For the best experience, open
https://m.samyuktakarnataka.in
on your mobile browser.

203 ತಾಲ್ಲೂಕುಗಳಲ್ಲಿ‌ ಬರ

04:58 PM Jan 29, 2024 IST | Samyukta Karnataka
203 ತಾಲ್ಲೂಕುಗಳಲ್ಲಿ‌ ಬರ

ಶ್ರೀರಂಗಪಟ್ಟಣ :ರಾಜ್ಯದ 230 ತಾಲ್ಲೂಕುಗಳ ಪೈಕಿ 203 ತಾಲ್ಲೂಕುಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಗುರು ಹಿರಿಯರ ಪೂಜಾಫಲದ ಫಲವಾಗಿ ಅವುಗಳನ್ನು ಎದುರಿಸುವ ಶಕ್ತಿ ದೊರೆಯಲಿ ಎಂದು ಜಿಲ್ಲಾ ಉಸ್ತುವಾರಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ಹೊರವಲಯದ ಚಂದವನ ಆಶ್ರಮದಲ್ಲಿ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿಗಳ 130ನೇ ಜಯಂತಿ ಹಾಗೂ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ 25ನೇ ಪಟ್ಟಾಧಿಕಾರ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶ್ರಮದ ವತಿಯಿಂದ ಹೊರ ತರಲಾಗಿರುವ 'ಶಿವಯೋಗಿ ದರ್ಶನೆ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸದ್ಯದ ಪರಿಸ್ಥಿತಿಯಲ್ಲಿ ಬರವನ್ನು ಎದುರಿಸುವುದು ಹೇಗೆ, ಬರದಿಂದ ಪಾರಾಗುವುದು ಹೇಗೆ ಎಂಬುದನ್ನು ನೆನೆದರೆ ಭಯವಾಗುತ್ತದೆ. ಮಠ ಮಂದಿರಗಳಲ್ಲಿ ಶ್ರೀಗಳು, ಸಾಧು-ಸಂತರು ನಡೆಸುವ ಧಾರ್ಮಿಕ ಕಾರ್ಯಗಳಿಂದಾಗಿ ಇಂತಹ ಪರಿಸ್ಥಿತಿಗಳನ್ನು ಎದುರಿಸುವ ಜೊತೆಗೆ ನಿವಾರಣೆ ಮಾಡುವ ಶಕ್ತಿ ದೊರೆಯುವಂತಾಗಲಿ ಎಂದರು. ಚಂದ್ರವನ ಆಶ್ರಮದಲ್ಲಿ ಶ್ರೀಗಳು ಭಕ್ತರಿಗೆ ಉತ್ತಮ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇಲ್ಲಿ ದಾಸೋಹ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಮತ್ತಷ್ಟು ಸಾಮಾಜಿಕ ಕಾರ್ಯಕ್ರಮಗಳು ಜರುಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಆಶ್ರಮದ ವಿಶೇಷ ಲಕೋಟೆ ಮತ್ತು ಅಂಚೆಚೀಟಿ ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಕ್ಷೇತವು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯದಲ್ಲಿನ ಬಹುತೇಕ ಮಠ-ಮಂದಿರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದು, ಮಠ-ಮಾನ್ಯಗಳಲ್ಲಿ ವಿದ್ಯಾಭ್ಯಾಸ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಅತ್ಯುನ್ನತ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಕೀರ್ತಿ ಸಂಪಾಧಿಸಿದ್ದಾರೆ. ಚಂದ್ರವನ ಆಶ್ರಮದ ತ್ರಿನೇತ್ರ ಮಹಾಸ್ವಾಮೀಜಿಗಳು ಸಹ ಆ ನಿಟ್ಟಿನಲ್ಲಿ ಸಾಗಲಿ, ಹಲವಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಮಾತನಾಡಿದರು. ಆಶ್ರಮದ ಭಕ್ತರು ಸೇರಿದಂತೆ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.