For the best experience, open
https://m.samyuktakarnataka.in
on your mobile browser.

ಮಗು ಮಾರಾಟ ಜಾಲ ಪ್ರಕರಣಕ್ಕೆ ಹೊಸ ತಿರುವು: ಹೂತಿದ್ದ ಭ್ರೂಣ ಹೊರಕ್ಕೆ

07:45 PM Jun 16, 2024 IST | Samyukta Karnataka
ಮಗು ಮಾರಾಟ ಜಾಲ ಪ್ರಕರಣಕ್ಕೆ ಹೊಸ ತಿರುವು  ಹೂತಿದ್ದ ಭ್ರೂಣ ಹೊರಕ್ಕೆ

ಬೆಳಗಾವಿ(ಚನ್ನಮ್ಮನ ಕಿತ್ತೂರ): ನಗರದಲ್ಲಿ ಮಗು ಮಾರಾಟ ಜಾಲ ಪತ್ತೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದ ಮುಖ್ಯ ಆರೋಪಿ, ನಕಲಿ ವೈದ್ಯ ಲಾಡಖಾನ್‌ಗೆ ಸೇರಿದ ಫಾರ್ಮ್‌ಹೌಸ್ ಮೇಲೆ ಅಧಿಕಾರಿಗಳು ಭಾನುವಾರ ದಾಳಿ ಮಾಡಿ ತಪಾಸಣೆ ಕೈಗೊಂಡಾಗ ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿವೆ.
ಮಗು ಮಾರಾಟ ಕೇಸ್‌ನಲ್ಲಿ ಎ೨ ಆರೋಪಿಯಾಗಿರುವ ಅಬ್ದುಲ್ ಲಾಡಖಾನ್, ಗರ್ಭಪಾತ ಮಾಡಿರೋ ಆರೋಪ ಕೇಳಿಬಂದಿದ್ದು, ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಭ್ರೂಣಗಳನ್ನು ಹೂತಿದ್ದ ಮಾಹಿತಿ ಸಿಕ್ಕ ಕೂಡಲೇ ನೆಲ ಅಗೆದು ತಪಾಸಣೆ ಮಾಡಿದಾಗ ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿವೆ. ಮೂರೂ ಭ್ರೂಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
ನಕಲಿ ವೈದ್ಯ ಲಾಡಖಾನ್ ಗರ್ಭಪಾತ ಮಾಡುತ್ತಿದ್ದ ಎಂದು ಸ್ಥಳೀಯರಿಂದ ಆರೋಪ ಕೇಳಿ ಬಂದ ಬೆನ್ನಲ್ಲೇ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಅಲ್ಲದೇ, ನ್ಯಾಯಾಲಯದ ಅನುಮತಿ ಪಡೆದು ಲಾಡಖಾನ್ ಫಾರ್ಮ್‌ಹೌಸ್‌ನಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತಪಾಸಣೆ ಕೈಗೊಂಡಾಗ ಭ್ರೂಣಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.