ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ತುಮಕೂರಿನಲ್ಲಿ ಔದ್ಯೋಗಿಕ ಕ್ರಾಂತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

08:54 PM Feb 06, 2023 IST | Samyukta Karnataka

ತುಮಕೂರು: ಕರ್ನಾಟಕದ ಇತಿಹಾಸದಲ್ಲಿ ತುಮಕೂರಿನಲ್ಲಿ ಔದ್ಯೋಗಿಕ ಕ್ರಾಂತಿಯಾಗಿದ್ದು, ಹೆಚ್.ಎ.ಎಲ್ ಘಟಕದಿಂದ ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಗುಬ್ಬಿ ತಾಲ್ಲೂಕಿನ ಬಿದರೆಹಳ್ಳಿ ಕಾವಲ್ ಗ್ರಾಮದ ಹೆಚ್.ಎ.ಎಲ್ ಘಟಕದಲ್ಲಿ ಆಯೋಜಿಸಿರುವ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆ, ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ಕಾಮಗಾರಿ ಹಾಗೂ ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆ ಹಂತ 2 ರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯರೊಂದಿಗೆ ಪಾಲ್ಗೊಂಡು ಮಾತನಾಡಿದರು.
ಸ್ವತಂತ್ರಪೂರ್ವದ ಸಂಸ್ಥೆಯಾದ ಹೆಚ್.ಎ.ಎಲ್ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಪಿ. ಎಸ್.ಯು ಗಳ ಪೈಕಿ ಅಗ್ರಮಾನ್ಯ ಸಂಸ್ಥೆಯಾಗಿದ್ದು, ಇಡೀ ದೇಶದಲ್ಲಿಯೇ ಅತ್ಯಂತ ಶ್ರೇಷ್ಠ ಏರೋಸ್ಪೇಸ್ ಕೈಗಾರಿಕೆಯಾಗಿದೆ. ಈ ಸಂಸ್ಥೆ ತುಮಕೂರು ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಉತ್ಪಾದನೆ ಮಾಡುವ ಘಟಕವನ್ನು ತೆರೆದಿದೆ. ಮೂರು ವರ್ಷಗಳ ಹಿಂದೆ ನಮ್ಮ ಪ್ರಧಾನಿಗಳೇ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು, ಇಂದು ಅವರೇ ಉದ್ಘಾಟನೆಯನ್ನೂ ಮಾಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ವೇಗಕ್ಕೆ ಶಕ್ತಿ ನೀಡಿದ್ದಾರೆ. ಅವರೇ ಅಡಿಗಲ್ಲು ಹಾಕಿ ಅವರೇ ಉದ್ಘಾಟಿಸಿರುವುದು ಅಭೂತಪೂರ್ವ ಘಟನೆ. ಆತ್ಮನಿರ್ಭರ್ ಭಾರತದಲ್ಲಿ ಮುಂದಿನ ದಿನಗಳಲ್ಲಿ ಹೆವಿಡ್ಯೂಟಿ ರಕ್ಷಣಾ ಹೆಲಿಕಾಪ್ಟರ್ ತಯಾರಿಸುವ ಸಾಮಥ್ರ್ಯ ತುಮಕೂರಿನ ಗುಬ್ಬಿ ಘಟಕಕ್ಕೆ ಇದೆ. 120 ಕ್ಕಿಂತ ಹೆಚ್ಚು ಪೂರಕ ಘಟಕಗಳಿಗೆ ತಮ್ಮ ಉತ್ಪನ್ನಗಳನ್ನು ತಯಾರಿಸಲು ಅವಕಾಶ ದೊರೆಯಲಿದೆ ಎಂದರು.
ಅಸಾಧ್ಯವಾಗಿದ್ದು, ಸಾಧ್ಯವಾಗಿದೆ
ರಕ್ಷಣಾ ವಲಯದಲ್ಲಿ ಶೇ. 90 ಷ್ಟು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಈಗ ಶೇ 60 ರಷ್ಟನ್ನು ನಾವೇ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಯಾವುದು ಇದುವರೆಗೂ ಅಸಾಧ್ಯವಾಗಿತ್ತೋ, ಅದನ್ನು ಪ್ರಧಾನಿಗಳು ಹಾಗೂ ರಕ್ಷಣಾ ಸಂಸ್ಥೆ ಸಾಧ್ಯವಾಗಿಸಿದ್ದಾರೆ ಎಂದರು.
2024 ರ ಅಂತ್ಯದೊಳಗೆ ಎಲ್ಲಾ ಮನೆಗಳಿಗೆ ನೀರು
ಜಲ್ ಜೀವನ್ ಮಿಷನ್ ಅಡಿ ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರಿನ ಮನೆ ಮನೆಗೆ ಮೂರು ಲಕ್ಷಕ್ಕಿಂತ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಜಲ್ ಜೀವನ್ ಮಿಷನ್ ಕೂಡ ಪ್ರಧಾನ ಮಂತ್ರಿಗಳ ಕನಸಿನ ಯೋಜನೆ. ದೇಶದಲ್ಲಿ 10 ಕೋಟಿ ಗಿಂತ ಹೆಚ್ಚು ಮನೆಗಳಿಗೆ ನೀರು ಒದಗಿಸಲಾಗಿದೆ. ಕರ್ನಾಟಕದಲ್ಲಿ ಈ ಮೂರು ವರ್ಷಗಳಲ್ಲಿ 30 ಲಕ್ಷ ಮನೆಗಳಿಗೆ ಜಲ್ ಜೀವನ್ ಮಿಷನ್ ಅಡಿಯಲ್ಲಿ ನೀರು ಕೊಟ್ಟು ದಾಖಲೆ ಸೃಷ್ಟಿಸಿದ್ದೇವೆ. 2024 ರ ಅಂತ್ಯದೊಳಗೆ ಎಲ್ಲಾ ಮನೆಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಉದ್ದೇಶವಿದೆ. ಡಬಲ್ ಇಂಜಿನ್ ಸರ್ಕಾರ ಇದ್ದುದರಿಂದ ಜಲ್ ಜೀವನ್ ಮಿಷ್ ಅಡಿಯಲ್ಲಿ ಈ ಕಾರ್ಯಸಾಧ್ಯವಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸಹಕಾರ ನೀಡುತ್ತಿದೆ ಎಂದರು.
ಸಾವಿರಾರು ಜನರಿಗೆ ಉದ್ಯೋಗ
ಬೆಂಗಳೂರು- ಚನ್ನೈ-ಕಾರಿಡಾರ್ ನಲ್ಲಿ ಇಂಡಸ್ಟ್ರಿಯಲ್ ಟೌನ್‍ಶಿಪ್ ನಿರ್ಮಾಣವಾಗುತ್ತಿದ್ದು. ರಾಜ್ಯ ಸರ್ಕಾರ ಅದಕ್ಕೆ 800 ಎಕರೆ ಜಮೀನು ಒದಗಿಸಿದೆ. 574 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ಇದು ವಿಶೇಷವಾದ ಉತ್ಪಾದನಾ ಘಟಕವಾದ ಮಲ್ಟಿ ಮೋಡ್ ಅಪ್ರೋಚ್‍ವುಳ್ಳ ಕೈಗಾರಿಕೆಯಾಗುತ್ತಿದ್ದು, ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ. ತುಮಕೂರು ಬೆಂಗಳೂರಿನ ನಂತರ ಔದ್ಯೋಗಿಕ, ಶೈಕ್ಷಣಿಕ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕರ್ತವ್ಯ ಕಾಲ
ಅಮೃತ ಕಾಲದಲ್ಲಿ ಜಿ -20 ದೇಶಗಳ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ನರೇಂದ್ರ ಮೋದಿಯವರ ನಾಯಕತ್ವಕ್ಕೆ ವಿಶ್ವಮಾನ್ಯತೆ ದೊರೆಯುತ್ತಿದೆ ಎನ್ನುವುದು ಅವರಿಗೆ ದೊರೆತಿರುವ ಜಿ-20 ದೇಶಗಳ ಅಧ್ಯಕ್ಷ ಸ್ಥಾನವೇ ಸಾಕ್ಷಿ ಎಂದರು. ಅದರಡಿ ಒಂದೇ ಕುಟುಂಬ, ಒಂದೇ ಜಗತ್ತು, ಒಂದೇ ವಿಶ್ವ ಎಂಬ ಘೋಷಣೆಯಿಂದ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಶಕ್ತಿ ಭಾರತ ದೇಶಕ್ಕೆ ದೊರಕಿದೆ; ಅಮೃತ ಕಾಲವನ್ನು ಕರ್ತವ್ಯ ಕಾಲವೆಂದು ಹೇಳಿರುವ ಪ್ರಧಾನಿಗಳು, ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಭಾರತಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷಗಳಾದ ಸಂದರ್ಭದಲ್ಲಿ ಭಾರತ ನಂಬರ್ ಇನ್ ದೇಶವಾಗಬೇಕಾದರೆ ಕರ್ತವ್ಯ ಕಾಲದಲ್ಲಿ ಕರ್ನಾಟಕ ತನ್ನ ಕರ್ತವ್ಯವನ್ನು ಮಾಡಿ ನವ ಭಾರತಕ್ಕೆ ನವ ಕರ್ನಾಟಕವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದರು. ಡಬಲ್ ಇಂಜಿನ್ ಸರ್ಕಾರ ಅತ್ಯಂತ ವೇಗದಲ್ಲಿ ಪ್ರಗತಿ ಮಾಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.

Next Article