For the best experience, open
https://m.samyuktakarnataka.in
on your mobile browser.

ಲೋಕಾಯುಕ್ತರ ಬಲೆಗೆ ಮೂಡಿಗೆರೆ ಬಿಇಓ

11:41 AM Dec 27, 2023 IST | Samyukta Karnataka
ಲೋಕಾಯುಕ್ತರ ಬಲೆಗೆ ಮೂಡಿಗೆರೆ ಬಿಇಓ

ಚಿಕ್ಕಮಗಳೂರು: ಅನುಕಂಪದ ಆಧಾರದಲ್ಲಿ ಕೆಲಸ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ 10,000 ರೂ. ಲಂಚ ಪಡೆಯುತ್ತಿದ್ದ ಮೂಡಿಗೆರೆ ಬಿಇಓ ಹೇಮಂತ್ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.

ತೇಗೂರು ಗ್ರಾಮದ ನಿವಾಸಿ ರಜನಿಕಾಂತ್ ಮೂಡಿಗೆರೆ ತಾಲ್ಲೂಕು, ಹೊಯ್ಸಳಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅವರು ಹೃದಯಘಾತದಿಂದ ನಿಧನರಾಗಿದ್ದು ಆ ಕೆಲಸವನ್ನು ಅನುಕಂಪದ ಆಧಾರದಲ್ಲಿ ನೀಡುವಂತೆ ಅವರ ಪತ್ನಿ ಕೋರಿಕೆ ಸಲ್ಲಿಸಿದ್ದರು.

ಅನೇಕ ಬಾರಿ ಕಚೇರಿಗೆ ಅಲೆದು ಸುಸ್ತಾಗಿ ದ್ವಿತೀಯ ದರ್ಜೆ ಗುಮಾಸ್ತ ಬಶೀರ್ ಅಹ್ಮದ್ ರವರಲ್ಲಿ ವಿಚಾರಿಸಿದಾಗ ಪ್ರತಿ ಕಡತಕ್ಕೆ 15000 ಗಳನ್ನು ಬಿಒಗೆ ನೀಡುವಂತೆ ತಿಳಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ದೂರವಾಣಿ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ 15000 ಬೇಡಿಕೆ ಬಗ್ಗೆ ಪ್ರಸ್ತಾಪಿಸಿದಾಗ, ಎಲ್ಲರಿಗೂ ಅಷ್ಟೇ ನಿಗದಿಪಡಿಸಲಾಗಿದೆ ಎಂದು ಉತ್ತರಿಸಿದ್ದು, ಅಂತಿಮವಾಗಿ 10,000 ನೀಡಲು ದೂರುದಾರರು ಸಮ್ಮತಿಸಿದ್ದರು ಎಂದು ಹೇಳಲಾಗಿದೆ.

ಅಧಿಕಾರಿಗಳ ಜೊತೆ ಮಾತನಾಡಿದ ಸಂಭಾಷಣೆಯನ್ನು ಆಡಿಯೋ ಮಾಡಿಕೊಂಡು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿ ಅನಿಲ್ ರಾತೋಡ್ ನೇತೃತ್ವದಲ್ಲಿ ದಾಳಿ ನಡೆಸಿ ಬಿಇಒ ಹೇಮಂತ್ ರಾಜ್ ರನ್ನು ಬಂಧಿಸಲಾಗಿದೆ.