For the best experience, open
https://m.samyuktakarnataka.in
on your mobile browser.

ಶಿಗ್ಗಾವಿಯಲ್ಲಿ ಹೊಸ ಯುವಕರ ಬೆಂಬಲ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿದೆ

04:42 PM Oct 24, 2024 IST | Samyukta Karnataka
ಶಿಗ್ಗಾವಿಯಲ್ಲಿ ಹೊಸ ಯುವಕರ ಬೆಂಬಲ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿದೆ

ಹಾವೇರಿ(ಶಿಗ್ಗಾವಿ): ಶಿಗ್ಗಾವಿಯಲ್ಲಿ ಅದ್ಭುತವಾದ ಬೆಂಬಲ ದೊರೆಯುತ್ತಿದೆ. ನಮ್ಮ ಆತ್ಮೀಯರು, ಹಿರಿಯರ ಬೆಂಬಲದ ಜೊತೆಗೆ ಹೊಸ ಯುವಕರ ಬೆಂಬಲ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ದೊಡ್ಡ ಜನಶಕ್ತಿ ನಮ್ಮ ಪರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಈ ಬಾರಿ ಹೊಸ ಯುವಕರ ತಂಡ ನಮ್ಮ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬರುತ್ತಿದೆ ಎಂದರು.
ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋ‌ರ್ ಕುಮಾರ್ ಪುತ್ತೂರು ಆಯ್ಕೆ ಆಗಿದ್ದು, ಅದು ಸಂಸದ ಕೋಟ ಶ್ರೀವಿವಾಸ ಪೂಜಾರಿ ಅವರಿಂದ ಖಾಲಿಯಾಗಿದ್ದ ಸ್ಥಾನ. ಅಲ್ಲಿ ಜನಪ್ರತಿನಿಧಿಗಳು ನಮ್ಮ ಪರವಾಗಿದ್ದಾರೆ. ಅಲ್ಲದೇ, ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಜನರು ಮತ ಹಾಕಿದ್ದಾರೆ. ಅಲ್ಲಿ ಪಜ್ಞಾವಂತ ಮತದಾರರಿದ್ದಾರೆ. ಗ್ರಾಮ ಪಂಚಾಯತಿ, ಸ್ಥಳೀಯ ನಗರಸಭೆಯ ಸದಸ್ಯರು ಮತದಾನ ಮಾಡಿದ್ದಾರೆ ಎಂದರು.
ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಎರಡು ಸಾವಿರ ಕೋಟಿ ರೂ. ಕೊಟ್ಟಿಲ್ಲ. ಇವರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡದಿರುವುದರಿಂದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಈ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಕುಟುಂಬದವರು ಬಿಟ್ಟರೆ ಬೇರೆಯವರು ಅಭ್ಯರ್ಥಿ ಆಗುವುದಿಲ್ಲ ಎಂಬ ಕಾಂಗ್ರೆಸ್‌ನವರ ಹೇಳಿಕೆ ಕುರಿತು ಕೇಳಿದ ಪತಿಗೆ ಹರಿಕ್ರಿಯಿಸಿದ ಅವರು, ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಅಲ್ಲಿ ಕುಮಾರಸ್ವಾಮಿಯವರ ವರ್ಚಸ್ಸು ಚೆನ್ನಾಗಿದೆ. ಈ ಎಲ್ಲ ಪ್ರಕ್ರಿಯೆ ನಡುವೆ ಜನರು ಕಾಂಗ್ರೆಸ್‌ನವರನ್ನು ತಿರಸ್ಕಾರ ಮಾಡುತ್ತಾರೆ ಎಂದು ಹೇಳಿದರು.

Tags :