For the best experience, open
https://m.samyuktakarnataka.in
on your mobile browser.

ನಾಪತ್ತೆಯಾಗಿದ್ದ ಮೂವರು ಮಕ್ಕಳು ಚರಂಡಿಯಲ್ಲಿ ಶವವಾಗಿ ಪತ್ತೆ

07:30 PM May 13, 2024 IST | Samyukta Karnataka
ನಾಪತ್ತೆಯಾಗಿದ್ದ ಮೂವರು ಮಕ್ಕಳು ಚರಂಡಿಯಲ್ಲಿ ಶವವಾಗಿ ಪತ್ತೆ

ವಿಜಯಪುರ: ಒಂಟೆಗಳನ್ನು ಹುಡುಕುತ್ತಾ ಹೊರಟಿದ್ದ ಮೂವರು ಮಕ್ಕಳು ಯುಜಿಡಿ ತ್ಯಾಜ್ಯ ನೀರಿನ ಘಟಕದಲ್ಲಿ ಬಿದ್ದು ಶವವಾಗಿ ಪತ್ತೆಯಾದ ಹೃದಯವಿದ್ರಾವಕ ಘಟನೆ ವಿಜಯಪುರದಲ್ಲಿ ಸಂಭವಸಿದೆ.
ಮಕ್ಕಳನ್ನು ೯ ವರ್ಷದ ಅನುಷಾ ದಹಿಂಡೆ, ೭ ವರ್ಷದ ವಿಜಯ ದಹಿಂಡೆ ಹಾಗೂ ೭ ವರ್ಷದ ಮಿಹಿರ್ ಎಂದು ಗುರುತಿಸಲಾಗಿದೆ. ಗದಗ ಮೂಲದ ಅನುಷಾ, ವಿಜಯ ಬೇಸಿಗೆ ರಜೆಗೆಂದು ವಿಜಯಪುರದ ತನ್ನ ಮಾವನ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಚಾಬುಕಸವಾರ್ ದರ್ಗಾ ಬಳಿ ಮನೆ ಮುಂದೆ ಒಂಟೆಗಳು ಬಂದಿದ್ದವು. ಈ ವೇಳೆ ಮೂವರು ಮಕ್ಕಳು ಒಂಟೆ ಸವಾರಿ ಮಾಡಿದ್ದಾರೆ. ಬಳಿಕ ತೆರಳಿದ ಒಂಟೆಗಳನ್ನು ಹುಡುಕುತ್ತಾ ಮೂವರು ಮಕ್ಕಳು ಮನೆಯಿಂದ ಹೊರಟಿದ್ದಾರೆ.
ಮಕ್ಕಳು ಆಟವಾಡುತ್ತಿರಬಹುದು ಎಂದು ಮನೆಯವರು ಭಾವಿಸಿದ್ದರು. ಆದರೆ ರಾತ್ರಿಯಾದರೂ ಮಕ್ಕಳ ಸುಳಿವಿಲ್ಲದಿದ್ದಾಗ ಗಾಬರಿಯಾದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ದುಶ್ಯಗಳು ಕಂಡುಬಂದಿವೆ.
ಪೊಲೀಸರು ಹುಡುಕಾಟ ನಡೆಸಿದಾಗ ಇಂದು ಮೂವರು ಮಕ್ಕಳು ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟದ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟಕದ ಬಳಿ ಸಾರ್ವಜನಿಕರಿಗೆ ಪ್ರವೇಶವಿಲ್ಲದಿದ್ದರೂ ಮಕ್ಕಳು ಈ ಸ್ಥಳಕ್ಕೆ ಬಂದಿದ್ದಾರೂ ಹೇಗೆ? ಘಟಕದ ಅಧಿಕಾರಿಗಳ ಬೇಜವಾಬ್ದಾರಿಯೇ ಮಕ್ಕಳ ಸಾವಿಗೆ ಕರಣ ಎಂದು ಪೋಷಕರು ಯುಜಿಡಿ ಘಟದ ಬಳಿ ಪ್ರತಿಭಟನೆ ಸಹ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.