ಸ್ನೇಹಂ ಕಾರ್ಖಾನೆಗೆ ಹಿತಾ ಮೃಣಾಲ್ ಹೆಬ್ಬಾಳಕರ್ ಭೇಟಿ
ಬೆಂಗಳೂರು: ಬೆಳಗಾವಿ ನಗರದಲ್ಲಿ ನಿನ್ನೆ ತಡರಾತ್ರಿ ನಾವಗೆ ಕ್ರಾಸ್ ಬಳಿ ಇರುವ ಕಾರ್ಖಾನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನಾ ಸ್ಥಳಕ್ಕೆ ಹಿತಾ ಮೃಣಾಲ್ ಹೆಬ್ಬಾಳಕರ್ ಭೇಟಿ ನೀಡಿದ್ದಾರೆ. ಈ ಕುರಿತಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಮಾಜಿಕ ಜಾಲತಾನದಲ್ಲಿ ವಿಷಯ ಹಂಚಿಕೊಂಡಿದ್ದಾರೆ ನಾವಗೆಯಲ್ಲಿ ಕಾರ್ಖಾನೆಯ ಬೆಂಕಿ ಅವಘಡದ ಬಗ್ಗೆ ಕೇಳಿ ಆಘಾತವಾಗಿದೆ. ಘಟನೆಯಲ್ಲಿ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಗುಂಡ್ಯಾಗೋಳ ಎಂಬ ಯುವಕ ಮೃತರಾಗಿರುವುದು ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಈಗಾಗಲೇ ದೂರವಾಣಿ ಮೂಲಕ ಮೃತ ಯುವಕನ ಕುಟುಂಬದವರ ಜೊತೆ ಮಾತನಾಡಿ ಧೈರ್ಯವನ್ನು ತುಂಬಿದ್ದೇನೆ, ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಾಗಿ ತಿಳಿಸಿದ್ದೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಅನುಪಸ್ಥಿತಿಯಲ್ಲಿ ಸೊಸೆ ಡಾ. ಹಿತಾ ಮೃಣಾಲ್ ಹೆಬ್ಬಾಳಕರ್ ಘಟನೆಯ ಸ್ಥಳಕ್ಕೆ ಮತ್ತು ಮೃತ ಯುವಕನ ಮನೆಗೆ ತೆರಳಿ, ಯುವಕನ ತಂದೆ-ತಾಯಿಗೆ, ಇನ್ನುಳಿದ ಕುಟುಂಬದ ಸದಸ್ಯರಿಗೆ ಸಾಂತ್ವನ ವ್ಯಕ್ತಪಡಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಎಂದಿದ್ದಾರೆ.
ಘಟನೆ: ಬೆಳಗಾವಿ ತಾಲೂಕಿನ ನಾವಗೆ ಕ್ರಾಸ್ ಬಳಿ ಇರುವ ಕಾರ್ಖಾನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ತಡರಾತ್ರಿ ನಡೆದಿದೆ. ಕೆಮಿಕಲ್ ಮಿಶ್ರಿತ ಇರುವ ಪ್ಲ್ಯಾಸ್ಟಿಕ್ ತಯಾರು ಮಾಡುವ ಕಾರ್ಖಾನೆಗೆ ಈ ಬೆಂಕಿ ತಗಲಿತ್ತು.