For the best experience, open
https://m.samyuktakarnataka.in
on your mobile browser.

ರಾಡ್‌ನಿಂದ ಹೊಡೆದು ವ್ಯಕ್ತಿಯ ಕೊಲೆ

10:17 PM Feb 07, 2024 IST | Samyukta Karnataka
ರಾಡ್‌ನಿಂದ ಹೊಡೆದು ವ್ಯಕ್ತಿಯ ಕೊಲೆ

ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ಇಲ್ಲಿಯ ಭೋವಿಗಲ್ಲಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಮೂಲತಃ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಹಾಗೂ ಇಲ್ಲಿಯ ಭೋವಿಗಲ್ಲಿಯ ಫಕ್ಕಿರೇಶ ಪ್ಯಾಟಿ(೪೦) ಎಂಬಾತನೇ ಹತ್ಯೆಯಾದ ಯುವಕ. ತಂದೂರಿ ರೊಟ್ಟಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸಪ್ಲೈಯರ್ ಕೆಲಸ ಮಾಡುತ್ತಿದ್ದ ಕನ್ಯಯ ಕೆ ಮತ್ತು ಫಕ್ಕಿರೇಶ ಮಧ್ಯೆ ಜಗಳ ನಡೆದಿದ್ದು, ಕನ್ಯಯ ಫಕ್ಕಿರೇಶನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ದಾಂಡೇಲಿ ಮೂಲದ ಕನ್ಯಯ ಕೆ ಎಂಬಾತ ಇಲ್ಲಿಯ ವಿಮಲ್ ಹೊಟೆಲ್‌ಗೆ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದನು. ಅದೇ ರೀತಿ ಫಕ್ಕಿರೇಶ ಸಹ ತಂದೂರಿ ರೊಟ್ಟಿ ಮಾಡಲು ಸೇರಿದ್ದನು. ಇಬ್ಬರ ಮಧ್ಯೆ ಮಂಗಳವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದಿದೆ.
ತಕ್ಷಣ ಮಧ್ಯ ಪ್ರವೇಶಿಸಿದ ಹೊಟೆಲ್ ಮಾಲೀಕರು ಗಲಾಟೆಯನ್ನು ಮುಗಿಸಿ ಬುದ್ಧಿವಾದ ಹೇಳಿದ್ದಾರೆ. ಆದರೆ ಕನ್ಯಯ ಅಷ್ಟಕ್ಕೆ ಸುಮ್ಮನಾಗದೇ ತಡರಾತ್ರಿ ಪುನಃ ಆತನೊಂದಿಗೆ ತಂಟೆ ತೆಗೆದು ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆಂದು ಹೇಳಲಾಗಿದೆ. ತೀವ್ರ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಫಕ್ಕಿರೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.