For the best experience, open
https://m.samyuktakarnataka.in
on your mobile browser.

ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಪಾತ್ರ ಮುಖ್ಯ

01:54 PM Dec 18, 2023 IST | Samyukta Karnataka
ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಪಾತ್ರ ಮುಖ್ಯ

ಕಲಬುರಗಿ: ಇದೀಗ ಶಿಕ್ಷಣ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಶ್ರೀ ಶರಣ ಬಸವ ವಿಶ್ವ ವಿದ್ಯಾಲಯದ 5 ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಮಾಹಿತಿ ತಂತ್ರಜ್ಞಾನದಲ್ಲಿ ದೇಶದಲ್ಲಿಯೇ ಮುಂದಿದೆ. ಇದು ರಾತ್ರೋ ರಾತ್ರಿ ಆದ ಬೆಳವಣಿಗೆಯಲ್ಲ. ರಾಜ್ಯದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದಿದೆ. ಹಲವಾರು ವರ್ಷಗಳ ಸತತ ಪ್ರಯತ್ನದಿಂದಾಗಿ ಇಂದು ರಾಜ್ಯ ದೇಶದಲ್ಲಿಯೇ ಎಜುಕೇಷನಲ್ ಹಬ್ ಆಗಿ ಪರಿವರ್ತನೆ ಹೊಂದಿದೆ.
ರಾಜ್ಯದ ಯುವ ಶಕ್ತಿಯ ಮಾನವ ಸಂಪನ್ಮೂಲ ಸರಿಯಾಗಿ ಬಳಿಸಿಕೊಂಡರೆ ವಿಶ್ವದಲ್ಲೇ ನಂಬರ್ ಒನ್ ಆಗಬಹುದು. ಇದು ಕೇವಲ ಬೆಂಗಳೂರಿನಲ್ಲಿ ಮಾಡಿದರೆ ಮಾತ್ರ ಸಾಧ್ಯವಿಲ್ಲ ಶರಣಬಸವ ವಿವಿಯಂತ ವಿದ್ಯಾಸಂಸ್ಥೆ ಈ ಭಾಗದಲ್ಲಿ‌ ಶಿಕ್ಷಣದ ಹಸಿವನ್ನು ನೀಗಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ‌ ತಕ್ಕಂತೆ ಮಾನವ ಸಂಪನ್ಮೂಲ ಗಳನ್ನು ಸೃಷ್ಟಿಸುತ್ತಿದೆ ಎಂದು ಶ್ಲಾಘಿಸಿದರು.
ತಾವು ಇತ್ತೀಚಿಗೆ ಅಮೇರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇನ್ಟೆಲ್, ಜಾನ್ಸನ್ ಅಂಡ್ ಜಾನ್ಸನ್, ಸೇರಿದಂತೆ 44 ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಅಮೇರಿಕಾದ ಬಹುತೇಕ ಕಂಪನಿಗಳು‌ ಭಾರತೀಯ ಅದರಲ್ಲೂ ಕರ್ನಾಟಕದ ಸಂಪನ್ಮೂಲವನ್ನು ಅವಲಂಬಿಸಿವೆ. ಹಾಗಾಗಿ, ಸ್ಕಿಲ್ ಅಡ್ವೈಸರಿ ಕಮಿಟಿ‌ ಸ್ಥಾಪನೆ ಮಾಡುವ ಮೂಲಕ‌ 51 ಐಟಿ ಕಂಪನಿಗಳ ಜೊತೆಗೆ ಮಾತಕತೆ ನಡೆಸಲಾಗುತ್ತಿದ್ದು, ಚಿಪ್‌ಡಿಸೈನ್ ಗೆ ಸಂಬಂಧಿಸಿದಂತೆ ಮಹತ್ತರ ನಿರ್ಧಾರ ಕೈಗೊಳ್ಳಲಿದ್ದೇವೆ. ಜೊತೆಗೆ ಅಮೆರಿಕಾದಲ್ಲಿ ಬೇಕಾಗಿರುವ ಚಿಪ್ ತಯಾರಿಕ‌ ಸಂಪನ್ಮೂಲ ಒದಗಿಸುವ ಬಗ್ಗೆ ಕ್ರಮ‌ಕೈಗೊಳ್ಳಲಾಗುವುದು ಎಂದರು.
ಐಎಎಸ್,‌ ಐಪಿಎಸ್, ಪಾರೆಸ್ಟ್ ಸರ್ವೀಸ್, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜಿರಾಗುವ ಯುವಕ‌ ಯುವತಿಯರಿಗೆ ತರಬೇತಿ‌ ನೀಡಲು ಕಲಬುರಗಿ ನಗರದಲ್ಲಿ ರೂ‌10 ಕೋಟಿ‌ ವೆಚ್ಚದಲ್ಲಿ ತರಬೇತಿ ಕೇಂದ್ರವೊಂದನ್ನು ತೆರೆಯಲಾಗುತ್ತಿದೆ. ಸದರಿ ಕೇಂದ್ರಕ್ಕೆ ಕೆಕೆಆರ್ ಡಿಬಿ ಯಿಂದ ಅನುದಾನ ಒದಗಿಸಲಾಗುವುದು ಎಂದರು. ನಾನು ಇತ್ತೀಚೆಗೆ ನೋಕಿಯಾ ಕಂಪನಿಗೆ ಭೇಟಿ ನೀಡಿದಾಗ ಅಲ್ಲಮಪ್ರಭು ಅವರ ಹೆಸರಿನಲ್ಲಿ ಘಟಕವೊಂದನ್ನು ಸ್ಥಾಪಿಸಲಾಗಿದೆ. ಕಾರಣ ನೋಕಿಯಾ‌ ಕಂಪನಿಯಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಜನರು‌‌ ಕೆಲಸ ಮಾಡುತ್ತಿದ್ದಾರೆ. ಇದು ನಮಗೆ ಹೆಮ್ಮೆ ತರುವ ಕೆಲಸ ಎಂದರು.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಕುರಿತು ಹಾರೈಸಿದ ಪ್ರಿಯಾಂಕ್ ಖರ್ಗೆ ಮುಂದಿನ ಜೀವನದಲ್ಲಿ‌ ಬರುವ ಪ್ರತಿಯೊಂದ ಸವಾಲುಗಳನ್ನು ಎದುರಿಸಿ‌ ಮುಂದುವರೆಯಿರಿ ಸಚಿವನಾಗಿ ಹಾಗೂ ಕರ್ನಾಟಕ ಸರ್ಕಾರ ನಿಮ್ಮೊಂದಿಗೆ ಇರುತ್ತೇವೆ ಎಂದು ಅಭಯ ನೀಡಿದರು.