ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಂಸ್ಕಾರ ನೀಡುವ ಪ್ರಕ್ರಿಯೆಯೇ ಶಿಕ್ಷಣ

04:00 AM Sep 23, 2024 IST | Samyukta Karnataka

ಪ್ರಾಚೀನ ಭಾರತದ ಮೂಲವೇ ಶಿಕ್ಷಣ ಎಂಬುದಾಗಿ ಹೇಳಿದರೆ ಅತಿಶಯೋಕ್ತಿಯೇನಲ್ಲ. ಶಿಕ್ಷಣವು ಪಂಚಸ್ತಂಭಗಳ ಆಲಯದ ಗರ್ಭಗೃಹದಂತಿರಬೇಕೆಂಬುದು ಭಾರತೀಯ ಶೈಕ್ಷಣಿಕ ಇತಿಹಾಸದ ಸತ್ಯ. ಶಿಕ್ಷಣವೆಂದರೆ ಕೇವಲ ಮಾಹಿತಿಗಳ ಸರಕಿನಿಂದ ವಿದ್ಯಾರ್ಥಿಯ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿ, ಅವನು ಆರ್ಥಿಕವಾಗಿ ಸಬಲನಾಗಿ ಸಮಾಜದಲ್ಲಿ ಒಂದಿಷ್ಟು ಘನತೆಯನ್ನು ಸಂಪಾದಿಸುವುದನ್ನು ಹೇಳಿಕೊಡುವುದಲ್ಲ. ಮಗುವಿನ ಆಂತರ್ಯದಲ್ಲಿ ಸಂಸ್ಕಾರ ರೂಪದಲ್ಲಿದ್ದ ಜ್ಞಾನವನ್ನು ಹೊರತೆಗೆದು ಮಾನಸಿಕವಾಗಿ, ಬೌದ್ಧಿಕವಾಗಿ, ದೈಹಿಕವಾಗಿ ಅವನನ್ನು ಸದೃಢನನ್ನಾಗಿ ಮಾಡಿ ಸಮಾಜದ ಹಿತಕ್ಕಾಗಿ ಶ್ರಮಿಸುವಂತೆ ವ್ಯಕ್ತಿತ್ವವನ್ನು ಸರ್ವತೋಮುಖವಾಗಿ ವಿಕಸನಗೊಳಿಸುವುದು.
ಇಂದಿನ ಶಿಕ್ಷಣವು ಮೂಲಭೂತವಾಗಿ ಮಾನವನಲ್ಲಿನ ಅಜ್ಞಾನವನ್ನು ನಿಗ್ರಹಿಸಿ, ಜ್ಞಾನವನ್ನು ನಿರ್ಮಿಸುವಂಥದ್ದು. ಆತನನ್ನು ಅನಾಗರಿಕನಿಂದ ನಾಗರಿಕನನ್ನಾಗಿ ರೂಪಿಸುವ ಪ್ರಕ್ರಿಯೆ ಎಂದೇ ನಂಬಿಕೆ. ಆದರೆ ಭಾರತೀಯ ಪರಂಪರಾಗತ ಶಿಕ್ಷಣ ಕ್ರಮಗಳು ಮಾನವನು ತನ್ನ ಜೀವನವನ್ನು ರೂಪಿಸಿಕೊಳ್ಳಲು ಅಗತ್ಯವಾದ ವಿವೇಕ, ಪ್ರಜ್ಞೆಯನ್ನು ಆತನಲ್ಲಿ ನಿರ್ಮಿಸುವುದಾಗಿತ್ತು. ಹಾಗೆ ವಿವೇಕ ಜಾಗರಣಗೊಂಡು ಜಗತ್ತಿನೊಂದಿಗಿನ ವ್ಯವಹಾರ ಅನುಭವಗಳಿಂದಲೇ ದೈನಂದಿನ ಜೀವನ ರೂಪಿಸಿಕೊಳ್ಳುತ್ತಾ ಬಂದವರು ನಾವು.
ವಿವೇಕಾನಂದರು ಹೇಳುವಂತೆ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ'. ಯಾವ ಬಗೆಯ ಶಿಕ್ಷಣದಿಂದ ಶೀಲ ರೂಪುಗೊಳ್ಳುವುದೋ, ಮನಃಶಕ್ತಿ ವೃದ್ಧಿಯಾಗುವುದೋ, ಬುದ್ಧಿ ವಿಕಾಸಗೊಳ್ಳುವುದೋ ಮತ್ತು ಯಾವುದರಿಂದ ನಮ್ಮ ಸ್ವಂತ ಕಾಲ ಮೇಲೆ ನಿಂತುಕೊಳ್ಳಬಲ್ಲೆವೋ ಅಂತಹ ಶಿಕ್ಷಣ ನಮಗೆ ಅವಶ್ಯಕ.' ಮೂಲತಃ ಶಿಕ್ಷಣವೆನ್ನುವುದು ಸಂಸ್ಕಾರವನ್ನು ನೀಡುವ ಪ್ರಕ್ರಿಯೆಯೇ ಆಗಿತ್ತು. ಆ ಕ್ರಿಯೆ ಶತಮಾನಗಳು ಕಳೆದಂತೆ ತನ್ನ ಮೂಲರೂಪವನ್ನು ಬದಲಾಯಿಸಿಕೊಳ್ಳುತ್ತ ಸಾಗಿ ಬಂದದ್ದು ಒಂದು ವಿಶಿಷ್ಟವಾದ ದೀರ್ಘನೋಟ. ವಿದ್ಯಾರ್ಥಿಗಳು ಕಲೆ, ವಿಜ್ಞಾನ, ತಂತ್ರಜ್ಞಾನ ಮತ್ತಿತರ ಯಾವುದೇ ವಿಷಯಗಳನ್ನು ಕಲಿಯಲಿ ಅವರು ದೇಶೀಯ ಸಂಸ್ಕೃತಿ, ಭಾಷೆ ಮತ್ತು ಪರಂಪರೆಗಳನ್ನು ರೂಢಿಸಿಕೊಳ್ಳುವಂತಾಗಬೇಕು. ಬೌದ್ಧಿಕ ಬೆಳೆವಣಿಗೆಗೆ ಪೂರಕವಾಗಿ ದೈಹಿಕ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು.ಉತ್ತಮವಾದ ವಿಚಾರಗಳು ಎಲ್ಲೆಡೆಯಿಂದಲೂ ನಮ್ಮ ಕಡೆಗೆ ಬರಲಿ' ಎಂಬ ಆದರ್ಶದಂತೆ ಆಧುನಿಕ ಜೀವನ ನಿರ್ವಹಣೆಗೆ ಅಗತ್ಯವಾದ ವಿಜ್ಞಾನ, ತಾಂತ್ರಿಕತೆ ಮುಂತಾದವುಗಳು ಎಲ್ಲಿಂದ ಬಂದರೂ ಅವನ್ನು ಹಿತಮಿತವಾಗಿ ಸ್ವೀಕರಿಸಿಕೊಳ್ಳಲು ಶಿಕ್ಷಣ ಅಡ್ಡಿಯಾಗಬಾರದು. ಶಾಲೆ, ಕಾಲೇಜು-ವಿಶ್ವವಿದ್ಯಾಲಯಗಳು ಕಲಿಯುವಿಕೆಯ ಮಂದಿರಗಳಾಗಬೇಕೇ ವಿನಾಃ ಸ್ವಾರ್ಥ, ರಾಜಕೀಯ ಮತ್ತು ದೌರ್ಜನ್ಯಗಳ ಗೂಡುಗಳಾಗಬಾರದು.
ಇಂದೀಗ ಭಯ ಇರುವುದು ಶಿಕ್ಷಣದ ಗುಣಮಟ್ಟದಲ್ಲಲ್ಲ; ಅದರ ಗುರಿಯ ವಿಷಯದಲ್ಲಿ. ಒಂದು ಕಾಲಕ್ಕೆ ಜ್ಞಾನಕ್ಕೆ ಸೂತ್ರವಾದದ್ದು ಶಿಕ್ಷಣ. ಇಂದು ಅದು ಮುಂದಿನ ಹೆಚ್ಚಿನ ಗಳಿಕೆಗೆ ಒಂದು ಹೂಡಿಕೆಯಾಗಿದೆ. ಏನು ಕಲಿತರೆ ಹೆಚ್ಚು ಹಣ ದೊರೆಯಬಹುದು ಎಂಬುದಕ್ಕೆ ಮಣೆ ಹಾಕಲಾಗುತ್ತಿದೆಯೇ ವಿನಾಃ ಯಾವ ಕಲಿಕೆಯಿಂದ ಜೀವನ ಹೆಚ್ಚು ಪರಿಷ್ಕಾರವಾದೀತು, ಜನಸಮುದಾಯ ನೆಮ್ಮದಿಯಲ್ಲಿದ್ದೀತು ಎಂಬುದರಲ್ಲಲ್ಲ ಎಂಬುದು ಆತಂಕದ ಸಂಗತಿ.
ಆದುದರಿಂದಲೇ, ಗುರು-ಶಿಷ್ಯ ಪರಂಪರೆ, ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ, ಸಮಗ್ರ ಶಿಕ್ಷಣ ಹಾಗೂ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸುವ ರೀತಿಯನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವುದು ತೀರಾ ಅಗತ್ಯವಾಗಿದೆ. ವಿದ್ಯುನ್ಮಾನ ಮಾಧ್ಯಮಗಳ ಗೀಳು, ಮಾದಕವಸ್ತುಗಳ ಗೀಳು, ರೇಸಿಂಗ್ ವಾಹನಗಳ ಹುಚ್ಚು, ಭಯೋತ್ಪಾದಕತೆಯ ಬಗ್ಗೆ ಇನ್ನಿಲ್ಲದ ಆಕರ್ಷಣೆ, ಕೌಟುಂಬಿಕ ವ್ಯವಸ್ಥೆಯು ಕ್ರಮಬದ್ಧವಾಗಿ ಶಿಥಿಲವಾಗುತ್ತಿರುವಿಕೆ, ವಿದೇಶೀ ವಾಸದ ಆಕರ್ಷಣೆ ಇತ್ಯಾದಿ ಸಮಸ್ಯೆಗಳಿಗೆ ಸ್ವಲ್ಪವಾದರೂ ಪರಿಹಾರವನ್ನು ಸಮಕಾಲಿನ ಸಂದರ್ಭದಲ್ಲಿ ಅರಸಬೇಕಿದೆ.
ಮೂಲತಃ ಶಿಕ್ಷಣ-ಕಲಿಕೆಗಳೆರಡರ ಹಿಂದಿರುವ ಮಗು' ಮನಸ್ಸನ್ನು ನಾವು ಪ್ರತ್ಯೇಕಿಸಿಬಿಟ್ಟಿದ್ದೇವೆ. ಪರಿಣಾಮವೆಂದರೆ ನಾವಿಂದು ಕಲಿತಿದ್ದನ್ನು ಜೀವನಕ್ಕೆ ಉಪಯೋಗಿಸುವ ಬಗೆ ನಮಗೆ ಗೊತ್ತಿಲ್ಲ! ಹಾಗಿದ್ದರೆ ಇವೆರಡರ ನಡುವೆ ಕಳಚಿಕೊಂಡುಬಿಟ್ಟಿರುವ ಕೊಂಡಿಯನ್ನು ನಾವು ಮತ್ತೆ ಸರಿಯಾಗಿ ಸೇರಿಸುವುದು ಹೇಗೆ? ಅದು ಸಾಧ್ಯವೇ? ಅದಕ್ಕೆ ಕಷ್ಟಪಡಬೇಕಾದವರು ಯಾರು? ಅಥವಾ ಶಿಕ್ಷಣ ವ್ಯವಸ್ಥೆಯೇ ಬದಲಾಗಬೇಕೆಂದು ಆಗ್ರಹಿಸಿ, ನಾವು ಕೈ ಕಟ್ಟಿ ಕುಳಿತಿರಬೇಕೇ? ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣದ ಪರಿಕಲ್ಪನೆಯನ್ನು ನಾವು ಗ್ರಹಿಸಬೇಕಾದ ರೀತಿ ಯಾವುದು? ಪೋಷಕರು-ಶಿಕ್ಷಕರು ಮತ್ತು ಪ್ರಾಥಮಿಕ ಹಂತದಲ್ಲಿಯೇ ಈಕೊಂಡಿ ಹಾಕುವ ಪ್ರಕ್ರಿಯೆ'ಯನ್ನು ಕರಗತ ಮಾಡಿಕೊಳ್ಳಬೇಕಾದ ಮಕ್ಕಳು ಇವರೆಲ್ಲರೂ ಸೇರಿ ಯಾವ ಉಪಾಯಗಳನ್ನು ಅಥವಾ ಹಾಗೆ ಮಾಡಲು ಪ್ರಯೋಗಗಳನ್ನು ಸ್ವತಃ ಮಾಡಬಹುದು? ಈ ಪ್ರಶ್ನೆಗಳನ್ನು ಪ್ರಸ್ತುತ ಕೇಳಿಕೊಳ್ಳಬೇಕಿದೆ.
ಭಾರತದಂತಹ ದೊಡ್ಡ ದೇಶದಲ್ಲಿ ಈಗಿರುವ ಶಾಲಾಶಿಕ್ಷಣ ಕ್ರಮವನ್ನು ಪೂರ್ತಿಯಾಗಿ ಏಕಾಏಕಿ ಬದಲಿಸುವುದು ಸುಲಭವಂತೂ ಅಲ್ಲ. ಅದರ ಬದಲು ನಮ್ಮ ಮನಸ್ಸಿನ ಧೋರಣೆಗಳನ್ನು ಕಿಂಚಿತ್ ಬದಲಿಸಿಕೊಂಡರೆ, ಮಕ್ಕಳಿಗೆ ಕಲಿಸುವ ಕ್ರಮಗಳಲ್ಲಿ ಕೆಲವು ಸುಲಭ ತಂತ್ರಗಳನ್ನು ಅಳವಡಿಸಿಕೊಂಡರೆ ನಮ್ಮ ಮಕ್ಕಳ ಜೀವನ ದಾರಿ ಸುಗಮ ಎನಿಸುತ್ತದೆ.
ಮಹಾತ್ಮಾ ಗಾಂಧೀಜಿಯವರು ಶಿಕ್ಷಣದ ಬಗ್ಗೆ ಪ್ರಸ್ತಾಪಿಸುವ ``ವಿದ್ಯಾರ್ಥಿಗೆ ನಿಜವಾದ ಪಠ್ಯಪುಸ್ತಕ ಅವನ ಉಪಾಧ್ಯಾಯನೇ'' ಎಂಬ ಮಾತುಗಳು ಇಂದಿಗೂ ಪ್ರಸ್ತುತ!
ಅತ್ಯುತ್ತಮ ಶಾಲೆಗಳೂ ಕೂಡ ಮಕ್ಕಳು ಭವಿಷ್ಯದಲ್ಲಿ ಉನ್ನತ ಕಲಿಕೆ, ಉನ್ನತ ಹುದ್ದೆಗೇರಬೇಕೆಂದರೆ ಇಂತಿಷ್ಟು ವಿಷಯಗಳನ್ನು ಕಲಿಯಲೇಬೇಕು ಎಂದು ಪಟ್ಟುಹಿಡಿದು ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದು, ಪೋಷಕರೂ ಅದನ್ನೇ ಪರಮಪ್ರಸಾದವೆಂಬಂತೆ ಸ್ವೀಕರಿಸುತ್ತಿರುವುದು, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹುಟ್ಟಿಸುವ ಬದಲಾಗಿ ಭಯಹುಟ್ಟಿಸಿ ಕಲಿಕೆಯಿಂದಲೇ ವಿಮುಖರಾಗುವಂತೆ ಮಾಡುತ್ತಿದೆ. ಸರ್ಕಾರ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಏಜೆನ್ಸಿಗಳು ಸಂತಸ ಕಲಿಕೆಯ ಮಂತ್ರ ಪಠಿಸುತ್ತಿವೆಯೇ ವಿನಾಃ ಕಲಿಸುವುದು ಹೇಗೆಂದು ತಿಳಿಯದೇ ಪರದಾಡುತ್ತಿವೆ. ನಿನ್ನೆಯ ವಿಷಯವನ್ನು ಇಂದು ಹೇಳಿಕೊಡಲಾಗುತ್ತಿದೆಯೇ ಹೊರತು ನಾಳೆಯ ಜಗತ್ತು ಹೇಗಿರುತ್ತದೆ, ಹೇಗೆ ನಾವು ಅದಕ್ಕೆ ಹೊಂದಿಕೊಳ್ಳಬೇಕು ಎಂಬುದನ್ನು ಕಲಿಸಿಕೊಡುವಲ್ಲಿ ಸೋಲುತ್ತಿವೆ. ನಾಳೆಯ ಸಮಸ್ಯೆಗಳಿಗೆ ಈಗಲೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಶಿಕ್ಷಣ ಪ್ರಕ್ರಿಯೆಯೇ ವ್ಯರ್ಥ ಕಾಲಹರಣ ಎನಿಸಿಬಿಡುತ್ತದೆ. ಪಠ್ಯಕ್ರಮದಲ್ಲಿ ಇರುವಷ್ಟನ್ನು ಮಾತ್ರ ಗಿಣಿಪಾಠ ಒಪ್ಪಿಸಿ, ಅಂಕಗಳಿಸಿ, ಭೇಷ್ ಅನ್ನಿಸಿಕೊಳ್ಳಲು ತುದಿಗಾಲಲ್ಲಿರುವವರ ಕಲಿಕೆ ಯಾವುದಕ್ಕೂ ಸಲ್ಲ ಎಂಬುದು ಈಗ ಅರ್ಥವಾಗಿದೆ.
ಸಮಾಜಕ್ಕೆ ಬೇಕಿರುವುದು ವಿಕಾಸವೇ ಹೊರತು ಕ್ರಾಂತಿಯಲ್ಲ. ಸದಾ ವಿಕಾಸವನ್ನು ಉಂಟುಮಾಡುವ ಶಿಕ್ಷಣದ ಅವಶ್ಯಕತೆ, ಅನಿವಾರ್ಯತೆ ಇಂದು ನಮ್ಮ ಕಣ್ಣ ಮುಂದಿದೆ. ಶಿಕ್ಷಣ ಎಂದರೆ ಮನುಷ್ಯನ ಜ್ಞಾನಾತ್ಮಕ, ಭಾವನಾತ್ಮಕ, ಕ್ರಿಯಾತ್ಮಕ ಸಂಸ್ಕಾರಗಳ ಸಮನ್ವಯತೆ ಮತ್ತು ವಿಕಾಸಗೊಳಿಸುವಿಕೆಯೇ ಆಗಿದೆ. ಮನುಷ್ಯನ ವ್ಯವಹಾರದಲ್ಲಿ ಪರಿವರ್ತನೆಗಳನ್ನು ತರುವುದು, ಜ್ಞಾನದಿಂದ ಇಚ್ಛೆಯ ಜಾಗೃತಿ, ಆ ಮೂಲಕ ಮನುಷ್ಯನನ್ನು ಕ್ರಿಯಾಶೀಲನನ್ನಾಗಿಸುವುದು ಅಂದರೆ ವ್ಯವಹಾರಕ್ಕೆ ಇಳಿಸುವುದು, ಪ್ರೀತಿಯಲ್ಲಿ ಪರಿವರ್ತನೆಯನ್ನು ತರುವುದೇ ಕಲಿಕೆ ಎನ್ನಬಹುದು. ಕಲಿಯುವುದು ಮತ್ತು ಕಲಿಸುವುದೇ ನಿಜವಾದ ಶಿಕ್ಷಣ. ಇಂತಹ ಶಿಕ್ಷಣದ ಪ್ರಕ್ರಿಯೆಯಲ್ಲಿ ಆಧಾರಬಿಂದುವಾಗಿ ಗುರುತಿಸಲ್ಪಡುವ ಮಗು, ಮಗು ಕಲಿಯಬೇಕಾದ ವಿಷಯ ವಸ್ತು ಹಾಗೂ ಕಲಿಕೆಯಲ್ಲಿ ಸಹಾಯವನ್ನು ಮಾಡುವಂತಹ ಶಿಕ್ಷಣ ಎಲ್ಲದರ ಬಗೆಗೂ ಗಮನ ಅಗತ್ಯ.
ಒಬ್ಬ ಶಿಕ್ಷಕನು ಮಗುವಿಗೆ ಓದಿಸಲು, ಕಲಿಸಲು ಸಾಧ್ಯವಿಲ್ಲ. ಓದುವುದೇ ಇರಲಿ ಅಥವಾ ಕಲಿಯುವುದೇ ಇರಲಿ ಮಗು ಪ್ರಯತ್ನವನ್ನು ಮಾಡಬೇಕಾಗಿದೆ. ಶಿಕ್ಷಕನು ಕೇವಲ ಮಗುವಿಗೆ ಸಹಾಯಕನಾಗಿರುತ್ತಾನೆಯೇ ಹೊರತು ಬೇರೇನೂ ಅಲ್ಲ. ಆ ಮೂಲಕ ಮಗುವಿನ ಬೆಳವಣಿಗೆಗೆ ಸೂಕ್ತ ಅವಕಾಶ ಮತ್ತು ವಾತಾವರಣವನ್ನು ಶಿಕ್ಷಕನಾದವನ್ನು ನಿರ್ಮಿಸಿ ಕೊಡುತ್ತಾನೆ.'
ಒಟ್ಟಿನಲ್ಲಿ, ಶಿಕ್ಷಣ ಎಂದರೆ ಚಾರಿತ್ರ‍್ಯ ನಿರ್ಮಾಣದ ವಿಚಾರಗಳ ಮೈಗೂಡುವಿಕೆ; ಅದು ಮಿದುಳಿನಲ್ಲಿ ತುರುಕಲ್ಪಟ್ಟ ಸಮಾಚಾರಗಳ ಮೊತ್ತವಲ್ಲ. ಶಿಕ್ಷಣ ಎಂದರೆ
ಅರಿವು. ಮಗು ತನ್ನ ಪರಿಸರದ ಬಗ್ಗೆ, ಇಡೀ ಜಗತ್ತಿನ ಬಗ್ಗೆ ಅರಿವಿನಾಚೆಯ ಅನೇಕ ಸಂಗತಿಗಳನ್ನು, ಅಂಶಗಳನ್ನು ತನ್ನ ಅರಿವಿನ ಪರಿಧಿಯೊಳಗೆ ತಂದುಕೊಳ್ಳುವ ಪ್ರಕ್ರಿಯೆ. ಪ್ರಸ್ತುತ, ದೇಶದ ಯುವ ಜನರನ್ನು ಪಶುತ್ವದಿಂದ ಮಾನವತ್ವದ ಕಡೆಗೂ, ಮಾನವತ್ವದಿಂದ ದೇವತ್ವದ ಕಡೆಗೂ ಒಯ್ಯುವ ಶಿಕ್ಷಣವು ಮಾತ್ರ ನಾವಿಂದು ಎದುರಿಸುತ್ತಿರುವ ನೂರಾರು ಸಮಸ್ಯೆಗಳಿಗೆ ಉತ್ತರವಾಗಬಲ್ಲದು.

Next Article