ವಾಡಿ: ಮೂರು ದಿನಗಳ ಕಾಲ ಸೆಕ್ಷನ್ 144 ಜಾರಿ
ಮುಸ್ಲಿಮರ ಅಂಗಡಿ ಬಲವಂತವಾಗಿ ಮುಚ್ಚಿಸಲು ಯತ್ನ..!
ವಾಡಿ: ರಾಮ ಮಂದಿರ ಉದ್ಘಾಟನೆ ನಿಮಿತ್ಯ ವಾಡಿ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಶೋಭಾ ಯಾತ್ರೆ ಮೆರವಣಿಗೆ ವೇಳೆ ದೊಡ್ಡಮಟ್ಟದ ಗದ್ದಲ ಉಂಟಾದ ಘಟನೆ ಸೋಮವಾರ ತಡರಾತ್ರಿ ಜರುಗಿದೆ.
ಪೊಲೀಸರ ಮಧ್ಯ ಪ್ರವೇಶದಿಂದ ದೊಡ್ಡ ಮಟ್ಟದ ಘರ್ಷಣೆ ತಪ್ಪಿದಂತಾಗಿದೆ.
ರಾಮ ಭಕ್ತರ ಮೆರವಣಿಗೆ ಬಸ್ ಸ್ಟ್ಯಾಂಡ್ ಹತ್ತಿರ ಬರುತ್ತಿದ್ದಂತೆಯೇ ಜಹೂರ್ ಖಾನ್ ಗೆ ಸೇರಿದ ರೆಸ್ಟೋರೆಂಟ್ ಒಳಗೆ ನುಗ್ಗಿದ ಕೆಲ ಹಿಂದೂ ಕಾರ್ಯಕರ್ತರು ಯುವಕರು ರೆಸ್ಟೋರೆಂಟ್ ಮುಚ್ಚದೇ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಬಲವಂತವಾಗಿ ಮುಚ್ಚಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ನಂತರ ಅದೇ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಜಮಾಯಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಎರಡು ಸಮುದಾಯದ ಯುವಕರನ್ನು ವಾಪಸು ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಪರಿಸ್ಥಿತಿ ವಿಷಮ ಸ್ಥಿತಿಗೆ ತೆರಳುವ ಸಾಧ್ಯತೆ ಹಿನ್ನೆಲೆಯಲ್ಲಿ ಜ. 25 ಬೆಳಿಗ್ಗೆ 6 ಗಂಟೆವರೆಗೆ ಪಟ್ಟಣದಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ತೀವ್ರ ಗದ್ದಲಕ್ಕೆ ಕಾರಣ ವಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಮಮೂರ್ತಿ ಮೆರವಣಿಗೆ ಹಾಗೂ ಶೋಭ ಯಾತ್ರೆಗೆ ಸೋಮವಾರ ಅವಕಾಶ ನೀಡಿರಲಿಲ್ಲ.