ರೈತರ ತಲೆಮೇಲೆ ಬಂಡೆ ಹಾಕಿದ ಸರ್ಕಾರ: ಆಚಾರ್
ಕೊಪ್ಪಳ: ಜಲಾಶಯದ ಕ್ರಸ್ಟ್ ಗೇಟುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ, ಸರ್ಕಾರ ಬೇಜಾಬ್ದಾರಿಯಿಂದ ರೈತರ ತಲೆ ಮೇಲೆ ಬಂಡೆ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲ್ಲೂಕಿನ ಮುನಿರಾಬಾದ್ ಗ್ರಾಮದ ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಡುರಾತ್ರಿಯಲ್ಲಿ ೧೯ನೇ ಕ್ರಸ್ಟ್ ಗೇಟ್ ಮುರಿದುಹೋಗಿದ್ದು, ಆ ಕಬ್ಬಿಣದ ಗೇಟ್ ಎಲ್ಲಿಯೂ ಇಲ್ಲವೇ ಇಲ್ಲ. ಸದ್ಯ ನಾನು ನೋಡಿದ್ದು, ಆ ಗೇಟಿನ ಅಡ್ರೆಸ್ಸೇ ಇಲ್ಲ. ಉಳಿದ ಗೇಟುಗಳೂ ಬಿರುಕು ಬಿಟ್ಟಿವೆ. ಜವಾಬ್ದಾರಿಯುತ ಸರ್ಕಾರ ಎಲ್ಲಿ ಹೋಗಿತ್ತು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರು ಜಲಾಶಯವನ್ನು ನಂಬಿದ್ದಾರೆ. ರೈತರ ಕಷ್ಟಗಳು ಗೊತ್ತಿದ್ದವರಿಗೆ ಮಾತ್ರ ನೀರು ಪೋಲಾಗುವುದರ ನೋವು ತಿಳಿಯುತ್ತದೆ. ಸರ್ಕಾರದ್ದೇ ತಪ್ಪಿದ್ದು, ಸರ್ಕಾರ ಆದೇಶ ಕೊಟ್ಟಂತೆ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಮುಖ್ಯಮಂತ್ರಿ ಮತ್ತು ಇಲಾಖೆಯ ಮುಖ್ಯಸ್ಥರು ಸರಿಯಾಗಿ ಕಾರ್ಯನಿರ್ವಹಿಸಬೇಕು. ೩೫ ಸಾವಿರ ಕ್ಯೂಸೆಕ್ ಒಂದೇ ಗೇಟ್ ನಲ್ಲಿ ಹೋಗುತ್ತದೆ. ಒಂದು ಬೆಳೆಗೆ ೬೪ ಟಿಎಂಸಿ ನೀರು ಬೇಕಾಗುತ್ತದೆ. ಹಿಂಗಾರು ಮಳೆ ಆಗದಿದ್ದರೇ ಹೀಗಿರುವ ಬೆಳೆಯೇ ಕೈಗೆ ಬರುವುದಿಲ್ಲ. ಎಲ್ಲದನ್ನೂ ಬಿಟ್ಟು, ಸರ್ಕಾರ ಸರಿ ಮಾಡದಿದ್ದರೇ ಮೂರು ರಾಜ್ಯದ ಜನರು ನಿಮ್ಮ ವಿರುದ್ಧ ಬೀದಿಗೆ ಇಳಿಯಬೇಕಾಗುತ್ತದೆ ಎಂದರು.
ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಬೇಡಿಕೆ ಇತ್ತು. ಆದರೆ ಎರಡು ರಾಜ್ಯಗಳ ಜತೆಗೆ ಚರ್ಚಿಸಬೇಕು. ಅಂದಾಗ ಮಾತ್ರ ಕೈಗೂಡಲಿದೆ ಎಂದರು.
ಬಳ್ಳಾರಿ ವಿಭಾಗೀಯ ಸಹ ಪ್ರಭಾರಿ ಚಂದ್ರಶೇಖರ ಪಾಟೀಲ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ್ ಕ್ಯಾವಟರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ್ ಇದ್ದರು.