For the best experience, open
https://m.samyuktakarnataka.in
on your mobile browser.

ಅಪರೂಪ, ಪರಿಪೂರ್ಣ ಸಂಗೀತಗಾರ, ಹೃದಯವಂತ

03:21 AM Jun 12, 2024 IST | Samyukta Karnataka
ಅಪರೂಪ  ಪರಿಪೂರ್ಣ ಸಂಗೀತಗಾರ  ಹೃದಯವಂತ

ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ್.
ಅವರೊಬ್ಬ ಮಹಾನ್ ಕಲಾವಿದರು. ಅವರ ಮುಂದೆ ನಿಂತು ಮಾತನಾಡುವ ಧೈರ್ಯ ನನಗಿರಲಿಲ್ಲ. ಅವರು ಖುದ್ದು ಸಭೆಯಲ್ಲಿದ್ದರೆ ಹಾಡುವಾಗಲೂ ಭಯ-ಭಕ್ತಿ.
ಮೈಸೂರಿನಲ್ಲಿ ಇತ್ತೀಚೆಗಷ್ಟೇ ಆಸ್ಪತ್ರೆಯ ವಾರ್ಡ್‌ನಲ್ಲಿ ದರ್ಶನ ಪಡೆದು ಮಾತನಾಡಿದಾಗ, ನೀನೊಂದು ಹಾಡು ಹೇಳು ಎಂದು ಹೇಳುತ್ತ ಅದರ ಪೂರ್ವವೇ ತಾವೇ ಗುನುಗತೊಡಗಿದರು. ಆ ನಂತರ ನಾನು ಹಾಡಿದ್ದು ಅವರ ಎದುರಿನಲ್ಲಿ. ಅದು ಅವರ ಬಗ್ಗೆ ಇರುವ ಪುಣ್ಯದ ಸುಕೃತ.
ಪಂ. ರಾಜೀವ ತಾರಾನಾಥ್, ಸರೋದ್ ವಾದಕರಲ್ಲಿ ಜಗತ್ತಿನಲ್ಲಿಯೇ ಅಗ್ರಗಣ್ಯರು. ಹಾಗೆಯೇ ಸಂಗೀತ ಕ್ಷೇತ್ರದ ದಿಗ್ಗಜರು. ಸಂಗೀತ ಮತ್ತು ಸಾಹಿತ್ಯದ ಮಹಾನ್ ಕೊಂಡಿ. ಅವರೊಂದಿಗೆ ಕುಳಿತುಕೊಳ್ಳುವುದು ಎಂದರೆ ಜ್ಞಾನದ ಭಂಡಾರದ ಎದುರು ನಾನು ಕುಬ್ಜನಾಗಿಯೇ ಭಯದಿಂದ ನಡುಗುತ್ತಿದೆ. ಎಂತಹ ಪಾಂಡಿತ್ಯ, ಎಂತಹ ವಿನಯತೆ, ಎಂತಹ ವಿದ್ವತ್ತು. ಪಂ.ರಾಜೀವ್ ತಾರಾನಾಥ್ ಇಡೀ ದೇಶದಾದ್ಯಂತ ಓಡಾಡಿದವರು. ಸಂಗೀತ, ಸಾಹಿತ್ಯ, ಸರೋದ್ ವಾದನದ ಮೂಲಕ ಸಾಂಸ್ಕೃತಿಕ, ಸಂಗೀತ, ಸಾಹಿತ್ಯ ಪ್ರತಿಭೆಗಳಿಗೆ ರಾಯಭಾರಿಯಂತಿದ್ದವರು.
ಅವರು ಕಲಿಸುತ್ತಲೇ ಕಲಿತವರು, ಕಲಿಯುತ್ತಲೇ ಕಲಿಸಿದವರು. ನೂರಾರು ಸಾವಿರಾರು ಶಿಷ್ಯಂದಿರನ್ನು ಬೆಳೆಸಿದರು. ಯಾವ ಸಂಗೀತ ಕಛೇರಿಗೆಯೇ ಹೋಗಲಿ ಪಂ. ರಾಜೀವ್ ತಾರಾನಾಥ್ ಶಿಷ್ಯರು ಎಂದು ಹೆಮ್ಮೆಯಿಂದಲೇ ಹೇಳುತ್ತಿದ್ದರು.
ನನ್ನ ಗುರುಗಳು ಡಾ. ಪಂ. ಪಂಚಾಕ್ಷರಿ ಗವಾಯಿಗಳು. ಅವರ ಗುರುಗಳು ಸಹ ಎಂದು ಹೇಳಿಕೊಳ್ಳುತ್ತಿದ್ದರು ಪಂಚಾಕ್ಷರಿ ಗವಾಯಿಗಳು ಮೂರು ರಾಗವನ್ನು ಅವರಿಗೆ ಕಲಿಸಿದ್ದರು. ಅದನ್ನೇ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಗುನುಗುತ್ತಿದ್ದರು. ನನ್ನ ಕಂಡೊಡನೆ ನಿಮ್ಮ ಗುರುಗಳು ಕಲಿಸಿದ ಈ ರಾಗ ಎಂದು ತಾವು ಹಾಡಲಾರಂಭಿಸಿದರು. ಅವರ ಚೇತೋಹಾರಿ ಜೀವನೋತ್ಸಾಹ ಕಂಡು ಅದೇ ವಾರ್ಡ್‌ನಲ್ಲಿ ನಾನು ಹಾಡಿದೆ. ಎಂತಹ ಬೆಳಕು, ಎಂತಹ ತನ್ಮಯತೆ. ಅಬ್ಬಾ ನಾನು ಶತಾಯುಷಿಗಳಾಗಿ ಗುರುಗಳೇ ಎಂದು ಕೈ ಮುಗಿದು ಕಾಲು ಮುಟ್ಟಿ ನಮಸ್ಕರಿಸಿ ಬಂದೆ.
ಅವರ ಒಡನಾಟ ಸಂಗೀತ ಸಾಹಿತ್ಯದ ಮೆಲುಕುಗಳು ಅದ್ಭುತ. ಇಂಗ್ಲಿಷ್ ಸಾಹಿತ್ಯ, ಎಲಿಯಟ್ ಬಗ್ಗೆ ಮಾತನಾಡುತ್ತಾರೆ. ನಸುಕಿನಲ್ಲೆದ್ದು ಸಾಹಿತ್ಯ ಕೃತಿಗಳನ್ನು ಓದುತ್ತಾರೆ. ಕಂಬಾರರು, ಅಡಿಗರು, ಕುವೆಂಪು, ಆಮೂರು ಎಲ್ಲರನ್ನು ಹತ್ತಿರದಿಂದ ಬಲ್ಲವರಾಗಿದ್ದು, ಅವರ ಕೆಲಸಗಳ ಬಗ್ಗೆ ಎನಿಮೇಟೆಡ್ ಸಂಭಾಷಣೆ ನಡೆಸುತ್ತಿದ್ದರು. ಎಷ್ಟೇ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟರೂ ಕುಂದಗೋಳ ಧಾರವಾಡ ಸಂಗೀತದ ತವರುಮನೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.
ಅವರ ಮನೆ ಹಾಗೂ ಸಾಂಗತ್ಯ : ಸಂಗೀತ, ಸಾಹಿತ್ಯ, ಬರಹಗಾರರ, ರಂಗಭೂಮಿ ಕಲಾವಿದರ, ಸ್ನೇಹಿತರಿಂದ ತುಂಬಿದ ಚಿಂತಕರ ಕೊಠಡಿಯಂತಿತ್ತು ಅವರ ಮನೆ. ಸಹಾಯ ಕೋರಿ ಬಂದು ಸಾಹಿತ್ಯಿಕ, ಸಾಂಸ್ಕೃತಿಕ ಮನಸುಗಳಿಗೆ ಇಲ್ಲ ಎಂದಿದ್ದು ಅಪರೂಪ. ಪರಿಪೂರ್ಣ ಸಂಗೀತಗಾರ, ಜನಪರ ವ್ಯಕ್ತಿ, ಹೃದಯವಂತ. ತುಂಬಾ ಆಳವಾದ ಅಧ್ಯಯನ ಹೊಂದಿದವರು. ಅವರು ಸಿನಿಮಾ, ರಂಗಭೂಮಿಗಳಲ್ಲಿ ಅವರನ್ನು ತೊಡಗಿಸಿಕೊಂಡು ಬೆಳೆದವರು. ಅವರೇ ಹೇಳಿದಂತೆ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹಸ್ತಪ್ರತಿ ಬರೆದರು.
ಕೀರ್ತಿನಾಥ ಕುರ್ತುಕೋಟಿ ಅವರನ್ನು ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ ಭೇಟಿಯಾಗಿ ಚರ್ಚಿಸಿದ್ದೇ ಸಾಹಿತ್ಯದ ಶ್ರೀಕಾರ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಲಿಸಿದರು. ಬರೆದರು, ಬರೆಯಲಾರಂಭಿಸಿದರು, ನಂತರ ಹಾಡಿಸಿದರು. ಹಾಡಿದ್ದನ್ನು ರಾಗದ ಜೊತೆ ಸರೋದ್ ನುಡಿಸಿದರು. ಸರೋದ್‌ದ ಜೊತೆಗೆ ಜೀವನ ಸಾಗಾಟ ಆರಂಭವಾಯಿತು. ಇನ್ನು ಅವರ ಹೆಸರು ಚಿರಸ್ಥಾಯಿಯಾಗಬೇಕಾಗಿದ್ದು ಅವರ ಶಿಷ್ಯರಿಂದ.. ೨೦೦೪ ರಲ್ಲಿ ಪಂ. ರಾಜೀವ್ ತಾರಾನಾಥ್ ಅವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಅವರೊಟ್ಟಿಗೆ ಎಂತೆಂತಹ ಕಲಾವಿದರು ಪಾಲ್ಗೊಂಡಿದ್ದರೆಂಬುದು ಕಂಡು ಇವತ್ತಿಗೂ ಕೂಡ ನಮಗೆ ಒಂದು ರೀತಿಯ ಪುಳಕವಾಗುತ್ತದೆ. ಅವರ ಆತ್ಮಕ್ಕೆ ಇದೋ ನನ್ನ ಶ್ರದ್ಧಾಂಜಲಿ.