ಶಾಸಕ ಭರತ್ ವಿರುದ್ಧ ಎಫ್ಐಆರ್
ಮಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಅವಹೇಳನಗೈದು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಶಾಸಕ ಡಾ. ವೈ. ಭರತ್ ಶೆಟ್ಟಿಯವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಪಂಜಿಮೊಗರಿನ ಉರುಂದಾಡಿಗುಡ್ಡಯ ಅನಿಲ್ ಕುಮಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಶಾಸಕತ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜು.೮ರಂದು ಕಾವೂರು ಜಂಕ್ಷನ್ನಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭರತ್ ಶೆಟ್ಟಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಪಾರ್ಲಿಮೆಂಟ್ನಿಂದ ದೂಡಿ ಹೊರಗೆ ಹಾಕಬೇಕು. ರಾಹುಲ್ ಗಾಂಧಿಯ ಕೆನ್ನೆಗೆ ಎರಡು ಬಡಿಯಬೇಕು ಎಂದು ಅನಿಸುತ್ತದೆ. ಅವಾಗ ಮಾತ್ರ ರಾಹುಲ್ ಗಾಂಧಿಗೆ ಬುದ್ಧಿ ಬರುತ್ತದೆ ಎಂದು ಹೇಳುವ ಮೂಲಕ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಅಲ್ಲೇ ಇದ್ದ ಶಾಸಕರಾದ ವೇದವ್ಯಾಸ ಕಾಮತ್, ಸಂಸದರಾದ ಬ್ರಿಜೇಶ್ ಚೌಟ ಮತ್ತಿತರರು ಕೂಡ ಪ್ರಚೋದಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅನಿಲ್ ಒತ್ತಾಯಿಸಿದ್ದರು. ಕಾವೂರು ಠಾಣೆಯಲ್ಲಿ ಶಾಸಕರಾದ ಭರತ್ ಶೆಟ್ಟಿಯ ವಿರುದ್ಧ ಪ್ರಕರಣ ದಾಖಲಾಗಿದೆ.