For the best experience, open
https://m.samyuktakarnataka.in
on your mobile browser.

`ಹೆಬ್ಬಾಳಕರ ಪಂಚಮಸಾಲಿ ಅಲ್ಲ'

09:52 PM Apr 08, 2024 IST | Samyukta Karnataka
 ಹೆಬ್ಬಾಳಕರ ಪಂಚಮಸಾಲಿ ಅಲ್ಲ

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಅನಗತ್ಯವಾಗಿ ಪಂಚಮಸಾಲಿ ಜಾತಿ ರಾಜಕೀಯ ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪಂಚಮಸಾಲಿ ಅಲ್ಲ. ಅವರು ಬಣಜಿಗರು ಎಂದು ಮಾಜಿ ಸಚಿವ ಮುರಿಗೇಶ ನಿರಾಣಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಸಮಾಜದವರಲ್ಲ, ಅವರು ವೀರಶೈವ ಲಿಂಗಾಯತ ಬಣಜಿಗರು. ಲಕ್ಷ್ಮೀ ಅವರ ಗಂಡನ ಮನೆಯವರು ಬಣಜಿಗರು. ಪಂಚಮಸಾಲಿ ಮತಗಳನ್ನು ಪಡೆಯಲು ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ನಿರಾಣಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೊರಗಿನವರು ಎನ್ನುವ ವಾದ ಮಂಡಿಸುತ್ತಿರುವ ಹೆಬ್ಬಾಳಕರಗೆ ಮುರುಗೇಶ ನಿರಾಣಿ ಎದಿರೇಟು ನೀಡಿದರು, ಲಕ್ಷ್ಮೀ ಹೆಬ್ಬಾಳ್ಕರ್ ಅಮ್ಮಾ, ಲಕ್ಷ್ಮೀ ಅಕ್ಕಾ ಎಂದು ಪ್ರಸ್ತಾಪಿಸಿದ ನಿರಾಣಿ, ನೀವೆ ಮೊದಲು ಬೆಳಗಾವಿಯವರಲ್ಲ. ನೀವು ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದವರು. ಅಲ್ಲಿಂದ ಬಂದು ನೀವು ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೀರಿ ಎಂದು ಹೇಳಿದರು. ಆದರೆ ಅದಕ್ಕೆ ಬಿಜೆಪಿಯವರು ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ಸಚಿವೆ ಹೆಬ್ಬಾಳ್ಕರ್ ಅವರು ಕಿತ್ತೂರು ಚನ್ನಮ್ಮನಿಗೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಹೋರಾಟದಲ್ಲಿ ಹೆಬ್ಬಾಳ್ಕರ್ ಅವರು ಬಿಜೆಪಿಯ ಸರಕಾರದಿಂದ ಮೀಸಲಾತಿ ಕೊಡಿಸಿದರೆ ನಮ್ಮ ಸಮಾಜದವರನ್ನು ಕರೆದುಕೊಂಡು ಬಂದು ಬೆಳಗಾವಿ ಕುಂದಾ ಕೊಡುವುದಾಗಿ ಹೇಳಿದ್ದರು. ಆದರೆ ನಮ್ಮ ಸರಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕೊಡಿಸಿದರೆ ನೀವು ಒಂದು ಜೊತೆ ಬಂಗಾರದ ಬಳೆ ಕೊಡಿಸಬೇಕು ಎಂದಿದ್ದರು.