For the best experience, open
https://m.samyuktakarnataka.in
on your mobile browser.

ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ್: ತೆರವಿಗೆ ಸೆ. ೨೫ ಗಡವು

04:10 PM Sep 19, 2024 IST | Samyukta Karnataka
ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ್  ತೆರವಿಗೆ ಸೆ  ೨೫ ಗಡವು

ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯ ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ ನಿರ್ಮಾಣ ಮಾಡಿದ್ದು, ಇದನ್ನು ವಿರೋಧ ವ್ಯಕ್ತಪಡಿಸಿದ ಶ್ರೀರಾಮ ಸೇನಾ ಮುಖಂಡ, ಹಿರಿಯ ಹೋರಾಟಗಾರ ಪ್ರಮೋದ ಮುತಾಲಿಕ್ ಅವರಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಏಕವಚನದಲ್ಲಿ ಮಾತನಾಡಿರುವುದನ್ನು ಖಂಡಿಸುತ್ತೇವೆ. ಶಾಸಕರು ಕೂಡಲೇ ಕ್ಷಮೆ ಕೇಳಬೇಕು. ಮಹಾನಗರ ಪಾಲಿಕೆ ಸ್ಮಶಾನದಲ್ಲಿರುವ ಇಂದಿರಾ ಕ್ಯಾಂಟಿನ್ ತೆರವು ಮಾಡಲು ಸೆ. ೨೫ ರವರೆಗೆ ಗಡುವು ನೀಡುತ್ತೇವೆ ಎಂದು ಶ್ರೀರಾಮ ಸೇನಾ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ ನಿರ್ಮಾಣಕ್ಕೆ ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಜೊತೆಗೆ ಶ್ರೀರಾಮ ಸೇನೆ ಪ್ರತಿಭಟನೆ ನಡೆಸಿದೆ. ಆದರೆ ಶಾಸಕರು ಈ ವಿಷಯದಲ್ಲಿ ಏಕವಚನ ಬಳಸಿದ್ದು, ಸರಿಯಲ್ಲ. ಸೆ. ೨೫ರೊಳಗೆ ಕ್ಷಮೆ ಕೇಳಬೇಕು. ಪಾಲಿಕೆ ಕೂಡ ಇದನ್ನು ಸೆ. ೨೫ರೊಳಗೆ ತೆರವು ಮಾಡಬೇಕು. ಇಲ್ಲವಾದಲ್ಲಿ ಸೆ. ೨೬ರಂದು ನಗರದ ಡಾ. ಅಂಬೇಡ್ಕರ್ ಅವರ ಪುತ್ಥಳಿಯಿಂದ ಪ್ರತಿಭಟನಾ ರ‍್ಯಾಲಿ ಮೂಲಕ ಸ್ಮಶಾನಕ್ಕೆ ಸಲಿಕೆ, ಗುದ್ದಲಿ, ಪಿಕಾಸಿ ತಗೆದುಕೊಂಡು ಹೋಗಿ ನಾವೇ ತೆರವು ಮಾಡುತ್ತೇವೆ ಎಂದರು.
ಸ್ಮಶಾನದಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಎಂದು ಕೋರ್ಟ್ ಆದೇಶ ನೀಡಿದೆ. ಸ್ಮಶಾನ ಅತಿಕ್ರಮಣ ಮಾಡಿ ಕ್ಯಾಂಟಿನ ನಿರ್ಮಾಣ ಮಾಡುವಂತದ್ದು ಏನಿದೆ. ಇದನ್ನು ವಿರೋಧಿಸಿ ಮುತಾಲಿಕ್ ಅವರಿಗೆ ಶಾಸಕ ಅಬ್ಬಯ್ಯ ಅವರು ಅವಮಾನೀಯ ರೀತಿಯಲ್ಲಿ ಏಕವಚನದಲ್ಲಿ ಮಾತನಾಡಿದ್ದಾರೆ. ಅಬ್ಬಯ್ಯ ಅವರು ಕ್ಷಮೆಯಾಚಿಸದೇ ಹೋದರೆ ಮುಂದಿನ ದಿನಗಳಲ್ಲಿ ಅವರು ಎಲ್ಲಿ ಹೋಗುತ್ತಾರೆ ಅಲ್ಲಿ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Tags :