For the best experience, open
https://m.samyuktakarnataka.in
on your mobile browser.

ಆರೋಗ್ಯಕರ ಹೆಜ್ಜೆಗೆ ಆರ್ಟಿಸನ್ ಪಾದರಕ್ಷೆ

03:45 AM Feb 07, 2024 IST | Samyukta Karnataka
ಆರೋಗ್ಯಕರ ಹೆಜ್ಜೆಗೆ ಆರ್ಟಿಸನ್ ಪಾದರಕ್ಷೆ

ಹರ್ಷ ಕುಲಕರ್ಣಿ
ಇಂದಿನ ಪೀಳಿಗೆ ಅಲಂಕಾರವೇ ಸ್ವತ್ತು. ಚೆಂದದ ಬೆಡಗಿಯರ ಮುಂದೆ ಯುವರಾಜರಂತೆ ಮಿಂಚಬೇಕು ಎನ್ನುವುದು ಈಗಿನ ಹುಡುಗರ ಮನದಾಸೆ. ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಆಗಿರುವ ಪಾದರಕ್ಷೆಗಳೇ ಇಂಥವರ ಮೊದಲ ಆಯ್ಕೆ. ಪಾಶ್ಚಾತ್ಯ ತೊಡುಗೆಗಳಿಗೆ ದೇಸಿ ಮೆರುಗು ನೀಡಿರುವ ವಿಭಿನ್ನ ಶೈಲಿಯ ತರಹೇವಾರಿ ದಿರಿಸುಗಳ ಜೊತೆಗೆ ಕಾಲಿನ ಸಮಸ್ಯೆಗಳಿಗೂ ಪರಿಹಾರ ನೀಡುವ ಮೂಲಕ ಕೋಮಲವಾದ ಕಾಲುಗಳ ಅಂದವನ್ನು ಮತ್ತಷ್ಟು ಹೆಚ್ಚಿಸುವ ಚಪ್ಪಲಿ, ಶೂಗಳನ್ನು ತಯಾರಿಸುತ್ತಿರುವ ಉದ್ಯಮಿ ನಿತ್ಯಾನಂದ ಶೆಟ್ಟಿ ಸಧ್ಯ ಮನೆ ಮಾತಾಗಿದ್ದಾರೆ.
ಫಾರ್ಮಲ್ ದಿರಿಸುಗಳಿಂದ ಹಿಡಿದು ಮದುವೆ ಮನೆಗಳಲ್ಲಿ ಧರಿಸುವ ಪಾದರಕ್ಷೆ-ಶೂ, ಜಬರ್‌ದಸ್ತ್ ಆಗಿ ಓಡಾಡುವವರಿಗೆ ವಿನೂತನ ಶೈಲಿಯ ಬೂಟುಗಳು, ಗತ್ತಿನಿಂದ ಓಡಾಡುವವರಿಗೆ ರಾಜ ಗಾಂಭೀರ್ಯ ತಂದುಕೊಡುವ ವಿಶೇಷ ವಿನ್ಯಾಸದ ಪಾದರಕ್ಷೆ ತಯಾರಿಕೆಯಲ್ಲಿ ನಿತ್ಯಾನಂದ ಶೆಟ್ಟಿ ಸಿದ್ಧಹಸ್ತರು. ಮೂಲತಃ ಹೋಟೆಲ್ ಉದ್ಯಮಿಯಾದ ನಿತ್ಯಾನಂದ ಶೆಟ್ಟಿ, ಕೌಟುಂಬಿಕ ಪರಂಪರಾಗತ ವ್ಯವಹಾರದಿಂದ ಹೊರಬಂದು ಫುಟ್‌ವೇರ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. ಕಳೆದ ೩೪ ವರ್ಷಗಳಿಂದ ಇವರ ಸುದೀರ್ಘ ಸೇವೆಯಲ್ಲಿ ೧೮-೨೦ ಸಾವಿರ ಸಂತುಷ್ಟ ಗ್ರಾಹಕರು ಆರೋಗ್ಯಯುತ ಹೆಜ್ಜೆ ಹಾಕುತ್ತಿದ್ದಾರೆ.
ವಿನೂತನ ಶೈಲಿ
ಆರ್ಟಿಸನ್ ಫುಟ್‌ವೇರ್ ಸಂಸ್ಥೆ ರಾಜ್ಯದ ಗಡಿಯನ್ನಷ್ಟೇ ಅಲ್ಲದೇ ರಾಷ್ಟçದ ಗಡಿಯನ್ನೂ ದಾಟಿ ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತಿದೆ. `ಆರ್ಟಿಸನ್' ಹೆಸರೇ ಹೇಳುವಂತೆ ಇಲ್ಲಿ ಸಿದ್ದವಾಗುವ ಪಾದರಕ್ಷೆಗಳು ವಿಭಿನ್ನ ಮತ್ತು ಹಲವು ವಿಶೇಷತೆಗಳಿಂದ ಕೂಡಿರುತ್ತವೆ. ಕೇವಲ ಮಾರಾಟವನ್ನೇ ಮುಖ್ಯವಾಗಿಸಿಕೊಳ್ಳದೇ, ಮಾರಾಟದ ನಂತರ ಒಂದು ವರ್ಷ ಇವರು ನೀಡುವ ಸೇವೆ ಹಲವರ ಮನ ಗೆದ್ದಿದೆ. ೧೯೯೧ರಲ್ಲಿ ಚರ್ಮೋದ್ಯಮಕ್ಕೆ ಕಾಲಿಟ್ಟ ನಿತ್ಯಾನಂದ ಶೆಟ್ಟಿ, ಪುಟ್ಟ ಕೋಣೆಯಲ್ಲಿ ಸಣ್ಣದಾಗಿ ಉದ್ಯಮ ಆರಂಭಿಸಿದ್ದರು. ದಿನ ಕಳೆದಂತೆ ಜನಪ್ರಿಯರಾಗಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಹಮ್ಮು ಇಲ್ಲದೇ ೬ ಜನ ಕೆಲಸಗಾರರೊಂದಿಗೆ ಬೆರೆತು ತಾವೂ ಪಾದರಕ್ಷೆ ಉತ್ಪಾದನೆಗೆ ಕೈ ಜೋಡಿಸುತ್ತಿದ್ದಾರೆ.
ಮಧುಮೇಹದ ಚಪ್ಪಲಿ
ಕಾಲಿನ ನರಗಳಲ್ಲಿ ಅಸಮರ್ಪಕ ರಕ್ತಪರಿಚಲನೆಯಿಂದ ಬಳಲುತ್ತಿದ್ದ ತಾಯಿಗೆ ಪಾದರಕ್ಷೆಗಳ ಮುಖಾಂತರ ಪರಿಹಾರ ಹುಡುಕುವ ಪ್ರಯತ್ನದಲ್ಲಿ ೧೯೯೫-೯೬ರಲ್ಲಿ ವೈದ್ಯಕೀಯ ವೈಶಿಷ್ಟಗಳಿಂದ ಕೂಡಿದ ಪಾದರಕ್ಷೆ ತಯಾರಿಕೆ ಆರಂಭಿಸಿದ ನಿತ್ಯಾನಂದ ಶೆಟ್ಟಿ, ತಾಯಿಯ ಕಾಲಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ಸು ಕಂಡರು. ಅಂದು ಜಾಗೃತವಾದ ರೋಗಿಗ ಬಗೆಗಿನ ಕಾಳಜಿ ಇಂದು ಸಾವಿರಾರು ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ.
ದಿನಕ್ಕೆ ೮-೧೦ ಪಾದರಕ್ಷೆ, ಶೂಗಳನ್ನು ತಯಾರಿಸುವ ಆರ್ಟಿಸನ್ ಫುಟವೇರ್ ಸಂಸ್ಥೆ, ಹತ್ತಾರು ಚರ್ಮ ಕುಶಲಕರ್ಮಿಗಳಿಗೆ ಸ್ವಾವಲಂಬಿ ಜೀವನ ಪಾಠ ಹೇಳಿಕೊಟ್ಟಿದೆ. ನಿತ್ಯಾನಂದ ಶೆಟ್ಟಿ ಅವರ ಗರಡಿಯಲ್ಲಿ ಪಳಗಿದ ಅನೇಕರು ಇಂದು ಸ್ವಂತ ಉದ್ದಿಮೆ ಸ್ಥಾಪಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಟ್ರೆಂಡೀ ಪಾದರಕ್ಷೆಗಳನ್ನು ಮಾತ್ರ ಉತ್ಪಾದನೆ ಮಾಡದೇ ಮಧುಮೇಹ, ಅಂಗಾಲು ಸಮಸ್ಯೆ, ಆನೆ ಕಾಲು, ಪಾದಗಳ ಊನ ಹಾಗೂ ಕಾಲಿನ ಉದ್ದದಲ್ಲಿ ವ್ಯತ್ಯಾಸ ಉಳ್ಳವರಿಗಾಗಿ ವಿಶೇಷ ಮೆಡಿಕೇಟೆಡ್ ಪಾದರಕ್ಷೆ ತಯಾರಿಸುವ ಮೂಲಕ ಅದೆಷ್ಟೋ ಜನ ನೆಮ್ಮದಿಯ ಹೆಜ್ಜೆ ಇಡುವಂತೆ ಮಾಡಿದ್ದಾರೆ.
ಆರ್ಟಿಸನ್ ಸಂಸ್ಥೆ ತಯಾರಿಸುತ್ತಿರುವ ಪಾದರಕ್ಷೆಗಳು ಮಧುಮೇಹಿಗಳು ಹಾಗೂ ಪಾದಗಳ ಸಮಸ್ಯೆ ಪೀಡಿತರಿಗೆ ವರದಾನವಾಗಿವೆ. ಮಧುಮೇಹಿಗಳಿಗೆ ಗ್ಯಾಂಗ್ರಿನ್ ಆಗುವ ಸಂಭವ ಹೆಚ್ಚು. ಪಾದಗಳ ಊನದ ಭಯ ನಿತ್ಯ ಕಾಡುತ್ತಲೇ ಇರುತ್ತದೆ. ಆದ್ದರಿಂದಲೇ ಪಾದಗಳ ಬಗ್ಗೆ ಜಾಗೃತಿವಹಿಸುವುದು, ಗಾಯವಾದರೂ ಅದರೊಟ್ಟಿಗೆ ಹೆಜ್ಜೆ ಹಾಕುವಂತೆ ಮಾಡುವ ನಿಟ್ಟಿನಲ್ಲಿ ವಿಶೇಷ ವಿನ್ಯಾಸದ ಪಾದರಕ್ಷೆಗಳನ್ನು ತಯಾರಿಸುವುದು ಆರ್ಟಿಸನ್ ಸಂಸ್ಥೆಯ ಮೂಲ ಉದ್ದೇಶ.
ಈಗಾಗಲೇ ೬ ಜನ ಕೆಲಸಗಾರರು ಜತನದಿಂದ ಪಾದರಕ್ಷೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಗ್ರಾಹಕರ ಪಾದಕ್ಕೆ ಅನುಗುಣವಾಗಿ ಚಪ್ಪಲಿ ತಯಾರಿಸುವ ಜೊತೆ ಜೊತೆಗೆ ವರ್ಷದ ಅವಧಿಯವರೆಗೆ ಅವುಗಳ ನಿರ್ವಹಣೆಯನ್ನೂ ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಗುಣಮಟ್ಟದ ಚರ್ಮವನ್ನು ಬಳಸಿ ತಯಾರಿಸುವ ಚಪ್ಪಲಿಗಳ ಬಾಳಿಕೆಯೂ ಹೆಚ್ಚು. ಇತರೆ ಕಂಪನಿಗಳಿಗೆ ಹೋಲಿಸಿದರೆ ಬೆಲೆಯೂ ಕಡಿಮೆ ಎಂಬುದು ಗ್ರಾಹಕರ ಅನಿಸಿಕೆ. ಹಲವು ಪ್ರತಿಷ್ಠಿತ ವೈದ್ಯರೇ ಇಲ್ಲಿಗೆ ಆಗಮಿಸಿ ಪಾದರಕ್ಷೆ ಮಾಡಿಸಿಕೊಳ್ಳುತ್ತಿರುವುದು ಗಮನಾರ್ಹ. ಈ ಉದ್ಯಮ, ಕೆಲಸದ ಬಗ್ಗೆ ಆಸಕ್ತಿ ಉಳ್ಳವರಿಗೂ ಕಲಿಸುವ ಮಹದಾಸೆ ನಿತ್ಯಾನಂದ ಶೆಟ್ಟಿ ಅವರದ್ದು.