For the best experience, open
https://m.samyuktakarnataka.in
on your mobile browser.

ವಿಧಾನಸೌಧದಲ್ಲಿಯೇ ನಿಮ್ಮ ಬ್ರದರ್ಸ್ ಬಾಂಬ್ ಇಡ್ತಾರೆ

10:59 PM Mar 12, 2024 IST | Samyukta Karnataka
ವಿಧಾನಸೌಧದಲ್ಲಿಯೇ ನಿಮ್ಮ ಬ್ರದರ್ಸ್ ಬಾಂಬ್ ಇಡ್ತಾರೆ

ಬಳ್ಳಾರಿ: ಬಾಂಬ್ ಹಾಕಿದವರನ್ನೆಲ್ಲ ನಮ್ಮ ಬ್ರದರ್ಸ್ ಅಂತ ಹೇಳಿಕೊಳ್ತಾ ಹೋದರೆ ಮುಂದೆ ಅವರು ವಿಧಾನಸೌಧಕ್ಕೆ ಬಾಂಬ್ ಇಡ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಬಿ. ಶ್ರೀರಾಮುಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಟಾಂಗ್ ನೀಡಿದ್ದಾರೆ.
ಭಟ್ಕಳದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದಾಗ ಡಿಕೆಶಿ, ಅವರ ಬಗ್ಗೆ ಹಾಗೆ ಮಾತನಾಡಬಾರದು. ಅವರು ನಮ್ಮ ಬ್ರದರ್ಸ್, ಅವರು ಅಮಾಯಕರು ಎಂದಿದ್ದರು. ಈಗ ಬೆಂಗಳೂರಿನ ರಾಮೇಶ್ವರಂ ಹೋಟೆಲ್‌ನಲ್ಲೂ ಆದ ಬಾಂಬ್ ಸ್ಫೋಟಕ್ಕೂ ಅವರು ಹೀಗೇ ಎನ್ನುತ್ತಾರೆ. ಹಾಗೆ ಬ್ರದರ್ಸ್, ಅಮಾಯಕರು ಎಂದು ಅವರ ತುಷ್ಟೀಕರಣ ಮಾಡುತ್ತಾ ಹೋದರೆ ಮುಂದೆ ಅವರು ವಿಧಾನಸೌಧಕ್ಕೆ ನುಗ್ಗಿ ಬಾಂಬ್ ಇಡ್ತಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ನಾಯಕರಿಗೆ ದೇಶಪ್ರೇಮ ಇಲ್ಲ. ನಮ್ಮದೇ ಭಾಗದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಾಸೀರ್ ಹುಸೇನ್ ಪಕ್ಕದಲ್ಲಿಯೇ ನಿಂತು ವಿಧಾನ ಸೌಧದ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಇವರಿಗೆಲ್ಲಾ ದೇಶದ ಬಗ್ಗೆ ಗೌರವ ಇದೆಯಾ ಎಂದು ಕಿಡಿಕಾರಿದರು.
ಒಂದು ಕಾಲದಲ್ಲಿ ಶಾಂತಿಗೆ ಹೆಸರಾಗಿದ್ದ ಬಳ್ಳಾರಿ ಈಗ ಉಗ್ರರ ಅಡಗು ತಾಣವಾಗಿದೆ. ರಾಮೇಶ್ವರಂನಲ್ಲಿ ಬಾಂಬ್ ಸ್ಫೋಟಿಸಿದ ಉಗ್ರ ನಮ್ಮೂರಿಗೆ ಮೂರು ಬಾರಿ ಬಂದಿದ್ದ ಎಂಬುದನ್ನು ಎನ್‌ಐಎ ಹೇಳಿದೆ. ಇದನ್ನು ನೋಡಿದರೆ ನಮ್ಮಲ್ಲಿಯೂ ಎಲ್ಲಿ ಬೇಕಿದ್ದರೂ ಉಗ್ರರು ವಾಸಮಾಡುತ್ತಿರಬಹುದು. ನಮ್ಮ ಜೊತೆಯೂ ಇರಬಹುದು ಎಂದು ಎಚ್ಚರಿಸಿದರು.