For the best experience, open
https://m.samyuktakarnataka.in
on your mobile browser.

ಕಾಂಗ್ರೆಸ್‌ನ ಮೂರೂ ಅಭ್ಯರ್ಥಿಗಳು ಗೆಲ್ಲುತ್ತಾರೆ

05:14 PM Feb 27, 2024 IST | Samyukta Karnataka
ಕಾಂಗ್ರೆಸ್‌ನ ಮೂರೂ ಅಭ್ಯರ್ಥಿಗಳು ಗೆಲ್ಲುತ್ತಾರೆ

ಬೆಂಗಳೂರು: ಕಾಂಗ್ರೆಸ್‌ನ ಅಜಯ ಮಾಕನ್, ಚಂದ್ರಶೇಖರ್ ಹಾಗೂ ಸೈಯ್ಯದ್ ನಾಸಿರ್ ಹುಸೇನ್, ಮೂರೂ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ನಿಲ್ಲುವವರೆಲ್ಲಾ ಗೆಲ್ಲುತ್ತೇವೆ ಎಂದೇ ಹೇಳುವುದು. ಸೋಲುತ್ತೇವೆ ಎಂದು ಯಾರೂ ನಿಲ್ಲುವುದಿಲ್ಲ. ಆದರೆ ಅವರಿಗೆ ಎಷ್ಟು ಮತಗಳು ಬೇಕೋ ಅಷ್ಟು ಮತಗಳಿಲ್ಲ. ಅವರಿಗಿರುವುದೇ 19 ಮತಗಳು. ಅದರಿಂದ ಅವರು ಅಭ್ಯರ್ಥಿಯನ್ನು ನಿಲ್ಲಿಸಬೇಕಿರಲಿಲ್ಲ. ಆದರೂ ನಿಲ್ಲಿಸಿದ್ದಾರೆ. ನಮ್ಮ ಎಲ್ಲಾ ಶಾಸಕರು ನಿಷ್ಠೆಯಿಂದ ಕಾಂಗ್ರೆಸ್ ಪರವಾಗಿ ಮತ ಹಾಕಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುವುದು. ಜೆಡಿಎಸ್ ಐದನೇ ಅಭ್ಯರ್ಥಿಯನ್ನು ನಿಲ್ಲಿಸಿದ್ದರಿಂದ ನಾವೆಲ್ಲ ಒಟ್ಟಿಗೆ ಇದ್ದು ಮತ ಹಾಕಬೇಕಾಯಿತು. ನಮ್ಮ ಶಾಸಕರಿಗೆ ಆಸೆ ಆಮಿಷಗಳನ್ನು ಒಡ್ಡುವುದು ಬೆದರಿಕೆ ಹಾಕುವುದನ್ನು ಮಾಡುತ್ತಿದ್ದರು. ಅದಕ್ಕೆ ಎಲ್ಲರೂ ಒಟ್ಟಿಗಿದ್ದು ಮತ ಚಲಾಯಿಸಿದ್ದೇವೆ ಎಂದರು.
ಆತ್ಮ ಎಲ್ಲಿದೆ?
ಜೆಡಿಎಸ್‌ಗೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ. ಜೆಡಿಎಸ್ ಎಂದು ಹೆಸರಿಟ್ಟುಕೊಂಡು ಬಿಜೆಪಿ ಜೊತೆ ಸೇರಿರುವವರಿಗೆ ಆತ್ಮ ಎಲ್ಲಿದೆ? ಎಂದು ಪ್ರಶ್ನಿಸಿದರು.
ಆಮಿಷ ಒಡ್ಡುವ ಪ್ರಮೇಯ ಇಲ್ಲ
ನಮ್ಮ ಸರ್ಕಾರದ ಬಗ್ಗೆ ಒಳ್ಳೆ ಅಭಿಪ್ರಾಯ ಇರುವ ಬೇರೆ ಪಕ್ಷದ ಮತಗಳೂ ಬರಬಹುದು ಎಂದರು. ನಮಗೆ ಸಾಕಷ್ಟು ಮತಗಳಿರುವಾಗ ಆಸೆ ಆಮಿಷ ಒಡ್ಡುವ ಪ್ರಮೇಯ ಎಲ್ಲಿದೆ. ನಮಗೆ 136 ಮತಗಳಿವೆ. ಸ್ವತಂತ್ರ ಅಭ್ಯರ್ಥಿ ಲತಾ ಪ್ರಕಾಶ್, ಮಲ್ಲಿಕಾರ್ಜುನ ಹಾಗೂ ದರ್ಶನ್ ಪುಟ್ಟಣ್ಣಯ್ಯ, ಪುಟ್ಟಸ್ವಾಮಿ ಗೌಡ ಹಾಗೂ ಜನಾರ್ದನ ರೆಡ್ಡಿ ಇವರ ಮತಗಳಿದ್ದ ಮೇಲೆ ಆಸೆ ಆಮಿಷ ಒಡ್ಡುವ ಪ್ರಮೇಯ ಎಲ್ಲಿದೆ. ಆಮಿಷ, ಬೆದರಿಕೆ ಒಡ್ಡುತ್ತಿರುವವರು ಜೆಡಿಎಸ್ ಹಾಗೂ ಬಿಜೆಪಿಯವರು ಎಂದರು.