾವು ಕಡಿತವಾಗಿದೆ. ನಾನಾ ಕಡೆಗಳಲ್ಲಿನ ಆಸ್ಪತ್ರೆಗಳಲ್ಲಿ ಹಾವು ಕಡಿತದಿಂದಾಗಿ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಕೂಡಾ ಹೆಚ್ಚಳವಾಗಿದೆ.
ಹಾವಿನ ಮೊಟ್ಟೆಗಳು ಮುಂಗಾರು ಸಂದರ್ಭದಲ್ಲಿ ಒಡೆಯುವ ಕಾಲವಾಗಿದೆ. ಅದರಲ್ಲೂ ಸಾಮಾನ್ಯವಾಗಿ ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಹಾವುಗಳ ಸಂಖ್ಯೆ ಹೆಚ್ಚುತ್ತವೆ. ಇದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.