2029ಕ್ಕೆ ಏಕ ಚುನಾವಣೆ: ಸಲಹೆ
ನವದೆಹಲಿ: ದೇಶದೆಲ್ಲೆಡೆ ಒಂದೇ ಬಾರಿ ಚುನಾವಣೆ ಕುರಿತು ನೇಮಿಸಲಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವರದಿಯನ್ನು ಸಲ್ಲಿಸಿದೆ.
೨೦೨೩ರ ಸೆಪ್ಟೆಂಬರ್ ೨ರಿಂದ ಒಟ್ಟು ೧೯೧ ದಿನಗಳ ಕಾಲ ಸಂಶೋಧನೆ, ಸಮಾಲೋಚನೆ ಮಾಡಿದ ಬಳಿಕ ಸಮಿತಿಯ ೧೮,೬೨೬ ಪುಟಗಳ ವರದಿಯನ್ನು ಸಲ್ಲಿಸಿದೆ. ವರದಿ ಸಲ್ಲಿಕೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ವರದಿಯಲ್ಲಿ ಲೋಕಸಭೆ-ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಿ ಮುಂದಿನ ೧೦೦ ದಿನಗಳ ಅಂತರದಲ್ಲಿ ಪುರಸಭೆ ಚುನಾವಣೆ ನಡೆಸುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗಿದೆ.
ತಿದ್ದುಪಡಿ ಆಗತ್ಯ ಕಾನೂನು: ಭಾರತದ ಸಂವಿಧಾನದ ೩೨೪ಎ ವಿಧಿ, ಪ್ರಜಾಪ್ರಾತಿನಿಧ್ಯ ಕಾಯ್ದೆ, ೧೯೫೦, ಜನ ಪ್ರತಿನಿಧಿ ಕಾಯ್ದೆ, ೧೯೫೧, ಇನ್ನಿತರ ಸಂಬಂಧಿತ ಕಾನೂನುಗಳು.
ಶಿಫಾರಸುಗಳೇನು?
ಲೋಕ ಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನ ಸಭೆ ಚುನಾವಣೆಗಳು ಒಟ್ಟಿಗೇ ನಡೆಯಬೇಕು. ಮುನಿಸಿಪಾಲಿಟಿ, ಪಂಚಾಯತ್ಗಳ ಚುನಾವಣೆ ಸಾರ್ವಜನಿಕ ಚುನಾವಣೆ ನಂತರ ೧೦೦ ದಿನದೊಳಗೆ ಒಟ್ಟಿಗೇ ನಡೆಯಬೇಕು.
ತ್ರಿಶಂಕು ಫಲಿತಾಂಶ ಬಂದರೆ…
ತ್ರಿಶಂಕು ಫಲಿತಾಂಶ ಬಂದಲ್ಲಿ ಅಥವಾ ಸರ್ಕಾರ ವಿಶ್ವಾಸಮತ ಕಳೆದುಕೊಂಡಲ್ಲಿ ಹೊಸ ಚುನಾವಣೆ ನಡೆಸಬಹುದು. ಆದರೆ ಅದರ ಅವಧಿ ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೆ ಮಾತ್ರ ಇರಬೇಕು. ಈ ನಿಟ್ಟಿನಲ್ಲಿ ಸಂವಿಧಾನದ ವಿಧಿ ೮೩ ಮತ್ತು ೧೭೨ನ್ನು ತಿದ್ದುಪಡಿ ಮಾಡಬೇಕಾಗುತ್ತದೆ.
ಹೊಂದಾಣಿಕೆ ಹೇಗೆ?
೨೦೨೯ರಲ್ಲಿ ಮತ್ತೆ ಲೋಕಸಭೆ ಚುನಾವಣೆ ನಡೆಯುತ್ತದೆ. ಆ ಹೊತ್ತಿಗೆ ವಿವಿಧ ಅವಧಿಯಲ್ಲಿ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದರೂ, ಅದರ ಮುಕ್ತಾಯ ಅವಧಿ ೨೦೨೯ಕ್ಕೆ ಆಗಬೇಕು. ಉದಾಹರಣೆಗೆ ೨೦೨೮ರಲ್ಲಿ ಅಸ್ತಿತ್ವಕ್ಕೆ ಬರುವ ವಿಧಾನಸಭೆಗಳು, ೨೦೨೯ಕ್ಕೆ ವಿಸರ್ಜನೆಯಾಗುತ್ತವೆ.