ಲೋಕ ಚುನಾವಣೆ ಬಳಿಕ ಸಿದ್ದರಾಮಯ್ಯ ರಾಜೀನಾಮೆ
ಹುಬ್ಬಳ್ಳಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗುಂಪುಗಾರಿಕೆಯಿಂದಾಗಿ ಬಿದ್ದು ಹೋಗಲಿದ್ದು, ಲೋಕಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರ ಕೆಡವಲು ಆಪರೇಷನ್ ಅವಶ್ಯಕತೆಯಿಲ್ಲ. ಅವರಲ್ಲಿರುವ ಗುಂಪುಗಾರಿಕೆಯಿಂದಲ್ಲೇ ಸರ್ಕಾರ ಪತನವಾಗುತ್ತದೆ. ಅಧಿಕಾರಕ್ಕಾಗಿ ಅವರಲ್ಲಿಯೇ ಕಿತ್ತಾಟ ನಡೆದಿದೆ ಅದಕ್ಕೆ ಗುಬ್ಬಿ ಶಾಸಕರ ಬಹಿರಂಗ ಹೇಳಿಕೆಯೇ ಸಾಕ್ಷಿ ಎಂದರು.
ಕೆಲವು ದಿನಗಳ ಹಿಂದೆಷ್ಟೇ ದಲಿತ ಮುಖ್ಯಮಂತ್ರಿ ಕೂಗು ಬಲವಾಗಿ ಕೇಳಿ ಬಂದಿತ್ತು. ಅನಂತರ ನಾಲ್ಕು ಡಿಸಿಎಂ ಮಾಡಬೇಕೆಂಬುದು ಮುನ್ನಲೆಗೆ ಬಂದಿತ್ತು. ಈಗ ಸಿಎಂ ಬದಲಾವಣೆ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಈ ಎಲ್ಲ ಬೆಳವಣಿಗೆ ನೋಡಿದಾಗ ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರ ಪತನವಾಗುವುದು ಖಚಿತ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ೫೦ ಕೋಟಿ ರೂ. ಆಮೀಷ ವೊಡ್ಡಿರುವುದು ಹಸಿ ಸುಳ್ಳು. ಕಾಂಗ್ರೆಸ್ನವರು ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಪತನ ಮಾಡಲು ಕಾಂಗ್ರೆಸ್ನಲ್ಲಿಯೇ ಒಳತಂತ್ರ ರೂಪಿಸಲಾಗುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರು ಹಸಿಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದರು.
ಕೇಂದ್ರದಿಂದ ಅನುದಾನದ ಬಂದಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೋಗಿದ್ದು ಇತಿಹಾಸದಲ್ಲೇ ಮೊದಲು. ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ರಾಜಕೀಯ ಸ್ಟಂಟ್ ಮಾಡಲು ಮುಂದಾಗಿದೆ. ಚುನಾವಣೆ ಸಮಯದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಈ ತಂತ್ರ ರೂಪಿಸಿದೆ. ಅನುದಾನದ ಕುರಿತು ಚರ್ಚೆ ಮಾಡಲು ಬೇರೆ ಬೇರೆ ವೇದಿಕೆಗಳಿವೆ. ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಚರ್ಚೆ ಮಾಡಬಹುದು. ಮಲ್ಲಿಕಾರ್ಜುನ ಖರ್ಗೆ ಅವರೇ ವಿರೋಧ ಪಕ್ಷದ ನಾಯಕರು. ಆದರೆ, ಅವರು ಚರ್ಚೆ ಮಾಡುತ್ತಿಲ್ಲ. ಚುನಾವಣೆಯ ಪೂರ್ವದಲ್ಲಿ ದೆಹಲಿಗೆ ಹೋಗಿ ಹೋರಾಟ ಮಾಡುವ ಸ್ಟಂಟ್ ಮಾಡಿದ್ದರು. ಈದೀಗ ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿದ್ದಾರೆ. ಇದೆಲ್ಲ ಚುನಾವಣೆ ಪ್ರಚಾರ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಉತ್ತಮವಾದ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ಅನುದಾನ ವಿಳಂಬ ಆದಾಗ ರಾಜ್ಯ ಸರ್ಕಾರ ತನ್ನ ಬಳಿ ಇದ್ದ ಹಣ ಖರ್ಚು ಮಾಡಿದ ಉದಾಹರಣೆಗಳು ಇವೆ. ನರೇಂದ್ರ ಮೋದಿಯವರ ಮೇಲೆ ಅಪಪ್ರಚಾರ ಮಾಡುವದು ಅಕ್ಷಮ್ಯ ಅಪರಾಧ ಎಂದು ಶೆಟ್ಟರ್ ಹೇಳಿದರು.