ಅರುಣ್ ಗೋಯಲ್ ರಾಜೀನಾಮೆ: ವಾರದಲ್ಲೇ ಸಭೆ
ನವದೆಹಲಿ: ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯಲ್ ಮಾರ್ಚ್ 9, ಶನಿವಾರ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಫೆಬ್ರುವರಿ 14ರಂದು ಮತ್ತೊಬ್ಬ ಆಯುಕ್ತ ಅನೂಪ್ ಚಂದ್ರ ಪಾಂಡೆ ಕೂಡ ರಾಜೀನಾಮೆ ಕೊಟ್ಟಿದ್ದರು. ಆದರೆ, ಅರುಣ್ ಗೋಯಲ್ ನಿವೃತ್ತಿ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಅರುಣ್ ಗೋಯಲ್ ರಾಜೀನಾಮೆ ಬೆನ್ನಲ್ಲೇ ನೂತನ ಚುನಾವಣಾ ಆಯುಕ್ತರ ಆಯ್ಕೆಗೆ ಈ ವಾರದಲ್ಲೇ ಸಭೆ ಸಾಧ್ಯತೆ
ಚುನಾವಣಾ ಆಯುಕ್ತ ಅರುಣ್ ಗೋಯಲ್ ಸ್ಥಾನಕ್ಕೆ ನೇಮಕಾತಿ ಮಾಡಲು ಈ ವಾರದಲ್ಲಿ ಆಯ್ಕೆ ಸಮಿತಿಯ ಸಭೆ ಕರೆಯಲು ಸರ್ಕಾರ ನಿಶ್ಚಯಿಸಿದೆ ಎಂದು ವರದಿಗಳು ಹೇಳುತ್ತಿವೆ.
ಈಗ ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾತ್ರವೇ ಇರುವುದು. ಚುನಾವಣಾ ಆಯುಕ್ತರೊಬ್ಬರನ್ನು ಶೀಘ್ರದಲ್ಲೇ ನೇಮಕಾತಿ ಮಾಡಲು ಸರ್ಕಾರ ಯತ್ನಿಸುತ್ತಿದೆ. ಮುಂದಿನ ಒಂದು ವಾರದೊಳಗೆ ಆಯ್ಕೆ ಸಮಿತಿ ಸಭೆ ನಡೆಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಗೆ ತಯಾರಿಗಳು ನಡೆಯಬೇಕಾದ ಸಂದರ್ಭದಲ್ಲೇ ಇಬ್ಬರು ಆಯುಕ್ತರು ಹೊರಹೋಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಸರ್ಕಾರದ ಮೇಲೆ ವಿಪಕ್ಷಗಳು ಹರಿಹಾಯಲು ಅವಕಾಶ ಒದಗಿಸಿದೆ.
ಅರುಣ್ ಗೋಯಲ್ ಅವರು ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದರೆ 2027ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗುವ ಅವಕಾಶ ಇತ್ತು. ಈಗಿರುವ ಮುಖ್ಯ ಆಯುಕ್ತ ಅಥವಾ ಸಿಇಸಿ ರಾಜೀವ್ ಕುಮಾರ್ 2027ರಲ್ಲಿ ನಿವೃತ್ತರಾಗುತ್ತಾರೆ. ಅವರ ನಂತರದ ಸ್ಥಾನ ಅರುಣ್ ಗೋಯಲ್ಗೆ ದಕ್ಕುತ್ತಿತ್ತು.