ಸರಕಾರದ ಜನಪರ ಯೋಜನೆ ಪ್ರಭಾವ ಬೀರಿದೆ
ಮಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜಾರಿಗೊಳಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ಫಲ ನೀಡಿಲ್ಲ ಎನ್ನುವ ವಿಚಾರವನ್ನು ನಾನು ಒಪ್ಪುವುದಿಲ್ಲ. ಯಾಕೆಂದರೆ ೨೦೧೯ರಲ್ಲಿ ಇದ್ದ ೧ಸ್ಥಾನ ೯ಕ್ಕೆ ಏರುವಲ್ಲಿ ಸರಕಾರದ ಜನಪರ ಯೋಜನೆಗಳು ಪ್ರಭಾವ ಬೀರಿದೆ ಎಂದು ಮಾಜಿ ಸಂಸದ, ಮಂಗಳೂರು ವಿಭಾಗದ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಗೆ ನಿರೀಕ್ಷಿತ ಸ್ಥಾನ ಸಿಕ್ಕದಿರುವ ವಿಚಾರ ಮತ್ತು ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಕೆಪಿಸಿಸಿ ಸತ್ಯಶೋಧನಾ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಸರಕಾರ ಒಂದು ವರ್ಷದಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಯಾಕೆ ನಿರೀಕ್ಷಿತ ಸ್ಥಾನಗಳನ್ನು ಚುನಾವಣೆಯಲ್ಲಿ ಸಾಧ್ಯವಾಗಲಿಲ್ಲ. ಪಕ್ಷದ ಹಿನ್ನಡೆಗೆ ಕಾರಣವೇನು? ಎಂಬ ವಿಚಾರದ ಬಗ್ಗೆ ಸತ್ಯಶೋಧನಾ ಸಮಿತಿಯು ಅಧ್ಯಯನ ನಡೆಸಿ ವರದಿ ನೀಡಲಿದೆ.
ಮುಂಬರುವ ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಚುನಾವಣೆಗಳಿಗೆ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ವಿಚಾರದಲ್ಲಿ ಪಕ್ಷದ ನಾಯಕರಿಂದ, ಪಕ್ಷದ ನಿಷ್ಠಾವಂತರಿಂದ ಕಾರ್ಯಕರ್ತರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ಕೆಪಿಸಿಸಿಗೆ ವರದಿ ಒಪ್ಪಿಸಲಾಗುವುದು. ನಾವು ಕಂಡುಕೊಂಡ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.