For the best experience, open
https://m.samyuktakarnataka.in
on your mobile browser.

ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ

04:10 PM Aug 23, 2024 IST | Samyukta Karnataka
ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ

ಬಡವರ ಆರೋಗ್ಯದ ಸಲುವಾಗಿ ವಿಶೇಷ ಕೋರ್ಸ್‌ಗಳ ಅಗತ್ಯವಿದೆ

ಹುಬ್ಬಳ್ಳಿ: ವೈದ್ಯಕೀಯ ಶಿಕ್ಷಣದಲ್ಲಿ ಸಾರ್ವಜನಿಕರ ಆರೋಗ್ಯದ ಸಲುವಾಗಿ ವಿಶೇಷ ಕೋರ್ಸ್‌ಗಳು ಹಾಗೂ ವಿಶೇಷ ಕೇಡರ್‌ಗಳನ್ನು ನಿರ್ಮಾಣ ಮಾಡಿ, ಬಡವರಿಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದೇ ಚಿಕಿತ್ಸೆ ನೀಡುವ ವ್ಯವಸ್ಥೆ ಬಂದರೆ ಆರೋಗ್ಯಕರವಾಗಿರುವ ಸಮಾಜ ನಿರ್ಮಾಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಇಂದು ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ದೇಶದಲ್ಲಿ ಬಡತನದ ವ್ಯವಸ್ಥೆ ಬೇರೆ ಬೇರೆ ಸ್ಥರದಲ್ಲಿದೆ. ಅತ್ಯಂತ ಬಡವರು, ಬಡವರು, ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗ ಹೀಗಿದೆ. ಬಡತನ ಮತ್ತು ಆರೋಗ್ಯದ ನಡುವೆ ಸಂಬಂಧ ಇದೆ. ಇದನ್ನು ಕಾನೂನು ರೂಪಿಸುವವರು ಅರ್ಥ ಮಾಡಿಕೊಳ್ಳಬೇಕು. ಬಡತನ ಎಲ್ಲಿದೆ. ಅಲ್ಲಿ ಸ್ವಚ್ಛತೆ ಹಾಗೂ ಪೌಷ್ಟಿಕ ಆಹಾರದ ಸಮಸ್ಯೆ ಇರುತ್ತದೆ. ಹಲವಾರು ರೋಗಗಳ ಉಲ್ಬಣ, ಮಕ್ಕಳು ಚಿಕ್ಕವರಿದ್ದಾಗ ರೋಗಗಳಿಗೆ ತುತ್ತಾಗಿ ಮುಂದೆ ಅವರು ಸದೃಢ ಆರೋಗ್ಯವಂತ ನಾಗರಿಕರಾಗುವುದಿಲ್ಲ. ನಮ್ಮ ಗಮನ ಬಡವರ ಆರೋಗ್ಯದ ಕಡೆಗೆ ಹೆಚ್ಚು ಒತ್ತು ಕೊಡಬೇಕು. ನಮ್ಮ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ನಾವು ಪಾಶ್ಚಿಮಾತ್ಯ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಇಟ್ಟುಕೊಂಡಿದ್ದೇವೆ. ಅಲ್ಲಿ ಶ್ರೀಮಂತರು ಮಧ್ಯಮ ವರ್ಗ ಎರಡೇ ಇರುವುದು. ಇಲ್ಲಿ ಅತ್ಯಂತ ಬಡವರು ಇರುವುದರಿಂದ ಐದು ವರ್ಷ ಎಂಬಿಬಿಎಸ್, ಎರಡು ವರ್ಷ ಪಿಜಿ, ಒಟ್ಟು ಎಂಟತ್ತು ವರ್ಷ ಕಲಿತು ನಾಲೈದು ಕೋಟಿ ರೂಪಾಯಿ ಖರ್ಚಾಗುತ್ತದೆ. ಸರ್ಕಾರದ ಸೀಟಿದ್ದರೆ ಸರ್ಕಾರದ ಎರಡುಮೂರು ಕೋಟಿ ಖರ್ಚಾಗುತ್ತದೆ. ಆದರೆ, ಅವರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಶ್ರೀಮಂತರಿಗೆ ಸೇವೆ ಕೊಡುತ್ತಾರೆ. ಮತ್ತೂ ಬಡವರ ಆರೋಗ್ಯ ಸಮಸ್ಯೆ ಹಾಗೇ ಉಳಿಯುತ್ತಿದೆ ಎಂದರು.
ಕೊವಿಡ್ ಸಂದರ್ಭದಲ್ಲಿ ನಮ್ಮ ಆಸ್ಪತ್ರೆಗಳ ಮೂಲ ಸೌಕರ್ಯ ಹೇಗಿತ್ತು ಎಂದು ನಮಗೆ ಅರಿವಿಗೆ ಬಂದಿದೆ. ನಾವು ಕೊವಿಡ್ ಸಂಕಷ್ಟವನು, ಅವಕಾಶವನ್ನಾಗಿ ಪರಿವರ್ತಿಸಿ ಎಲ್ಲಾ ಜಿಲ್ಲಾ ಹಾಗೂ ಪ್ರಮುಖ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜೆನ್ ‌ ವ್ಯವಸ್ಥೆ ಮಾಡಿದ್ದೇವೆ. ಐಸಿಯು ಕೂಡ ಆಯಿತು. ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡಬೇಕು. ಕೆಲವು ಕಡೆ ನಿರ್ವಹಣೆ ಸರಿಯಾಗಿಲ್ಲ. ಹೀಗಾಗಿ ಜನರು ಖಾಸಗಿಯವರ ಕಡೆ ಹೋಗುವಂತಾಗಿದೆ. ಇದರ ಬಗ್ಗೆ ಚಿಂತನೆ ಮಾಡಬೇಕು ಎಂದರು.

ನಾವಿದ್ದಾಗ ಡಯಾಲಿಸಿಸ್ ‌ ಸೈಕಲ್ ಹೆಚ್ಚಳ ಮಾಡಿದ್ದೇವೆ. ನಮ್ಮ ಕ್ಲಿನಿಕ್ ಮಾಡಿದ್ದೇವೆ. ಕಿವಿಗಳಿಗೆ ತೊಂದರೆಯಾದರೆ ಕಾಂಕ್ಲಿಯರ್ ಇನ್ಫಾಂಟ್ ವ್ಯವಸ್ಥೆ ಮಾಡಿದ್ದೇವೆ. ಹಲವಾರು ಸುಧಾರಣೆ ಮಾಡುವ ಅವಶ್ಯಕತೆ ಇದೆ. ಉತ್ತರ ಕರ್ನಾಟಕದ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇದೆ. ಇಲ್ಲಿನ ರೋಗಿಗಳು, ಬೆಡ್ ಮತ್ತು ವೈದ್ಯರ ನಡುವಿನ ಅನುಪಾತ ಬಹಳ ವ್ಯತ್ಯಾಸ ಇದೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಇದು ಬಹಳ ಅವಶ್ಯಕೆ ಇದೆ. ಖಾಸಗಿ ವಲಯದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಬಡವರ ಪರಿಸ್ಥಿತಿ ಬಹಳ ಕಷ್ಟ ಇದೆ. ನಾವೆಲ್ಲರೂ ಚಿಂತನೆ ಮಾಡಬೇಕಿದೆ. ನಾವೆಲ್ಲ ತಲೆ ಕೆಡಿಸಿಕೊಳ್ಳಬೇಕಿದೆ. ಒಂದು ಲಕ್ಷ ಕಟ್ಟಿದರೆ ಚಿಕಿತ್ಸೆ ನೀಡುತ್ತೇವೆ ಎನ್ನುತ್ತಾರೆ. ಇನ್ಸೂರೆನ್ ಇದ್ದರೆ ಮಾತ್ರ ಚಿಕಿತ್ಸೆ ನೀಡುತ್ತೇವೆ ಎನ್ನುತ್ತಾರೆ. ಎಮರ್ಜೆನ್ಸಿ ಇದೆ ಎನ್ನುತ್ತಾರೆ. ಯಾವುದೂ ಎಮರ್ಜೆನ್ನಿ ಇರುವುದಿಲ್ಲ. ಎಲ್ಲವೂ ಭಷ್ಟಾಚಾರ ಇದನ್ನು ಅಮೂಲಾಗ್ರ ಬದಲಾವಣೆ ಮಾಡಬೇಕು. ಇಡೀ ಸಮಾಜ ಬಡವರ ಪರವಾಗಿ ನಿಂತಾಗ ಮಾತ್ರ ಸಾಧ್ಯ ಇದೆ. ಅದೊಂದು ಕ್ರಾಂತಿ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಮಾಡಬೇಕಿದೆ ಎಂದು ಹೇಳಿದರು.

Tags :