`ಲವ್ ಜಿಹಾದ್' ಯೋಜನಾಬದ್ಧ ಕೃತ್ಯ
ಹುಬ್ಬಳ್ಳಿ: ಕೆಲವೇ ದಿನಗಳ ಅಂತರದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಐದು ಲವ್ ಜಿಹಾದ್ ಪ್ರಕರಣಗಳು ನಡೆದಿವೆ. ಈ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದೊಂದು ಯೋಜನಾಬದ್ಧ ಷಡ್ಯಂತ್ರ ಎಂಬುದು ಸಾಬೀತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ಯ ಕೋಮಿನ ಯುವತಿಯರು ಹಿಂದೂ ಹುಡುಗರನ್ನು ಏಕೆ ಪ್ರೀತಿಸುತ್ತಿಲ್ಲ? ಏಕೆ ಮದುವೆ ಆಗುತ್ತಿಲ್ಲ? ಕೇವಲ ಹಿಂದೂ ಯುವತಿಯರು ಮಾತ್ರ ಏಕೆ ಅನ್ಯ ಕೋಮಿನವರ ಪ್ರೀತಿಯ ಬಲೆಗೆ ಬೀಳುತ್ತಿದ್ದಾರೆ ಎಂದು ಪ್ರಶ್ನಿಸಿದ ರವಿ, ಲವ್ ಜಿಹಾದ್ ನಮ್ಮ ಹೆಣ್ಣುಮಕ್ಕಳ ಬಾಳನ್ನು ಹಾಳು ಮಾಡುವುದರ ಜೊತೆಗೆ ಮತಾಂತರದ ಭೀಕರತೆಯನ್ನು ತೋರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಔರಂಗಜೇಬನ ಕಾಲದ ರೀತಿಯಲ್ಲಿ ಈಗ ಭಯ ಹುಟ್ಟಿಸಲಾಗುತ್ತಿದೆ. ಜಿಹಾದಿಗಳ ಮೂಲಕ ಮತಾಂತರ ಮಾಡಲಾಗುತ್ತಿದೆ. ವೋಟ್ ಜಿಹಾದಿ ಮೂಲಕ, ಶರಿಯಾಗೆ ಸಪೋರ್ಟ್ ಮಾಡುವವರಿಗೆ ಇದು ಅಸ್ತ್ರವಾಗಿದೆ ಎಂದು ಹೇಳಿದರು.