For the best experience, open
https://m.samyuktakarnataka.in
on your mobile browser.

ಆರಂಭ ನಿಮ್ಮಿಂದಾದರೆ ಅಂತ್ಯ ನಮ್ಮಿಂದಲೇ: ವಿಖ್ಯಾತ್ ಶೆಟ್ಟಿ ಎಚ್ಚರಿಕೆ

07:19 PM Sep 23, 2024 IST | Samyukta Karnataka
ಆರಂಭ ನಿಮ್ಮಿಂದಾದರೆ ಅಂತ್ಯ ನಮ್ಮಿಂದಲೇ  ವಿಖ್ಯಾತ್ ಶೆಟ್ಟಿ ಎಚ್ಚರಿಕೆ

ಕಾರ್ಕಳ: ಬಿಜೆಪಿ ಪರವಾಗಿ ಮಾತನಾಡುವವರನ್ನು ಬೆದರಿಸಿದ್ದಾರೆ ಬಿಜೆಪಿ ಹೆದರುವುದಿಲ್ಲ. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಇಲ್ಲಸಲ್ಲದ ಆರೋಪಗಳನ್ನು ಆರಂಭಿಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ. ಇಲ್ಲ ಸಲ್ಲದ ಆರೋಪಗಳ ಆರಂಭ ನಿಮ್ಮಿಂದಾದರೆ ಅದಕ್ಕೆ ಅಂತ್ಯ ನಮ್ಮಿಂದಲೇ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನಂತರ ರಾಜಕೀಯ ಮೇಲಾಟಗಳು ರಾಜಕೀಯ ದೊಂಬರಾಟಗಳು ದಿನೇದಿನೇ ಹೆಚ್ಚಾಗುತ್ತಿದೆ ರಾಜಕೀಯ ತೆವಲಿಗೋಸ್ಕರ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮಾಧ್ಯಮಗಳ ಮುಂದೆ ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರ ಬಂದ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಹಾಗಾಗಿ ಅಭಿವೃದ್ಧಿ ಪರ ಮಾತನಾಡಲು ಇವರಲ್ಲಿ ವಿಷಯಗಳಿಲ್ಲ ನಾಲಿಗೆಯ ಚಪಲಕ್ಕಾಗಿ ಬಿಜೆಪಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಟೀಕಿಸುವುದೇ ಇವರ ದಿನಚರಿ ಆಗಿದೆ. ಸುನೀಲ್‌ಕುಮಾರ್ ಅವರ ಕನಸಿನ ಯೋಜನೆ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ವಿರುದ್ಧ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಲ್ಲೇ ಸ್ಪಷ್ಟತೆ ಇಲ್ಲದೆ ಮನಸ್ಸಿಗೆ ತೋಚಿದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೂರ್ತಿಯ ನೈಜತೆಯ ಬಗ್ಗೆ ಇವರದ್ದೇ ಸರಕಾರ ಇದ್ದರೂ ಇದನ್ನು ಸ್ಪಷ್ಟಪಡಿಸಲು ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರು. ಇವರಿಗೆ ತನಿಖೆ ಹಾಗೂ ಮೂರ್ತಿಯ ನೈಜತೆಯ ಸ್ಪಷ್ಟತೆಯ ಅವಶ್ಯಕತೆ ಇಲ್ಲ ಕೇವಲ ರಾಜಕೀಯಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಧರ್ಮ ನ್ಯಾಯ ನೀತಿಯ ಬಗ್ಗೆ ಮಾತನಾಡುವ ಉದಯಕುಮಾರ್ ಶೆಟ್ಟಿ ಅವರು ತಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆಯೇ? ಸತ್ಯ ಧರ್ಮ ನ್ಯಾಯ ನೀತಿ ಹೊರಟದಿಂದಲೇ ಜೀವನವನ್ನು ರೂಪಿಸಿಕೊಂಡಿರುವ ಶಾಸಕ ಸುನೀಲ್‌ಕುಮಾರ್‌ರವರಿಗೆ ನಿಮ್ಮ ನೀತಿ ಪಾಠದ ಅವಶ್ಯಕತೆ ಇಲ್ಲ ಎಂದರು. ಧಾರ್ಮಿಕ ಕೇಂದ್ರಗಳಿಗೆ ಸುನೀಲ್‌ಕುಮಾರ್ ಹೋಗುವುದನ್ನು ಬಹಿಷ್ಕರಿಸಬೇಕು ಎಂಬ ಹೇಳಿಕೆ ಹಾಸ್ಯಾಸ್ಪದ ಎಂದರು.
ಮುಸ್ಲಿಮರಿಗೆ ಮಸೀದಿ ಕಟ್ಟಿಸಿ ಕೊಡುತ್ತೇನೆ ಇದನ್ನು ವೈರಲ್ ಮಾಡಬೇಡಿ ಎಂದು ಹೇಳುವ ನೀವು ಇತರರಿಗೆ ನೀತಿ ಪಾಠ ಮಾಡುವುದು ಎಷ್ಟು ಸರಿ ಎಂದರು.
ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ನೀವು ಬಿಜೆಪಿ ಸರಕಾರ ಇದ್ದಾಗ ತಮ್ಮ ಉದ್ಯಮ ಲಾಭಕ್ಕಾಗಿ ಬಿಜೆಪಿಗರ ಮನೆ ಬಾಗಿಲನ್ನು ಬಡಿದವರು ಕಾಂಗ್ರೆಸ್ ಟಿಕೆಟ್ ಲಭಿಸಿದ ಮೇಲೆ ಬಿಜೆಪಿ ಎಂಎಲ್‌ಎಗಳನ್ನ ದೂರ ಮಾಡಿರುವುದು ಯಾಕೆ? ಇದು ಯಾವ ರೀತಿಯ ನ್ಯಾಯ ಕಾಂಗ್ರೆಸ್‌ನಲ್ಲಿ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡುವವರು ಅದೆಷ್ಟೋ ಮಂದಿ ಇದ್ದಾರೆ. ನಿಮ್ಮ ಈ ಇಬ್ಬಗೆ ನೀತಿ ಅಂತಹ ಕಾಂಗ್ರೇಸ್‌ನ ನಿಷ್ಠಾವಂತ ಕಾರ್ಯಕರ್ತರಿಗೆ ಯಾವ ಪರಿಣಾಮ ಬೀರಬಹುದು. ಮುಂದಿನ ದಿನಗಳಲ್ಲಿ ಸರಕಾರ ಬದಲಾದರೆ ನಿಮ್ಮ ನಡೆ ಯಾವ ಕಡೆ ಎಂದು ಪ್ರಶ್ನಿಸಿದರು. ಸರಕಾರ ನಮ್ಮದು ಇದೆ ಎಂದು ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ಕಾರ್ಯಕರ್ತರ ಬೆದರಿಸಿದರೆ ಈ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದರು.
ಕಾರ್ಕಳದಲ್ಲಿ ದಬ್ಬಾಳಿಕೆ ರಾಜಕಾರಣ ಮಿತಿಮೀರಿದೆ ಇದರಿಂದ ಅಧಿಕಾರಿಗಳು ಕಾರ್ಕಳಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ತಾವು ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿ ಚಿಲ್ಲರೆ ರಾಜಕೀಯ ಬೇಡ ಎಂದು ಬುದ್ಧಿವಾದ ಹೇಳಿದರು.