For the best experience, open
https://m.samyuktakarnataka.in
on your mobile browser.

ಜ್ಞಾನ, ಕರುಣೆ, ಸೇವೆಯ ತ್ರಿವೇಣಿ ಸಂಗಮ

01:15 AM Feb 21, 2024 IST | Samyukta Karnataka
ಜ್ಞಾನ  ಕರುಣೆ  ಸೇವೆಯ ತ್ರಿವೇಣಿ ಸಂಗಮ

ಸಂತ ಶಿರೋಮಣಿ ಆಚಾರ್ಯ ಶ್ರೀ ೧೦೮ ವಿದ್ಯಾಸಾಗರ್ ಮಹಾರಾಜ್ ಅವರು ಜಿನೈಕ್ಯರಾಗುವ ಮೂಲಕ ಸಮಾಧಿ ಸ್ಥಿತಿಯನ್ನು ತಲುಪಿದರು. ಅವರ ಜೀವಿತಕಾಲವು ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತ ಪರ್ವವಾಗಿತ್ತು. ಆಳವಾದ ಜ್ಞಾನ, ಅಮಿತ ಕರುಣೆಯ ಜೊತೆಗೆ ಮನುಕುಲದ ಏಳಿಗೆ ಕುರಿತಾಗಿ ಅಚಲ ಬದ್ಧತೆಗೆ ಅವರು ಸಾಕಾರಮೂರ್ತಿಯಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಅವರ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ, ಗೌರವ ನನ್ನದಾಗಿದೆ. ಅವರ ಆತ್ಮೀಯತೆ, ವಾತ್ಸಲ್ಯ ಮತ್ತು ಆಶೀರ್ವಾದಗಳು ಕೇವಲ ಸದ್ಭಾವನೆಯ ಸಂಕೇತಗಳಾಗಿರಲಿಲ್ಲ, ಅವು ಆಳವಾದ ಆಧ್ಯಾತ್ಮಿಕ ಶಕ್ತಿಯ ಸಂವಹನಗಳಾಗಿದ್ದವು.
ಆಚಾರ್ಯ ಅವರನ್ನು ಜ್ಞಾನ, ಕರುಣೆ ಮತ್ತು ಸೇವೆಯ ತ್ರಿವೇಣಿ ಎಂದು ಸದಾ ಸ್ಮರಿಸಲಾಗುತ್ತದೆ. ನೈಜ ತಪಸ್ವಿಯಾಗಿದ್ದ ಅವರ ಜೀವನವು ಭಗವಾನ್ ಮಹಾವೀರರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ. ಅವರ ಜೀವನವು ಜೈನ ಧರ್ಮದ ಮೂಲ ತತ್ವಗಳಿಗೆ ಉದಾಹರಣೆಯಾಗಿದೆ. ಜೈನ ಧರ್ಮದ ಆದರ್ಶಗಳನ್ನು ತಮ್ಮದೇ ಆದ ಕೃತಿಗಳು ಮತ್ತು ಬೋಧನೆಗಳ ಮೂಲಕ ಸಾಕಾರಗೊಳಿಸಿದರು. ಚಿಂತನೆ, ಮಾತು ಮತ್ತು ಕೃತಿಯಲ್ಲಿ ಪ್ರಾಮಾಣಿಕತೆ ಇರಬೇಕೆಂಬ ಜೈನ ಧರ್ಮದ ಮಹತ್ವವನ್ನು ಪ್ರತಿಬಿಂಬಿಸುವ ಮೂಲಕ ಸತ್ಯದ ಜೀವನವನ್ನು ನಡೆಸಿದರು. ಇಂದು ಜಗತ್ತು ಜೈನ ಧರ್ಮ ಮತ್ತು ಭಗವಾನ್ ಮಹಾವೀರರ ಜೀವನದಿಂದ ಸ್ಫೂರ್ತಿ ಪಡೆಯುತ್ತಿದೆ ಎಂದರೆ ಅದಕ್ಕೆ ಅವರಂತಹ ದಿಗ್ಗಜರೇ ಕಾರಣ. ಅವರ ಪ್ರಭಾವವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ನಾನಾ ಧರ್ಮಗಳು, ಪ್ರದೇಶಗಳು ಮತ್ತು ಸಂಸ್ಕೃತಿಗಳ ಜನರು ಅವರ ಬಳಿಗೆ ಬಂದರು. ಆಚಾರ್ಯರು ತಮ್ಮ ಜೀವನವಿಡೀ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ, ವಿಶೇಷವಾಗಿ ಯುವಕರಲ್ಲಿ ಆಧ್ಯಾತ್ಮಿಕತೆಯ ಸ್ಫುರಣೆಗಾಗಿ ದಣಿವರಿಯದೆ ಕೆಲಸ ಮಾಡಿದರು.
ಶಿಕ್ಷಣವು ಆಚಾರ್ಯರ ಹೃದಯಕ್ಕೆ ಬಹಳ ಆಪ್ತವಾದ ಕ್ಷೇತ್ರವಾಗಿತ್ತು. ವಿದ್ಯಾಧರನಿಂದ(ಅವರ ಬಾಲ್ಯದ ಹೆಸರು) ವಿದ್ಯಾಸಾಗರ ಆಗುವವರೆಗಿನ ಅವರ ಪ್ರಯಾಣದುದ್ದಕ್ಕೂ ಜ್ಞಾನವನ್ನು ಗಳಿಸುವ ಮತ್ತು ಜ್ಞಾನವನ್ನು ನೀಡುವ ಆಳವಾದ ಬದ್ಧತೆಯನ್ನು ಅವರು ಮುಂದುವರಿಸಿದರು. ಶಿಕ್ಷಣವು ನ್ಯಾಯಯುತ ಮತ್ತು ಪ್ರಬುದ್ಧ ಸಮಾಜದ ಮೂಲಾಧಾರವಾಗಿದೆ ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು. ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಸಾಧನವಾಗಿ ಜ್ಞಾನದ ಉದ್ದೇಶವನ್ನು ಅವರು ಪ್ರತಿಪಾದಿಸಿದರು, ಆ ಮೂಲಕ ಅರ್ಥಪೂರ್ಣ ಹಾಗೂ ಮನುಕುಲಕ್ಕೆ ಕೊಡುಗೆಯೊಂದಿಗೆ ಜೀವನವನ್ನು ನಡೆಸಲು ವ್ಯಕ್ತಿಗಳಿಗೆ ಅವರು ಅನುವು ಮಾಡಿಕೊಟ್ಟರು. ಅವರ ಬೋಧನೆಗಳು ನೈಜ ಜ್ಞಾನದ ಮಾರ್ಗಗಳಾಗಿ ಸ್ವಯಂ-ಅಧ್ಯಯನ ಮತ್ತು ಸ್ವಯಂ-ಅರಿವಿನ ಮಹತ್ವವನ್ನು ಒತ್ತಿಹೇಳಿದವು, ಅವರ ಅನುಯಾಯಿಗಳನ್ನು ಜೀವನ ಪರ್ಯಂತ ಕಲಿಕೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.

ಇದೇ ವೇಳೆ, ಯುವಕರು ಪಡೆಯುವ ಶಿಕ್ಷಣವು ಸಾಂಸ್ಕೃತಿಕ ತತ್ವಗಳಲ್ಲಿ ಬೇರೂರಿರಬೇಕು ಎಂದು ಸಂತ ಶಿರೋಮಣಿ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಜೀ ಬಯಸಿದ್ದರು. ನಾವು ನಮ್ಮ ಹಿಂದಿನ ಕಲಿಕೆಗಳಿಂದ ದೂರ ಉಳಿದಿದ್ದರಿಂದಲೇ ನೀರಿನ ಕೊರತೆಯಂತಹ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗಲಿಲ್ಲ ಎಂದು ಹೇಳುತ್ತಿದ್ದರು. ಸಮಗ್ರ ಶಿಕ್ಷಣವೆಂಬುದು ಕೌಶಲ್ಯ ಮತ್ತು ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ನಂಬಿದ್ದರು. ಭಾರತದ ಭಾಷಾ ವೈವಿಧ್ಯತೆಯ ಬಗ್ಗೆ ಅವರು ಅಪಾರ ಹೆಮ್ಮೆ ಹೊಂದಿದ್ದರು ಮತ್ತು ಭಾರತೀಯ ಭಾಷೆಗಳನ್ನು ಕಲಿಯಲು ಯುವಕರನ್ನು ಪ್ರೋತ್ಸಾಹಿಸಿದರು.
ಆಚಾರ್ಯರು ಸ್ವತಃ ಸಂಸ್ಕೃತ, ಪ್ರಾಕೃತ ಮತ್ತು ಹಿಂದಿ ಭಾಷೆಗಳಲ್ಲಿ ಬಹಳ ವ್ಯಾಪಕವಾಗಿ ಬರೆದಿದ್ದಾರೆ. ಸಂತರಾಗಿ ಅವರು ಎಷ್ಟು ಔನತ್ಯಕ್ಕೆ ತಲುಪಿದ್ದರು ಮತ್ತು ಆದರೂ ಅವರು ಎಷ್ಟು ವಿನಯವಂತರಾಗಿದ್ದರು ಎಂಬುದನ್ನು ಅವರ ಅಪ್ರತಿಮ ಕೃತಿಯಾದ ಮೂಕ್ಮತಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ತಮ್ಮ ಕೃತಿಗಳ ಮೂಲಕ ಅವರು ದೀನದಲಿತರಿಗೆ ಧ್ವನಿ ನೀಡಿದರು. ಆರೋಗ್ಯ ಕ್ಷೇತ್ರದಲ್ಲೂ ಅವರ ಕೊಡುಗೆಗಳು ಪರಿವರ್ತನಾತ್ಮಕವಾಗಿವೆ.
ಜನರು ತಮ್ಮ ವಿಚಾರದಲ್ಲಿ, ತಮ್ಮ ಕುಟುಂಬದ ವಿಚಾರದಲ್ಲಿ, ಸಮಾಜ ಮತ್ತು ದೇಶದ ವಿಚಾರದಲ್ಲಿ ತಾವು ನಿರ್ವಹಿಸಬೇಕಾಗಿರುವ ಕರ್ತವ್ಯಗಳ ಬಗ್ಗೆ ಹೊಂದಿರುವ ಬದ್ಧತೆಯ ಅಡಿಪಾಯದ ಮೇಲೆ ಬಲವಾದ ರಾಷ್ಟç ನಿರ್ಮಾಣವಾಗುತ್ತದೆ ಎಂದು ನಂಬಿದ್ದರು. ಪ್ರಾಮಾಣಿಕತೆ, ಸಮಗ್ರತೆ ಮತ್ತು ಸ್ವಾವಲಂಬನೆಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸಿದರು. ಇದು ನ್ಯಾಯಯುತ, ಕರುಣಾಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜದ ಸೃಷ್ಟಿಗೆ ಅತ್ಯಗತ್ಯ ಎಂದು ಅರಿತಿದ್ದರು.
ಆರ್ಥಿಕತೆಯಲ್ಲಿ ಕೃಷಿ ವಹಿಸಬಹುದಾದ ಮಹತ್ವದ ಪಾತ್ರವನ್ನು ಅವರು ಮನಗಂಡಿದ್ದರು. ಕೃಷಿಯನ್ನು ಆಧುನಿಕ ಮತ್ತು ಸುಸ್ಥಿರವಾಗಿಸಲು ಒತ್ತು ನೀಡಿದರು. ಜೈಲಿನಲ್ಲಿರುವ ಕೈದಿಗಳನ್ನು ಸುಧಾರಿಸುವ ನಿಟ್ಟಿನಲ್ಲೂ ಅವರ ಕೆಲಸವು ಗಮನಾರ್ಹವಾದುದು.
ಸಂತರು ಮತ್ತು ಸಮಾಜ ಸುಧಾರಕರ ಈ ಶ್ರೇಷ್ಠ ಪರಂಪರೆಯಲ್ಲಿ ಪೂಜ್ಯ ಆಚಾರ್ಯ ಜೀ ಅವರು ಪರಮೋಚ್ಛ ವ್ಯಕ್ತಿಯಾಗಿ ನಿಂತಿದ್ದಾರೆ. ಅವರು ಏನೇ ಮಾಡಿದರೂ, ಅವರು ವರ್ತಮಾನಕ್ಕಾಗಿ ಮಾತ್ರವಲ್ಲ, ಭವಿಷ್ಯಕ್ಕಾಗಿಯೂ ಮಾಡಿದರು.
ಕಳೆದ ವರ್ಷ ನವಂಬರ್‌ನಲ್ಲಿ ಛತ್ತೀಸ್‌ಗಢದ ಡೊಂಗರಗಢದಲ್ಲಿರುವ ಚಂದ್ರಗಿರಿ ಜೈನ ಮಂದಿರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಈ ಭೇಟಿ ಆಚಾರ್ಯಜೀ ಅವರೊಂದಿಗಿನ ನನ್ನ ಕೊನೆಯ ಭೇಟಿಯಾಗಲಿದೆ ಎಂದು ಆಗ ತಿಳಿದಿರಲಿಲ್ಲ. ಆ ಕ್ಷಣಗಳು ತುಂಬಾ ವಿಶೇಷವಾಗಿದ್ದವು. ದೇಶವು ಸಾಗುತ್ತಿರುವ ದಿಕ್ಕು ಮತ್ತು ವಿಶ್ವ ವೇದಿಕೆಯಲ್ಲಿ ಭಾರತ ಪಡೆಯುತ್ತಿರುವ ಗೌರವದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.
ಸಂತ ಶಿರೋಮಣಿ ಆಚಾರ್ಯ ಶ್ರೀ ೧೦೮ ವಿದ್ಯಾಸಾಗರ್ ಮಹಾರಾಜ್ ಜೀ ಅವರನ್ನು ಬಲ್ಲ ಮತ್ತು ಅವರ ಬೋಧನೆಗಳು ಹಾಗೂ ಅವರ ಜೀವನದ ಸ್ಪರ್ಶಕ್ಕೆ ಒಳಗಾದ ಎಲ್ಲರಲ್ಲೂ, ಆಚಾರ್ಯ ಜೀ ಅವರ ಅಗಲಿಕೆಯಿಂದ ಉಂಟಾಗಿರುವ ಶೂನ್ಯತೆಯು ಆಳವಾಗಿ ಅನುಭವಕ್ಕೆ ಬರುತ್ತದೆ.
ಅವರ ಸ್ಮರಣೆಯನ್ನು ಗೌರವಿಸುವ ಮೂಲಕ, ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಸಾಕಾರಗೊಳಿಸಲು ನಾವು ಬದ್ಧರಾಗಿದ್ದೇವೆ. ಆ ಮೂಲಕ, ನಾವು ಒಬ್ಬ ಮಹಾನ್ ಜೀವಿಯ ಆತ್ಮಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ನಮ್ಮ ದೇಶ ಮತ್ತು ಜನರಿಗಾಗಿ ಅವರ ಧ್ಯೇಯವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ.