For the best experience, open
https://m.samyuktakarnataka.in
on your mobile browser.

ಸೋಮಶೇಖರನ್ನು ಸಹಿಸಿಕೊಳ್ಳುವ ಅವಶ್ಯಕತೆ ಇಲ್ಲ

04:14 PM Feb 27, 2024 IST | Samyukta Karnataka
ಸೋಮಶೇಖರನ್ನು ಸಹಿಸಿಕೊಳ್ಳುವ ಅವಶ್ಯಕತೆ ಇಲ್ಲ

ಚಿಕ್ಕಮಗಳೂರು: ಎಸ್.ಟಿ. ಸೋಮಶೇಖರ್ ಪಕ್ಷದಿಂದ ಗೆದ್ದು, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದನ್ನು ಸಹಿಸಬಾರದು, ಗಂಭೀರವಾಗಿ ತಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ವ್ಯಕ್ತಿಘತ ಸಂಬಂಧಕೋಸ್ಕರ ರಾಜೀ ರಾಜಕಾರಣ ಮಾಡಿದರೇ ಉಳಿದವರ ಮೇಲೂ ದುಷ್ಪರಿಣಾಮ ಬೀರುತ್ತದೆ. ಸೋಮಶೇಖರ ಅಡ್ಡ ಮತದಾನ ಮಾಡಿರುವುದು ದುರಾದೃಷ್ಟಕರ ಎಂದರು.
ನಮ್ಮ ಪಕ್ಷ ಗೆಲುತ್ತದೆ ಅದರಲ್ಲಿ ಸಂಶಯವಿಲ್ಲ, ಆದರೆ ಅಶಿಸ್ತನ್ನು ನಾವು ಸಹಿಸಲು ಸಾಧ್ಯವಿಲ್ಲ. ಯಾವುದೇ ಪಕ್ಷ ಇರಲಿ, ಅವಕಾಶವಾದಿಗಳಿಗೆ ಬೆಂಬಲ ಮಾಡುವುದು ಅನೈತಿಕ ರಾಜಕಾರಣಕ್ಕೆ ನಾವೇ ವೇದಿಕೆ ಸೃಷ್ಟಿದಂತೆ ಆಗುತ್ತದೆ ಎಂದು ತಿಳಿಸಿದರು.
ಪಕ್ಷ ಪಕ್ಷ ಅನ್ನುವಂತಹ ನಮ್ಮಂತವರು ಪ್ರಶ್ನೆಗಳಿಗೆ ಒಳಗಾಗುತ್ತೇವೆ ಎಂದ ಅವರು, ರಾಜಕಾರಣ ವ್ಯಭಿಚಾರ ಮಾಡುವವರು ಎಲ್ಲ ಕಡೆ ಸಲ್ಲುತ್ತಾರೆ. ಇದೊಂದು ರೀತಿ ರಾಜಕೀಯ ವ್ಯಭಿಚಾರವೇ. ಈ ರೀತಿ ಮಾಡುವವರು ಎಲ್ಲರೊಂದಿಗೂ ಹೊಂದಾಣಿಕೆ ಆಗಿಬಿಡುತ್ತಾರೆ ಎಂದರು.
ಸಿದ್ದಾಂತ ರಾಜಕಾರಣ ಮಾಡುವವರು ನಿಷ್ಟುರಕ್ಕೆ ಒಳಗಾಗುತ್ತಾರೆ. ಆದರೆ. ರಾಜಕೀಯ ವ್ಯಭಿಚಾರ ಮಾಡುವವರು ನಮ್ಮ ಪಕ್ಷ, ಬೇರೆ ಪಕ್ಷದವರೊಂದಿಗೂ ಚೆನ್ನಾಗಿರುತ್ತಾರೆ. ವ್ಯಭಿಚಾರದ ರಾಜಕಾರಣಕ್ಕೆ ಮಣೆ ಹಾಕಬಾರದು ಇದು ನಮಗೆ ಎಚ್ಚರಿಕೆ ಪಾಠ ಆಗಬೇಕು ಎಂದರು.
ರಾಜೀನಾಮೆ ಕೊಟ್ಟು ಹೀಗೆ ಮಾಡಿದರೇ, ಪಕ್ಷ ಬಿಟ್ಟಿದ್ದಾರೆ ಎನ್ನಬಹುದು. ಪಕ್ಷದೊಳಗಿದ್ದು ರಾಜಕೀಯ ವ್ಯಭಿಚಾರ ಮಾಡುವುದಿದೆಯಲ್ಲ ಇಂತಹ ವಿಚಾರಗಳಿಗೆ ಶೂನ್ಯ ಸಹನೆ ಇಟ್ಟುಕೊಂಡು ಕೆಲಸ ಮಾಡಬೇಕು ಎಂದ ಅವರು, ರಾಜ್ಯಾಧ್ಯಕ್ಷರು ಮತ್ತು ಪಕ್ಷ ಏನು ಕ್ರಮ ಕೈಗೊಳ್ಳತ್ತದೆ ನೋಡಬೇಕು. ಇಂತಹ ಕೆಲಸ ಸೋಮಶೇಖರ್ ಮಾಡುತ್ತಾರೆಂದು ಅಂದುಕೊಂಡಿರಲಿಲ್ಲ. ಅಡ್ಡ ಮತದಾನ ಮಾಡಿದ್ದಾರೆಂದರೇ ಅವರನ್ನು ನಾವ್ಯಾಕೆ ಸಹಿಸಿಕೊಳ್ಳಬೇಕು. ಸಹಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ರಾಜಕೀಯದಲ್ಲಿ ಶಾಶ್ವತ ಶತ್ರುವೂ ಇಲ್ಲ, ಮಿತ್ರರು ಇಲ್ಲ ಎಂದು ಹೇಳುತ್ತಾರೆ. ಕಾಂಗ್ರೆಸ್‌ನವರು ಬಳ್ಳಾರಿ ಪಾದಯಾತ್ರೆ ಮಾಡಿದ್ರು ಜನಾರ್ಧನ ರೆಡ್ಡಿ ಅವರನ್ನು ವಿಲನ್ ಎಂದು ಬಿಂಬಿಸಿದ್ದರು. ಈ ಕಾಂಗ್ರೆಸ್‌ಗೆ ಜನಾರ್ಧನ ರೆಡ್ಡಿ ಹೀರೋ ಆಗಿದ್ದಾರೆ. ಬಿಜೆಪಿಯಲ್ಲಿದ್ದಾಗ ವಿಲನ್, ಲೂಟಿಕೋರರು ಆಗಿದ್ದರು. ರಾಜಕಾರಣದಲ್ಲಿ ಇದೆಲ್ಲ ಕಾಲದ ಅನಿವಾರ್ಯತೆ ಇರಬಹುದೇನೋ ಎಂದರು.