For the best experience, open
https://m.samyuktakarnataka.in
on your mobile browser.

ಅರ್ಜಂಟ್ ಬೇಕಾಗಿದ್ದಾರೆ…

03:00 AM Oct 08, 2024 IST | Samyukta Karnataka
ಅರ್ಜಂಟ್ ಬೇಕಾಗಿದ್ದಾರೆ…

ದಿನಂಪ್ರತಿ ಮದ್ರಾ ಮಣ್ಣೋರು, ಸುಮಾರ ಣ್ಣೋರು, ಗುತ್ನಾಳಣ್ಣೋರು, ಬಂಡೆಸಿ ವಣ್ಣೋರು, ಗುಜೇಂದ್ರ ಅವರು ಸೇರಿದಂತೆ ಅನೇಕ ರಾಜಕೀಯ ಮಂದಿ ಜಗಳವಾಡುವುದನ್ನು ನೋಡಿ ತೀರ ತಲೆ ಕೆಡಿಸಿಕೊಂಡಿದ್ದ ಲೊಂಡೆನುಮಂತ ಇದನ್ನು ಹೇಗಾದರೂ ಮಾಡಿ ತಡೆಗಟ್ಟಲೇಬೇಕು. ಇವರು ಈ ರೀತಿ ಜಗಳವಾಡಿದರೆ ಯಾರು ಯಾರ ಕಡೆ ಹೋಗಬೇಕು ಅನ್ನುವುದೇ ಕಷ್ಟವಾಗುತ್ತದೆ. ಅವರಿಗೆ ಮಾತನಾಡಿಸಿದರೆ ಇವರಿಗೆ ಸಿಟ್ಟು ಇವರನ್ನು ಮಾತನಾಡಿಸಿದರೆ ಅವರಿಗೆ ಕೋಪ. ಯಾಕಿದ್ದೀತು? ಇವರು ಜಗಳವಾಡದಂತೆ ತಡೆಯಲು ತಜ್ಞರನ್ನೇ ನೇಮಿಸಬೇಕು. ಅಂತಹ ತಜ್ಞರು ಈಗೆಲ್ಲಿ ಸಿಕ್ಕಾರು? ಊರೂರು ಹುಡುಕುವುದು ಇದೀಗ ನನ್ನ ಕೈಯಿಂದ ಆಗುವುದಿಲ್ಲ. ಆದ್ದರಿಂದ ಎಲ್ಲೆಡೆ ಜಾಹಿರಾತು ಕೊಡುವುದೇ ಲೇಸು ಅಂದುಕೊಂಡು ಅಲೆದಲೆದು ಪತ್ರಿಕೆಗಳಿಗೆ ಜಾಹಿರಾತು ಕೊಟ್ಟ ರೀತಿ ಹೀಗಿತ್ತು.
ತಜ್ಞರು ಜರೂರ್ ಬೇಕಾಗಿದ್ದಾರೆ: ಇಲ್ಲಿ ರಾಜಕೀಯ ಮಂದಿ ಆಡುವ ಜಗಳವನ್ನು ಬಿಡಿಸಲು ಅರ್ಜಂಟಾಗಿ ತಜ್ಞರು ಬೇಕಾಗಿದ್ದಾರೆ. ಅನುಭವಸ್ಥರಿಗೆ ಮೊದಲಾದ್ಯತೆ ನೀಡಲಾಗುವುದು. ತಾವೇ ಸುಮಾರು ಹತ್ತು ವರ್ಷ ಜಗಳವಾಡಿದ ಅನುಭವ ಇರಬೇಕು. ನಂತರ ಅದರ ಅನುಭವದ ಆಧಾರದ ಮೇಲೆ ಜಗಳ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿರಬೇಕು. ಅವರು ಜಗಳವಾಡುವುದನ್ನು ನಿಲ್ಲಿಸದಿದ್ದರೆ ಬೇರೆಯವರ ಜತೆ ಜಗಳ ಹಚ್ಚಿ ವಿಷಯವನ್ನು ಡೈವರ್ಟ್ ಮಾಡುವುದು ತಿಳಿದಿರಬೇಕು. ಜಗಳವಾಡಿದವರನ್ನು ಪ್ರತ್ಯೇಕವಾಗಿ ಕರೆಯಿಸಿ ಬುದ್ಧಿ ಹೇಳಿದ್ದು ಇದ್ದಿದ್ದರೆ ಅಂತಹ ವಿಡಿಯೋಗಳನ್ನು ಕಳಿಸಬೇಕು. ಹಿಂದೆ ತಾವು ಜಗಳವಾಡುತ್ತಿರುವಾಗ ಮೊಬೈಲ್‌ನಲ್ಲಿ ಯಾರಾದರೂ ವಿಡಿಯೋ ತೆಗೆದಿದ್ದರೆ ಅದನ್ನು ಸಂದರ್ಶನದ ವೇಳೆ ಹಾಜರುಪಡಿಸಬೇಕು. ಇನ್ನು ಜಗಳ ಬಿಡಿಸುವುದು ಸಕ್ಸಸ್ ಆದರೆ ಅವರಿಗೆ ಇಂತಿಷ್ಟು ಅಂತ ವೇತನ ಕೊಡಲಾಗುವುದು. ಸಂಚಗಾರವಾಗಿ ನಯಾಪೈಸೆ ಕೊಡಲಾಗುವುದಿಲ್ಲ ತಿಳಿಯಿರಿ. ಆಸಕ್ತರು ತಮ್ಮ ಎಲ್ಲ ಡಿಟೇಲ್ಸ್ನೊಂದಿಗೆ ನಮ್ಮ ವಿಳಾಸಕ್ಕೆ ಕಳುಹಿಸಬೇಕು. ವಾಟ್ಸಪ್‌ನಲ್ಲಿ ಕಳುಹಿಸುವುದಾದರೆ ನನ್ನ ಮೂರನೇ ನಂಬರ್‌ಗೆ ಕಳುಹಿಸಬಹುದು. ಇದಕ್ಕೆ ಕೊನೆ ದಿನಾಂಕ ಇಲ್ಲ. ಅವರು ಎಲ್ಲಿವರೆಗೆ ಜಗಳವಾಡುತ್ತಾರೋ ಅಲ್ಲಿಯವರೆಗೆ ಕಾಂಟ್ರಾಕ್ಟ್ ಜಾರಿ ಇರುತ್ತದೆ.