ಸಂಯುಕ್ತ ಕರ್ನಾಟಕ ಪತ್ರಿಕೆಯ ಜಾಣರ ಗುರು ಸಂಚಿಕೆ ವಿತರಣೆ
ಪರಿಶ್ರಮದಿಂದ ಅಧ್ಯಯನ ನಡೆಸಿ
ಬಾಗಲಕೋಟೆ: ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ನಡೆಸಿ ಯಶಸ್ವಿ ವ್ಯಕ್ತಿಗಳಾಗಿ ಸಮಾಜಕ್ಕೆ ಉತ್ತಮ ಕೊಡುಗೆ ಸಲ್ಲಿಸಬೇಕು ಎಂದು ನಿವೃತ್ತ ಉಪನ್ಯಾಸಕಿ ಪ್ರಮಿಳಾ ಪುರೋಹಿತ ಹೇಳಿದರು.
ನಗರದ ಬಿಟಿಡಿಎ ಸರಕಾರಿ ಪ್ರೌಢಶಾಲೆ ನಂ.16ರಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಜಾಣರ ಗುರು ವಿದ್ಯಾರ್ಥಿ ಸಂಚಿಕೆಯ ಪ್ರಾಯೋಜಿತ ಪ್ರತಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಒಂದು ಅಮೂಲ್ಯ ಅವಕಾಶ. ಮಕ್ಕಳು ಪಠ್ಯ ಪುಸ್ತಕ ಓದುವ ಜತೆಗೆ ದಿನ ಪತ್ರಿಕೆ ಓದುವ ರೂಢಿ ಬೆಳೆಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಜ್ಞಾನ ಸಂಪಾದಿಸಲು ಸಾಧ್ಯ ಎಂದರು.
ಶಾಲೆ ಮುಖ್ಯಗುರು ಶ್ರೀಮತಿ ಜಿ.ಎಸ್.ಖೋತ ಮಾತನಾಡಿ, ಪತ್ರಿಕೆಗಳಿಂದ ಸಾಮಾನ್ಯ ಜ್ಞಾನ ವೃದ್ಧಿಸುತ್ತದೆ. ಮಕ್ಕಳ ಜ್ಞಾನ ವಿಕಸನಕ್ಕೆ ಜಾಣರ ಗುರು ಪತ್ರಿಕೆ ಟಾನಿಕ್ ಇದ್ದಂತೆ. ವಿದ್ಯಾರ್ಥಿಗಳಿಗಾಗಿ ಸಂಯುಕ್ತ ಕರ್ನಾಟಕ ವಿಶೇಷ ಸಂಚಿಕೆ ರೂಪಿಸುತ್ತಿರುವುದು ಸ್ತುತ್ಯಾರ್ಹ ಎಂದರು.
ಶಿಕ್ಷಕ ಎ.ಎಸ್.ಆಲೂರ ಮಾತನಾಡಿ, ಸಂಯುಕ್ತ ಕರ್ನಾಟಕ ಪತ್ರಿಕೆ ನಡೆದು ಬಂದ ದಾರಿ ಹಾಗೂ ಸಮಾಜಕ್ಕೆ ಪತ್ರಿಕೆ ಸಲ್ಲಿಸಿದ ಕೊಡುಗೆ ಬಗ್ಗೆ ವಿವರಿಸಿದರು.
ಡಾ.ಪುಷ್ಪಲತಾ ಬಿಕನಳ್ಳಿ ವಂದಿಸಿದರು.
ಎಸ್.ಎಸ್.ಮಂತ್ರಿ, ಶಿವನಗೌಡ ಗೌಡರ, ಸದಾಶಿವ ಕುಂಬಾರ, ಲತಾ ಅರ್ಕಸಾಲಿ, ಸುರೇಖಾ ರಾಟಿ, ಎನ್.ಎಸ್.ಕುಲಕರ್ಣಿ, ಸಂಯುಕ್ತ ಕರ್ನಾಟಕ ಪತ್ರಿಕೆ ಪ್ರಸಾರಾಂಗ ವಿಭಾಗದ ಜಿಲ್ಲಾ ಪ್ರತಿನಿಧಿ ಮಂಜುನಾಥ ಅಂಬಿಗೇರ ಇತರರಿದ್ದರು. ಶಿವಶಂಕರ ಬದ್ನೂರ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.