ಸತ್ತಾರ್ನಿಂದ ಸುರತ್ಕಲ್ನ ಮಾನ ಮರ್ಯಾದೆ ಹರಾಜಾಗುತ್ತಿದೆ
ಸುರತ್ಕಲ್: ಉದ್ಯಮಿ ಹಾಗೂ ಧಾರ್ಮಿಕ ನೇತಾರ ಮಮ್ತಾಝ್ ಅಲಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳ "ನಾಗರಿಕ ಹೋರಾಟ ಸಮಿತಿ"ಯಿಂದ ಬುಧವಾರ ರಾತ್ರಿ ಮಮ್ತಾಝ್ ಅಲಿ ಅವರ ಚೊಕ್ಕಬೆಟ್ಟು ತರವಾಡ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿತು.
ನಿಯೋಗದಲ್ಲಿದ್ದ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ಈ ಪ್ರಕರಣದಲ್ಲಿನ ಎಲ್ಲ ಆರೋಪಿಗಳ ಬಗ್ಗೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡಿಬೇಕು. ಜೊತೆಗೆ ಇಂತಹಾ ಅಕ್ರಮಗಳನ್ನು ಸಂಪೂರ್ಣ ಬಯಲಿಗೆ ಎಳೆಯಬೇಕೆಂದು ಆಗ್ರಹಿಸಿದರು. ಯಾವುದೇ ಕಾರಣಕ್ಕೂ ಆರೋಪಿಗಳಿಗೆ ರಾಜಕೀಯ ಬಲಸಿಗದಂತೆ, ಅವರು ಯಾವುದೇ ಕಾರಣಕ್ಕೂ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಇಲಾಖೆ ಅವಕಾಶ ನೀಡಬಾರದಂತೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸತ್ತಾರ್ ವೈಯಕ್ತಿಕವಾಗಿ ಮಾಡಿರುವ ಟ್ರ್ಯಾಪ್ಗಳು, ಆತ ತಂಡದೊಂದಿಗೆ ಮಾಡಿರುವ ಎಲ್ಲಾ ಟ್ರ್ಯಾಪ್ ಗಳನ್ನು ಪೊಲೀಸ್ ಇಲಾಖೆ ತನಿಖೆಗೆ ಒಳಪಡಿಸಬೇಕು ಎಂದರು.
ಸತ್ತಾರ್ ಮತ್ತು ತಂಡ ಮರ್ಯಾದಸ್ತ ಹೆಣ್ಣು ಗಂಡು ಎಂಬ ಬೇಧ ಇಲ್ಲದೆ ಟ್ರ್ಯಾಪ್ ಮಾಡಿರುವ ಬಗ್ಗೆ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು, ಧರ್ಮಗುರುಗಳನ್ನೂ ಇವರು ಟ್ರ್ಯಾಪ್ ಗುರಿಪಡಿಸಿದ್ದರು ಎಂಬ ಮಾತುಗಳಿವೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ನಡೆದಿರುವ ಇಂತಹಾ ಪ್ರಕರಣಗಳನ್ನು ಭೇದಿಸುವ ಕಾರ್ಯ ಜಿಲ್ಲಾ ಪೊಲೀಸರಿಂದ ಆಗಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಪ್ರತಿಭಾ ಕುಳಾಯಿ ಮಾತನಾಡಿ ಅಬ್ದಲ್ ಸತ್ತಾರ್ ಹೊರಗಿನಿಂದ ಸುರತ್ಕಲ್ ಕೃಷ್ಣಾಪುರಕ್ಕೆ ಬಂದು ನೆಲೆಸಿದವ. ಈತನಿಂದ ಸುರತ್ಕಲ್ ನ ಮಾನ ಮರ್ಯಾದೆ ಹರಾಜಾಗುತ್ತಿದೆ. ಈತನನ್ನು ಜಮಾಅತ್ ನಿಂದ ಮತ್ತು ಸುರತ್ಕಲ್ ನಿಂದಲೇ ಬಹಿಷ್ಕರಿಸಬೇಕು ಎಂದು ಹೇಳಿದರು. ಮಮ್ತಾಝ್ ಓರ್ವ ಸರ್ವ ಧರ್ಮಿಯರನ್ನು ಪ್ರೀತಿಸುತ್ತಿದ್ದ ಶುದ್ದ ಮನಸ್ಸು. ಅವರೊಂದಿಗೇ ಬೆಳೆದು ಇಂದು ಅವರಿಗೇ ಹನಿ ಟ್ರ್ಯಾಪ್ ಮಾಡಿರುವ ಅಬ್ದುಲ್ ಸತ್ತಾರ್ ಮೃಗಕ್ಕಿಂತಲೂ ಕೀಳು ಮನಸ್ಥಿತಿಯವ. ಆತ ಓರ್ವ ಹೆಣ್ಣು ಮತ್ತು ಕಾಸು ಬಾಕ ಎಂದು ಜರೆದರು
ಸಾಮಾಜಿಕ ಚಿಂತಕರಾದ ಎಂ ಜಿ. ಹೆಗ್ಡೆ ಮಾತನಾಡಿ, ಆರೋಪಿಗಳು ಮಮ್ತಾಝ್ ಅಲಿ ಅವರನ್ನು ಪೂರ್ವಯೋಜಿತವಾಗಿ ಕೃತ್ಯ ಎಸಗಿ ಅವರ ಮರಣಕ್ಕೆ ಕಾರಣರಾಗಿದ್ದಾರೆ. ಇಂತಹಾ ಹಲವು ಕೃತ್ಯಗಳ ನಡೆದಿದ್ದು, ಎಲ್ಲಾ ಪ್ರಕಣಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಇರುತ್ತದೆ. ಮಮ್ತಾಝ್ ಅಲಿ ಅವರ ಪ್ರಕರಣವನ್ನು ಮಾದರಿಯಾಗಿಟ್ಟುಕೊಂಡು ಇಂತಹಾ ಕೃತ್ಯಗಳನ್ನು ಎಸಗುವ ದುರುಳರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಮ್ತಾಝ್ ಅಲಿ ಪ್ರಕರಣದಂತೆ ಹನಿ ಟ್ರ್ಯಾಪ್ ಗೆ ಒಳಗಾಗಿರುವ ಮಹಿಳೆಯರು ಮತ್ತು ಪುರುಷರಿಗೆ ದೂರು ನೀಡಲು ಸಹಕಾರಿಯಾಗುವಂತೆ ಪೊಲೀಸ್ ಆಯುಕ್ತರು ಪ್ರತ್ಯೇಕ ಮೊಬೈಲ್ ಸಂಖ್ಯೆಯನ್ನು ಹೊಂದಬೇಕು. ಹನಿಟ್ರ್ಯಾಪ್ ಪ್ರಕರಣಗಳು ನಡೆದಾಗ ಸಂತ್ರಸ್ತರು ಜೀವಭಯ, ಮರ್ಯಾದೆಗೆ ಅಂಜದೆ ನೇರವಾಗಿ ಆಯುಕ್ತರಿಗೇ ದೂರು ನೀಡುವಂತ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಬೇಕು. ದೂರು ನೀಡುವವರ ವೈಯ್ಯಕ್ತಿಕ ಮಾಹಿತಿಗಳನ್ನು ಗೌಪ್ಯವಾಗಿಟ್ಟುಕೊಳ್ಳುವುದಾಗಿ ಪ್ರಕಟಣೆ ಹೊರಡಿಸಬೇಕು. ಹೀಗೆ ಮಾಡಿದಾಗ ಅಂಜಿಕೆಯಿಂದ ಹುದುಗಿಹೋಗಿರುವ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುತ್ತದೆ. ಇದರೊಂದಿಗೆ ದ.ಕ. ಜಿಲ್ಲೆಯನ್ನು ಹನಿಟ್ರ್ಯಾಪ್, ಮಾಧಕ ವಸ್ತು ರಹಿತ ಜಿಲ್ಲೆಯಾಗಿ ಮಾಡಲು ಸಾಧ್ಯ ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಾಮಾಜಿಕ ಚಿಂತಕರಾದ ಎಮ್ ಜಿ ಹೆಗ್ಡೆ, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ, ಹಿರಿಯ ಕಾರ್ಮಿಕ ನಾಯಕ ಸದಾಶಿವ ಶೆಟ್ಟಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ವಿವಿಧ ಸಂಘಟನೆಗಳ ಪ್ರಮುಖರಾದ ಮೂಸಬ್ಬ ಪಕ್ಷಿಕೆರೆ, ಶ್ರೀನಾಥ್ ಕುಲಾಲ್, ಟಿ.ಎನ್. ರಮೇಶ್, ರಾಜೇಶ್ ಪೂಜಾರಿ ಕುಳಾಯಿ, ಶ್ರೀಕಾಂತ್ ಸಾಲ್ಯಾನ್, ಆನಂದ ಅಮೀನ್, ಸಾಹುಲ್ ಹಮೀದ್ ಬಜ್ಪೆ, ನವಾಜ್ ಕಾಟಿಪಳ್ಳ, ಅನಿಲ್ ಮೆನೇಜಸ್ ವಾಮಂಜೂರು, ವಿಶು ಪೂಜಾರಿ ಪಚ್ಚನಾಡಿ, ಹಂಝ ಇಡ್ಯಾ, ಕುಳಾಯಿ ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಕುಳಾಯಿ ಮತ್ತಿತರರು ಇದ್ದರು.