For the best experience, open
https://m.samyuktakarnataka.in
on your mobile browser.

ಸ್ವಾಮಿ ನಾವಿನ್ನೂ ಜೀವಂತವಾಗಿದ್ದೇವೆ..

03:34 AM Feb 25, 2024 IST | Samyukta Karnataka
ಸ್ವಾಮಿ ನಾವಿನ್ನೂ ಜೀವಂತವಾಗಿದ್ದೇವೆ

ಸೂರ್ಯನಾರಾಯಣ ನರಗುಂದಕರ
ಗದಗ:
"ಸ್ವಾಮಿ ನಾವಿನ್ನೂ ಜೀವಂತವಾಗಿದ್ದೇವೆ. ದಯವಿಟ್ಟು ನಮ್ಮ ಮರಣ ಪ್ರಮಾಣ ಪತ್ರಗಳನ್ನು ವಾಪಸು ಪಡೆಯಿರಿ".
ಇದು ಗದಗ ನಗರಸಭೆ ಕಚೇರಿ ಎದುರಿಗೆ ಶನಿವಾರ ತಮ್ಮ ಮರಣ ಪ್ರಮಾಣ ಪತ್ರಗಳನ್ನು ಕೈಯಲ್ಲಿ ಹಿಡಿದು ಮೂವರು ಗೋಗರೆದ ಪರಿ.
ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳ ಯಡವಟ್ಟಿನಿಂದ ಜೀವಂತವಾಗಿದ್ದರೂ ಸಹ ನಗರಸಭೆಯ ದಾಖಲೆಗಳಲ್ಲಿ ಮರಣ ಪ್ರಮಾಣ ಪತ್ರ ಎಂದಿದ್ದು ಬಡ ಕುಟುಂಬ ಕಂಗಾಲಾಗಿದೆ. ಮನೆಯ ಯಜಮಾನನೇ ಪತ್ನಿ ಹಾಗೂ ಇಬ್ಬರು ಪುತ್ರರು ಸಾವನ್ನಪ್ಪಿದ್ದಾರೆಂದು ಮರಣ ಪ್ರಮಾಣ ಪತ್ರ ಪಡೆದಿರುವದು ಸಹ ವಿಪರ್ಯಾಸ. ಜೀವಂತವಾಗಿದ್ದರು ದಾಖಲೆಗಳಲ್ಲಿ ಸಾವನ್ನಪ್ಪಿರುವ ಬಡ ಕುಟುಂಬ ಈಗ ಪರದಾಟ ನಡೆಸಿದೆ.
ಆಗಿದ್ದೇನು?:
ಇಲ್ಲಿಯ ಕಾನತೋಟ ಪ್ರದೇಶದ ತಿಪ್ಪಣ್ಣ ಲಕ್ಕುಂಡಿ ಎಂಬಾತ ಕಳೆದ ಹನ್ನೆರಡು ವರ್ಷಗಳ ಹಿಂದೆಯೇ ಪತ್ನಿ ದ್ರಾಕ್ಷಾಯಣಿ ೨೦೦೪ರಲ್ಲಿ ಸಾವನ್ನಪ್ಪಿದ್ದಾಳೆ. ಪುತ್ರರಾದ ಅಶೋಕ ಮತ್ತು ಕಲ್ಲಪ್ಪ ಎಂಬುವವರೂ ಸಾವನ್ನಪ್ಪಿದ್ದಾರೆಂದು ನಗರಸಭೆಯಿಂದ ಮರಣ ಸಮರ್ಥನೆ ಪ್ರಮಾಣ ಪತ್ರ ಪಡೆದು ನಾಪತ್ತೆಯಾಗಿದ್ದಾರೆ. ಮರಣ ಪತ್ರ ನೀಡುವಾಗ ಸ್ಥಾನಿಕ ಚೌಕಾಶಿಯನ್ನು ಸಿಬ್ಬಂದಿ ಮಾಡದಿರುವುದೇ ಈಗ ಎಡವಟ್ಟಿಗೆ ಕಾರಣವೆನ್ನಲಾಗಿದೆ.
ನಾಪತ್ತೆಯಾಗಿರುವ ವ್ಯಕ್ತಿ ಮನೆಯನ್ನು ಯಾರಿಗೆ ಮಾರಿದ್ದಾನೆಂಬುದು ತಿಳಿದಿಲ್ಲ. ನಾಪತ್ತೆಯಾಗಿರುವ ವ್ಯಕ್ತಿ ಕೆಲ ವ್ಯಕ್ತಿಗಳಿಂದ ಸಾಲ ಪಡೆದಿದ್ದಾನೆನ್ನಲಾಗಿದ್ದು ವಸೂಲಾತಿಗಾಗಿ ಅವರು ಪೊಲೀಸರೊಂದಿಗೆ ಮನೆಗೆ ಆಗಮಿಸುತ್ತಿದ್ದಾರಂತೆ. ಮನೆಗೆ ಪೊಲೀಸರು ಏಕೆ ಬರುತ್ತಿಲ್ಲವೆಂಬುದು ಸಹ ತಮಗೆ ತಿಳಿದಿಲ್ಲ. ಪದೇ ಪದೇ ಪೊಲೀಸರು ಮನೆಗೆ ಬಂದು ಮನೆಯನ್ನು ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆಂದು ಲಕ್ಕುಂಡಿ ಕುಟುಂಬದ ಸದಸ್ಯರು ಸಂಕ.ಪ್ರತಿನಿಧಿ ಮುಂದೆ ಅಲವತ್ತುಕೊಂಡರು.
ಮನೆಯ ಮೇಲೆ ಸಾಲ ಪಡೆದಿರುವ ಬಗ್ಗೆ ತಮಗೆ ಯಾವದೇ ಮಾಹಿತಿಯಿಲ್ಲ. ಕೂಲಿ ನಾಲಿ ಮಾಡಿ ಜೀವನ ನಿರ್ವಹಿಸುತ್ತಿರುವ ತಮಗೆ ತಮ್ಮ ಪತಿ ಮಾಡಿದ್ದಾರೆಂದು ಹೇಳಲಾದ ಸಾಲವನ್ನು ತೀರಿಸಲಾಗುವದಿಲ್ಲ ಎಂದೂ ಹೇಳುತ್ತಾರೆ.
ಮನೆಯ ಯಜಮಾನ ಮಾಡಿರುವ ಘನಂದಾರಿ ಕೆಲಸಕ್ಕೆ ಇಡೀ ಕುಟುಂಬ ವಿಲವಿಲವಾಗಿದೆ. ಈ ಕುಕೃತ್ಯಕ್ಕೆ ಗದಗ ನಗರಸಭೆಯೂ ಸಾಥ್ ನೀಡಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಇದು ಮೊದಲ ಬಾರಿಯೇನಲ್ಲ
ಗದಗ ನಗರಸಭೆ ಜೀವಂತ ಇರುವ ವ್ಯಕ್ತಿಗಳ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ನೀಡಿರುವದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ ಓರ್ವ ವ್ಯಕ್ತಿಯ ಪತ್ನಿ ಮತ್ತು ಮಕ್ಕಳು ಸೇರಿಕೊಂಡು ಪತಿಯ ಮರಣ ಪ್ರಮಾಣ ಪತ್ರವನ್ನು ಪಡೆದು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪರಭಾರೆ ಮಾಡಿದ್ದರು. ಅನೇಕ ವರ್ಷಗಳ ನಂತರ ಈ ವ್ಯಕ್ತಿ ರಾಜ್ಯ ಉಚ್ಛ ನ್ಯಾಯಾಲಯದವರೆಗೆ ಹೋರಾಟ ನಡೆಸಿ ಪತ್ನಿ,ಮಕ್ಕಳ ದುಷ್ಕೃತ್ಯವನ್ನು ಬಯಲು ಮಾಡಿ ಆಸ್ತಿಯನ್ನು ವಾಪಸ್ಸು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.